ದಾವಣಗೆರೆ : ಕೆಎಸ್ಆರ್ಟಿಸಿ ತಿರುಪತಿ ಪ್ಯಾಕೇಜ್, ವಿವರಗಳು
ದಾವಣಗೆರೆ, ಜುಲೈ 16 : ಕೆಎಸ್ಆರ್ಟಿಸಿ ಜು.20ರಿಂದ 4 ನಗರಗಳಿಂದ ತಿರುಪತಿ ಪ್ಯಾಕೇಜ್ ಸೇವೆಯನ್ನು ಆರಂಭಿಸಲಿದೆ. ದಾವಣಗೆರೆಯಿಂದ ಸಹ ಪ್ಯಾಕೇಜ್ ಆರಂಭವಾಗಲಿದ್ದು, ಐರಾವತ ಬಸ್ ಮೂಲಕ ಜನರು ಸಂಚರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.
ಕೆಎಸ್ಆರ್ಟಿಸಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿಂದ ತಿರುಪತಿ ಪ್ಯಾಕೇಜ್ ಸೇವೆಯನ್ನು ಜುಲೈ 20ರಿಂದ ಆರಂಭಿಸಲಿದೆ. ಈಗಾಗಲೇ 2017ರಿಂದ ಬೆಂಗಳೂರು-ತಿರುಪತಿ ಸೇವೆ ಜಾರಿಯಲ್ಲಿದ್ದು ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಆ.9 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ
ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳ ಮೂಲಕ ಚಿತ್ರದುರ್ಗ ಮಾರ್ಗವಾಗಿ ತಿರುಪತಿಗೆ ಪ್ರಯಾಣ ಬೆಳೆಸಿ, ಯಾವುದೇ ಸರತಿ ಸಾಲಿನಲ್ಲಿ ಕಾಯದೇ ನೇರವಾಗಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಈ ಪ್ಯಾಕೇಜ್ನಲ್ಲಿ ಪ್ರಯಾಣಿಸಲು ಬಯಸುವ ಜನರು 30 ದಿನಗಳ ಮೊದಲು ಬುಕ್ ಮಾಡಬೇಕಿದೆ.
4 ನಗರದಿಂದ ಕೆಎಸ್ಆರ್ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್
ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಖೆ ಸಹಯೋಗದಿಂದ ಈ ಪ್ಯಾಕೇಜ್ ಸಿದ್ಧಗೊಳಿಸಲಾಗಿದೆ. ತಿರುಪತಿ, ತಿರುಮಲ ಮತ್ತು ಕಾಳಹಸ್ತಿ ದರ್ಶನವನ್ನು ಪಡೆಯಬಹುದಾಗಿದೆ. ಪ್ಯಾಕೇಜ್ ದರ, ಸಮಯದ ವಿವರಗಳನ್ನು ಚಿತ್ರಗಳಲ್ಲಿ ನೋಡಿ....
ಕೆಎಆರ್ಟಿಸಿ ಪ್ಯಾಕೇಜ್
ದಾವಣಗೆರೆಯಿಂದ ಹೊರಟ ಬಸ್ ಆಂಧ್ರಪ್ರದೇಶವನ್ನು ತಲುಪಿದ ಕೂಡಲೇ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಜನರನ್ನು ಸ್ವಾಗತಿಸಲಿದ್ದಾರೆ. ತಿರುಪತಿ, ತಿರುಮಲ, ಕಾಳಹಸ್ತಿ ದರ್ಶನವನ್ನು ಅಧಿಕಾರಿಗಳು ಮಾಡಿಸಲಿದ್ದಾರೆ.
ತಿರುಪತಿ ತಲುಪಿದ ಕೂಡಲೇ ಪದ್ಮಾವತಿ ದೇಗುಲದ ದರ್ಶನ ಮಾಡಿಸುತ್ತಾರೆ. ಉಪಹಾರದ ಬಳಿಕ ತಿರುಪತಿಯಲ್ಲಿ ಯಾವುದೇ ಕ್ಯೂ ಇಲ್ಲದೇ ದರ್ಶನ ಪಡೆಯಬಹುದು. ನಂತರ ಸ್ಥಳೀಯ ದೇವಾಯದಲ್ಲಿ ದರ್ಶನ, ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ. ಊಟ-ವಸತಿ ವ್ಯವಸ್ಥೆಯನ್ನು ಅಧಿಕಾರಿಗಳು ನೋಡಿಕೊಳ್ಳುತ್ತಾರೆ.
ಪ್ಯಾಕೇಜ್ ಸಮಯ, ದರದ ವಿವರ
ಪ್ಯಾಕೇಜ್ ಟೂರ್ನ ಮೊದಲ ದಿನ ಸಂಜೆ 4 ಗಂಟೆಗೆ ದಾವಣಗೆರೆ ನಿಲ್ದಾಣದಿಂದ ಐರಾವತ್ ಕ್ಲಬ್ ಕ್ಲಾಸ್ ಬಸ್ ಹೊರಡಲಿದೆ. ಮರುದಿನ ಬೆಳಗ್ಗೆ 4 ಗಂಟೆಗೆ ತಿರುಪತಿಗೆ ತಲುಪಲಿದೆ. ಮೂರನೇ ದಿನ ಸಂಜೆ 4.15ಕ್ಕೆ ತಿರುಪತಿಯಿಂದ ಹೊರಡುವ ಬಸ್ ನಾಲ್ಕನೇ ದಿನ ಬೆಳಗ್ಗೆ 3.45ಕ್ಕೆ ದಾವಣಗೆರೆಗೆ ವಾಪಸ್ ಆಗಲಿದೆ.
ವಾರದ ದಿನಗಳಲ್ಲಿ ವಯಸ್ಕರಿಗೆ 4,500 ರೂ., ಮಕ್ಕಳಿಗೆ 3,600 ರೂ. ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 4,800 ರೂ., ಮಕ್ಕಳಿಗೆ 3,900 ರೂ. ದರವನ್ನು ನಿಗದಿ ಮಾಡಲಾಗಿದೆ.
30 ದಿನ ಮೊದಲು ಬುಕ್ಕಿಂಗ್
ಈ ಪ್ಯಾಕೇಜ್ ಮೂಲಕ ತಿರುಪತಿಗೆ ಭೇಟಿ ನೀಡಲು ಆಸಕ್ತಿ ಇರುವ ಭಕ್ತರು 30 ದಿನ ಮೊದಲು ಪ್ಯಾಕೇಜ್ ಬುಕ್ ಮಾಡಬೇಕು. ಕೆಎಸ್ಆರ್ಟಿಸಿ ಅಧಿಕೃತ ಟಿಕೆಟ್ ಕೌಂಟರ್, ಅಧಿಕೃತ ಟಿಕೆಟ್ ಬುಕ್ಕಿಂಗ್ ಕೌಂಟರ್, ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ಯಾಕೇಜ್ ಬುಕ್ ಮಾಡಬಹುದಾಗಿದೆ.
ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳ ಮೂಲಕ ಪ್ಯಾಕೇಜ್ ಬುಕ್ ಮಾಡಿದ ಭಕ್ತಾದಿಗಳು ಸಂಚಾರ ನಡೆಸಬಹುದು. ದಾವಣಗೆರೆ-ಚಿತ್ರದುರ್ಗ ಮಾರ್ಗದ ಮೂಲಕ ಬಸ್ ಸಂಚಾರ ನಡೆಸಲಿದೆ. ಮಂಗಳೂರು-ತಿರುಪಿ ಮಾರ್ಗದ ಪ್ಯಾಕೇಜ್ ಸಹ ಲಭ್ಯವಿದೆ.
ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ
2017ರಲ್ಲಿ ಪ್ರಾಯೋಗಿಕವಾಗಿ ಕೆಎಸ್ಆರ್ಟಿಸಿ ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಆರಂಭಿಸಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ, ಈ ಪ್ಯಾಕೇಜ್ ಅನ್ನು ವಿಸ್ತರಣೆ ಮಾಡಲಾಗಿದೆ.
ಜು.20ರಿಂದ ದಾವಣಗೆರೆ, ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿ ಪ್ಯಾಕೇಜ್ ಆರಂಭವಾಗುತ್ತಿದೆ.