ಸುಪ್ರೀಂ ಅಂಗಳಕ್ಕೆ 'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ
ದಾವಣಗೆರೆ, ಡಿಸೆಂಬರ್ 16: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕರ್ನಾಟಕ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರ ಬಗ್ಗೆ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮುಂದುವರೆಯಲಿದ್ದು, ಸುಪ್ರೀಂಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ದಾವಣಗೆರೆಯಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಕೇಂದ್ರ ಸರ್ಕಾರದ ಧಾರ್ಮಿಕ ಖಾತೆ ಸಚಿವರು ನಮಗೆ ಭರವಸೆ ನೀಡಿದ್ದಾರೆ, ಚಳಿಗಾಲದ ಅಧಿವೇಶನದಲ್ಲಿ ತಿರಸ್ಕಾರದ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸು ತಿರಸ್ಕಾರ, ಹೈಕೋರ್ಟಿಗೆ ಮಾಹಿತಿ
ಜೈನರು ಸುಪ್ರೀಂಕೋರ್ಟ್ ಮೊರೆ ಹೋಗಿ ನ್ಯಾಯ ಪಡೆದುಕೊಂಡಂತೆ ನಾವು ಪಡೆದುಕೊಳ್ಳುತ್ತೇವೆ. ನಮ್ಮ ಹೋರಾಟ ನಿಲ್ಲಲ್ಲ. ಬದಲಿಗೆ ನಮ್ಮ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಸುಪ್ರೀಂಕೋಟ್ನಲ್ಲಿ ಕೇಳುತ್ತೇವೆ. ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ದನಿಯೆತ್ತಬೇಕಿದೆ. ಈ ಬಗ್ಗೆ ಸರಿಯಾದ ನಿರ್ಣಯ ಹೊರ ಬರದಿದ್ದರೆ, ನಮ್ಮ ಹೋರಾಟ ದೆಹಲಿಯಲ್ಲೂ ಮುಂದುವರೆಯಲಿದೆ ಎಂದರು.
12ನೇ ಶತಮಾನದಲ್ಲಿ ಸ್ಥಾಪನೆಯಾದ ಹೊಸ ಧರ್ಮ
ಬಸವಣ್ಣನವರು 12ನೇ ಶತಮಾನದಲ್ಲಿಯೇ ಹೊಸ ಧರ್ಮವನ್ನು ಸ್ಥಾಪಿಸಿದರು. ಆದರೆ, ವೈದಿಕ ಧರ್ಮ ಪ್ರಭಾವದಿಂದಾಗಿ ಲಿಂಗಾಯತರು ವಂಚನೆಗೊಳಗಾದರು. ವೈದಿಕ ಸಾಹಿತ್ಯ, ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಪ್ರಭಾವದಿಂದ ಲಿಂಗಾಯತರು ಶೋಷಣೆಗೆ ಒಳಗಾದರು. 1907ರಲ್ಲಿಯೇ ಲಿಂಗಾಯತ ಧರ್ಮವಾಗಬೇಕೆಂಬ ತೀವ್ರತರಹದ ಚರ್ಚೆದಾವಣಗೆರೆಯಲ್ಲಿ ನಡೆಯಿತು. 1941 ರಲ್ಲಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಯಿತು ಎಂದರು.
ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು
ಬಸವಣ್ಣನವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗೆ ಇನ್ನೂ ಹೆಚ್ಚಿನ ಪ್ರಮಾಣದ ಹೋರಾಟ ಅಗತ್ಯವೆಂದು ಪ್ರತಿಪಾದಿಸಿದರು. ಇಷ್ಟು ದಿನ ಲಿಂಗಾಯತರು ಕತ್ತಲಿನಲ್ಲಿದ್ದರು. ಈಗ ಬಸವ ಕಿರಣವೆಂಬ ಬೆಳಕು ಕತ್ತಲನ್ನು ಹೊಡೆದೊಡಿಸಲು ಬರುತ್ತಿದೆ. ಬಸವ ಪಥವನ್ನು ಅನುಸರಿಸಬೇಕು ಎಂದು ಹೇಳಿದರು.
ಲಿಂಗಾಯತ ಧರ್ಮಕ್ಕಾಗಿ ಹೋರಾಟ
2017 ಮತ್ತು 2018 ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ರಾಜ್ಯದಾದ್ಯಂತ ಬಿರುಸಿನಿಂದ ನಡೆಯಿತು. ಕೆಲವು ರಾಜಕಾರಣಿಗಳು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಆಪಾದಿಸಿದರೂ ನಾವು ಧರ್ಮವನ್ನು ಒಡೆಯಲು ಎಂದೂ ಪ್ರಯತ್ನಿಸಿಲ್ಲ. ಹಿಂದೆ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟಕ್ಕೆ ಮುಂದುವರಿಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಯುಪಿಎ ಸರ್ಕಾರ ಕೂಡಾ ತಿರಸ್ಕರಿಸಿತ್ತು
2013 ರಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಿದ್ದಾಗ, ನವೆಂಬರ್ 14, 2013 ರಲ್ಲಿ ಕರ್ನಾಟಕ ಸರ್ಕಾರಕ್ಕೆ ಭಾರತೀಯ ರಿಜಿಸ್ಟ್ರಾರ್ ಜನರಲ್ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವೀರಶೈವ ಮತ್ತು ಲಿಂಗಾಯತಗಳೆರಡೂ ಹಿಂದು ಧರ್ಮದ ಪಂಥಗಳೇ ಹೊರತು ಅವು ಸ್ವತಂತ್ರ ಧರ್ಮವಲ್ಲ ಎಂದು ಹೇಳಿದ್ದರು. ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಈ ಸ್ವತಂತ್ರ ಧರ್ಮದ ಪರಿಕಲ್ಪನೆಯನ್ನು ಸಾರಾಸಗಟಾಗಿ ನಿರಾಕರಿಸಿತ್ತು.
ಪರಿಶಿಷ್ಟ ಜಾತಿಯ ಜನರಿಗೆ ನಷ್ಟ
ಪರಿಶಿಷ್ಟ ಜಾತಿಯ ಜನರಿಗೆ ನಷ್ಟವಾಗಲಿದೆ ಎಂದು ಆಗಿನ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಹೇಳಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮವಾದರೆ ವೀರಶೈವ ಮತ್ತು ಲಿಂಗಾಯತ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಜನರು ತಮಗೆ ಈಗಾಗಲೇ ಸಿಗುತ್ತಿರುವ ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಲಿಂಗಾಯತರು ಅಲ್ಪಸಂಖ್ಯಾತ ವಿಭಾಗದಲ್ಲಿ ಬರುವುದರಿಂದ, ಅಲ್ಪಸಂಖ್ಯಾತರಿಗೆ ಭಾರತ ಸರ್ಕಾರ ಏನೆಲ್ಲ ಸೌಲಭ್ಯ ನೀಡುತ್ತದೆಯೋ ಆ ಸೌಲಭ್ಯವನ್ನು ಲಿಂಗಾಯತ ಧರ್ಮದ ಎಲ್ಲರೂ ಪಡೆಯುತ್ತಾರೆ. ಆದ್ದರಿಂದ ಎಸ್ಸಿಗಳಿಗೆ ಪ್ರತ್ಯೇಕ ಮೀಸಲಾತಿ ಇರುವುದಿಲ್ಲ. ಇದರಿಂದ ನಷ್ಟವಾಗುವುದು ಎಸ್ಸಿಗಳಿಗೇ. ಈ ಕಾರಣಕ್ಕಾಗಿಯೇ ಯುಪಿಎ ಸರ್ಕಾರ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡಲು ಹಿಂದೇಟು ಹಾಕಿತ್ತು.