ದಾವಣಗೆರೆಯ ಪ್ರತಿಷ್ಠಿತ ಹೋಟೆಲ್ ಮೇಲೆ ಪೊಲೀಸರ ದಾಳಿ
ದಾವಣಗೆರೆ, ಆಗಸ್ಟ್, 07: ದಾವಣಗೆರೆಯ ಪಕ್ಕದ ಮಿಟ್ಲಕಟ್ಟೆ ಗ್ರಾಮದಲ್ಲಿರುವ ಪ್ರತಿಷ್ಠಿತ 'ದಿ ಸ್ಟೇಜ್' ಹೋಟೆಲ್ನಲ್ಲಿ ತಡರಾತ್ರಿವರೆಗೂ ಯುವಕ, ಯುವತಿಯರು ಮೋಜು ಮಸ್ತಿ ಮಾಡಿದ್ದು, ಪೊಲೀಸರು ಆ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಶನಿವಾರ ತಡರಾತ್ರಿ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿ 2 ಗಂಟೆಯವರೆಗೂ ಅಕ್ರಮವಾಗಿ ಪಾರ್ಟಿ ನಡೆಸಲಾಗುತ್ತಿತ್ತು.
ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕಾದದ್ದು ಹೇಗೆ? ದಾವಣಗೆರೆ ಎಸ್ಪಿ ರಿಷ್ಯಂತ್ ಸಲಹೆಗಳು..
ಈ ಬಗ್ಗೆ ಸಾರ್ವಜನಿಕರು ಕೆಎಸ್ಆರ್ ಪಾರ್ಟಿಗೆ ಮಾಹಿತಿ ನೀಡಿದ್ದರು. ನಂತರ ತಡರಾತ್ರಿ ಕೆಎಸ್ಆರ್ ಪಾರ್ಟಿಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಆಗಮಿಸುತ್ತಿದ್ದಂತೆ ಮದ್ಯಪಾನ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕ, ಯುವತಿಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅನಧಿಕೃತ ಪಾರ್ಟಿ ಇದಾಗಿದ್ದು, ಹರಿಹರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಶನಿವಾರ ದಿನ ಅಕ್ರಮವಾಗಿ ಪಾರ್ಟಿ ನಡೆಸಲಾಗುತ್ತಿದ್ದು, ವಾರದ ಕೊನೆ ದಿನಗಳಾದ ಶನಿವಾರ ಮತ್ತು ಭಾನುವಾರ ಪಾರ್ಟಿ ಆಯೋಜನೆಯನ್ನು ಹೋಟೆಲ್ನಿಂದ ಮಾಡಲಾಗುತಿತ್ತು.
ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ ಆಚರಿಸಲಾಗುತ್ತಿದ್ದ ಎಣ್ಣೆ ಪಾರ್ಟಿ ಇದೀಗ ದಾವಣಗೆರೆಗೂ ಕಾಲಿಟ್ಟಿದ್ದು, ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಧ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ನಡೆಸಲು ಅನುಮತಿ ಕೊಟ್ಟಿದ್ಯಾರು?. ಕೂಡಲೇ ಹೊಟೇಲ್ ಸೀಜ್ ಮಾಡಿ ಮಾಲೀಕರನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಬಿಯರ್ ಬಾಟೆಲ್ಗಳು ಪತ್ತೆಯಾಗಿವೆ. ಈ ಹೋಟೆಲ್ ನಗರದ ಹೊರವಲಯದಲ್ಲಿರುವ ಕಾರಣ ಹೆಚ್ಚಾಗಿ ಯುವಕ, ಯುವತಿಯರು ಇಲ್ಲಿಗೆ ಹೋಗುತ್ತಿದ್ದು, ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಯುವಕ, ಯುವತಿಯರು ಅದರಲ್ಲೂ ಹೆಚ್ಚಾಗಿ ವಿದ್ಯಾವಂತರೇ ಇಂತಹ ಪಾರ್ಟಿಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳುಹಿಸುವ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರು ಯುವಕ, ಯುವತಿಯರು ಪಾರ್ಟಿ ಮಾಡಿದ್ದ ಪ್ರತಿಷ್ಠಿತ ಹೋಟೆಲ್ 'ದಿ ವೆಸ್ಟ್' ಮಾಲೀಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ.