ಏಷ್ಯಾ 2ನೇ ಅತಿದೊಡ್ಡ ಕೆರೆ ಉಳಿಸಲು 90 ಗ್ರಾಮಸ್ಥರ ಆಗ್ರಹ
Recommended Video
ದಾವಣಗೆರೆ, ಜೂನ್ 03: ಏಷ್ಯಾದ 2ನೇ ಅತಿದೊಡ್ಡ ಕೆರೆ ಎಂದೆನಿಸಿಕೊಂಡಿರುವ ಶಾಂತಿಸಾಗರ(ಸೂಳೆಕೆರೆ) ಒತ್ತುವರಿ ಸಮಸ್ಯೆಯಿಂದ ಬಳಲುತ್ತಿದೆ. ಕೆರೆಗೆ ರಕ್ಷಣೆ ಇಲ್ಲದ್ದಂತಾಗಿದೆ. ಸತತವಾಗಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಕೆರೆ ಆಶ್ರಯಿಸಿರುವ ಸುತ್ತ ಮುತ್ತಲ 90ಕ್ಕೂ ಅಧಿಕ ಗ್ರಾಮದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯರ ನೇತೃತ್ವದಲ್ಲಿ ಖಡ್ಗ ಸಂಘದವರು ಏಪ್ರಿಲ್ 26ರಂದು ಜಿಲ್ಲಾಧಿಕಾರಿ ಡಿಎಸ್ ರಮೇಶ್ ಅವರಿಗೆ ದೂರು ದಾಖಲಿಸಿದ್ದಾರೆ. ಒತ್ತುವರಿ ತಡೆಯಬೇಕು, ಕೆರೆ ಸಂರಕ್ಷಿಸಬೇಕು, ಕೆರೆ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸಲು ಸೂಕ್ತ ಯೋಜನೆ ಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.
ಸುಮಾರು 8 ಕಿ.ಮೀ ಉದ್ದ, 4 ಕಿಮೀ ಅಗಲವಿರುವ ಸೂಳೆಕೆರೆ ಸುಮಾರು 61 ಚದಕ ಕಿ.ಮೀ ಇದೆ. ಈ ಮೊದಲು 6650 ಎಕರೆಗೆ ವ್ಯಾಪಿಸಿದ ಕೆರೆಯ 1650 ಎಕರೆ ಅಕ್ರಮವಾಗಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವೈಜ್ಞಾನಿಕವಾಗಿ ಹೂಳು ತೆಗೆಸಿದರೆ, 4 ಟಿಎಂಸಿಗೂ ಅಧಿಕ ನೀರು ರೈತರಿಗೆ, ಕುಡಿಯುವ ನೀರಿಗೆ ಪಡೆಯಬಹುದಾಗಿದೆ. ವರ್ಷ ಪೂರ್ತಿ ನೀರು ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.
ಕೆರೆ ಉಳಿಸಿ ಅಭಿಯಾನದಡಿಯಲ್ಲಿ ಚನ್ನಗಿರಿ ತಾಲೂಕಿನಲ್ಲಿ 90ಕ್ಕೂ ಅಧಿಕ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗಿದೆ. ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.