ಹೊರ ರಾಜ್ಯದಿಂದ ಬಂದವರ ಮೇಲೆ ಕಣ್ಣಿಡಲು ಕೆ.ಎಸ್.ಈಶ್ವರಪ್ಪ ಸೂಚನೆ
ದಾವಣಗೆರೆ, ಏಪ್ರಿಲ್ 03: ಅನಗತ್ಯವಾಗಿ ರಸ್ತೆಗಳಲ್ಲಿ ಸಂಚಾರ ಮಾಡುವವರನ್ನು ನಿಯಂತ್ರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸೂಚನೆ ನೀಡಿದ್ದಾರೆ.
ಮಾಯಕೊಂಡದ ಸಮುದಾಯ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, "ಪೊಲೀಸ್ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಸಂಚಾರ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸರ್ಕಾರಿ ನೌಕರರು ಯಾವುದಕ್ಕೂ ಚಿಂತಿಸದೆ ದೇಶಕ್ಕೆ ಸೇವೆ ಸಲ್ಲಿಸುವ ಸಮಯ ಬಂದಿದೆ. ಆದ್ದರಿಂದ ಯಾವುದೇ ಭೀತಿಗೆ ಒಳಗಾಗದೇ ಸೇವೆ ಸಲ್ಲಿಸಬೇಕು. ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ರಕ್ಷಣೆ ಮಾಡಬೇಕು" ಎಂದರು.
ದಾವಣಗೆರೆಯಲ್ಲಿ ಮಿಲಿಟರಿ ನಿಯೋಜನೆ ಎಂದ ಸಚಿವ ಈಶ್ವರಪ್ಪ
"ಹೊರ ರಾಜ್ಯಗಳಿಂದ ಬಂದವರ ಮೇಲೆ ಗಮನವಿರಬೇಕು. ವಿನಾ ಕಾರಣ ಪೆಟ್ರೋಲ್ ನೀಡದಂತೆ ಜಾಗೃತಿ ವಹಿಸಿ ಅಂತಹವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಿ. ಮಸೀದಿಗಳಲ್ಲಿ ಹೆಚ್ಚು ಜನ ಸೇರದಂತೆ ನಿಗಾವಹಿಸಿ" ಎಂದು ಸೂಚಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏ. 5 ರಂದು ರಾತ್ರಿ 9 ಗಂಟೆಗೆ ಕರೆ ನೀಡಿರುವಂತೆ ನಾವೆಲ್ಲರೂ ಮೇಣದ ಬತ್ತಿ ಹಚ್ಚಿ ಒಗ್ಗಟ್ಟು ತೋರಿಸೋಣ ಎಂದರು.