ಈದ್ ಮಿಲಾದ್ ಶಾಂತಿಸಭೆ ನಿಯಮ ಉಲ್ಲಂಘನೆ; ದಾವಣಗೆರೆಯಲ್ಲಿ ಲಾಠಿ ಚಾರ್ಜ್
ದಾವಣಗೆರೆ, ನವೆಂಬರ್ 9: ಶಾಂತಿ ಸಭೆ ನಿರ್ಧಾರಗಳನ್ನು ಉಲ್ಲಂಘಿಸಿ ಈದ್ ಮಿಲಾದ್ ಹಬ್ಬಕ್ಕೆ ಬಾವುಟ, ಬಂಟಿಂಗ್ಸ್, ತೋರಣ ಕಟ್ಟಿದ್ದನ್ನು ತೆರವುಗೊಳಿಸುವ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ ಗಲಾಟೆ ನಡೆದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರದಲ್ಲಿ ನಡೆದಿದೆ.
ಈದ್ ಮಿಲಾದ್ ಹಬ್ಬದ ಅಂಗವಾಗಿ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ಒಂದು ಕೋಮಿಗೆ ಸೇರಿದ ಬಾವುಟ, ಬಂಟಿಂಗ್ ಕಟ್ಟಲಾಗಿತ್ತು. ಈ ರಸ್ತೆಯಲ್ಲಿ ಬಾವುಟ, ಬಂಟಿಂಗ್ಸ್, ತೋರಣ ಕಟ್ಟದಂತೆ ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೂ, ಶಾಂತಿ ಸಭೆಯ ನಿರ್ಧಾರಗಳನ್ನು ಉಲ್ಲಂಘಿಸಿ, ರಾತ್ರೋರಾತ್ರಿ ಬಾವುಟ, ಬಂಟಿಂಗ್ಸ್ ಕಟ್ಟಿದ್ದು ಇನ್ನೊಂದು ಕೋಮಿನ ಜನರನ್ನು ಕೆರಳಿಸಿತ್ತು.
ಸಿಎಂ ಯಡಿಯೂರಪ್ಪ ಮುಂದೆಯೇ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್
ಮಾಜಿ ಶಾಸಕ ಬಿ.ಪಿ, ಹರೀಶ್ ನೇತೃತ್ವದಲ್ಲಿ ಹಿಂದು ಪರ ಸಂಘಟನೆಗಳ ಮುಖಂಡರು, ದೇವಸ್ಥಾನ ರಸ್ತೆಯಲ್ಲಿನ ಬಂಟಿಂಗ್ಸ್ ತೆರವಿಗೆ ಮುಂದಾದರು. ಅಲ್ಲಿಗೆ ಆಗಮಿಸಿದ ಹಾಲಿ ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಇನ್ನೊಂದು ಕೋಮಿನ ಜನರು ಇದನ್ನು ವಿರೋಧಿಸಿದರು. ಹಾಲಿ ಹಾಗೂ ಮಾಜಿ ಶಾಸಕರ ಮಧ್ಯೆ ವಾಗ್ವಾದ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ವಿಫಲವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಚ್ ನಡೆಸಿ, ಜನರ ಗುಂಪನ್ನು ಚದುರಿಸಿದರು. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ನಗರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರು.
ಶಾಸಕ ತಿಪ್ಪಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಚಿತ್ರದುರ್ಗದಲ್ಲಿ ಆಕ್ರೋಶ, ಲಾಠಿ ಚಾರ್ಜ್
ಇಂದಿನಿಂದ ನಾಳೆ ಬೆಳಿಗ್ಗೆ 6ರವರೆಗೆ ಸೆಕ್ಷನ್ 144 ಸೆಕ್ಷನ್ ಜಾರಿಯಲ್ಲಿರುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಎಸ್ ಪಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಎರಡು ಕೋಮಿನ ಮುಖಂಡರ ಜೊತೆ ಶಾಂತಿ ಸಭೆ ನಡೆಸಿದ್ದರು. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸ್ಥಳದಲ್ಲಿ ಎಸ್ಪಿ ಹನಮಂತರಾಯ, ಎಎಸ್ಪಿ ಎಂ.ರಾಜೀವ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.