ಕನ್ನಡ ಚಿತ್ರರಂಗಕ್ಕೆ ಮಸಿ ಬಳಿದ ಸರ್ಕಾರ: ಕೆಪಿಸಿಸಿ ವಕ್ತಾರ ಆರೋಪ
ದಾವಣಗೆರೆ, ಸೆಪ್ಟೆಂಬರ್ 14: ಇಡೀ ದೇಶದಲ್ಲೇ ಉತ್ತಮ ಸಂಸ್ಕಾರ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಹೆಸರಿನಲ್ಲಿ ಬಿಜೆಪಿ ಸರ್ಕಾರ ಮಸಿ ಬಳಿಯುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ತಮ್ಮ ಆಡಳಿತ ವೈಫಲ್ಯಗಳನ್ನು ಮರೆಮಾಚಲು ನಟಿಯರಾದ ರಾಗಿಣಿ, ಸಂಜನಾ ಮತ್ತು ಹಿಂದಿ ನಟಿ ಕಂಗನಾ ಮೊರೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ದಾವಣಗೆರೆಯ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಡಿ.ಬಸವರಾಜ್, ಡ್ರಗ್ಸ್ ಬಿಟ್ಟರೆ ದೇಶದಲ್ಲಿ ಯಾವುದೇ ಪ್ರಮುಖ ವಿಚಾರವಿಲ್ಲವೆಂಬಂತೆ ದಿನದ 24 ಗಂಟೆಗಳ ಕಾಲ ಮಾಧ್ಯಮಗಳ ಮೂಲಕ ಅದರಲ್ಲೂ ವಿಶೇಷವಾಗಿ ಟಿವಿ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿರುವುದನ್ನು ನೋಡಿದರೆ ಸರ್ಕಾರದ ಹಿಡಿತದಲ್ಲಿ ಕೆಲ ಮಾಧ್ಯಮಗಳು ಇರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಅವ್ಯವಹಾರ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಸಂಕಷ್ಟ ಕಾಲದಲ್ಲಿ ಅವ್ಯವಹಾರಗಳನ್ನು ನಡೆಸುತ್ತಿವೆ. ಪ್ರತಿ ಪಕ್ಷಗಳು ಈ ವಿಚಾರದಲ್ಲಿ ತನಿಖೆಗೆ ಆಗ್ರಹಿಸಿದರೆ ರಾಜ್ಯ ಸರ್ಕಾರದಿಂದ ಉತ್ತರವಿಲ್ಲ. ಮೇಲಾಗಿ ಪ್ರತಿಯೊಂದು ಕೆಲಸಕ್ಕೂ ಕೋವಿಡ್ ಕಾರಣ ಹೇಳುವ ರಾಜ್ಯ ಸರ್ಕಾರ ಅಧಿಕಾರಗಳ ವರ್ಗಾವಣೆ ಮಾತ್ರ ನಿರಂತರವಾಗಿ ನಡೆಸಿ ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಿದರು.
"ಜಮೀರ್ ಅಹ್ಮದ್ ಗುಜರಿ ಗಿರಾಕಿ" ಕಿಡಿಕಾರಿದ ರೇಣುಕಾಚಾರ್ಯ
ತಮ್ಮ ಮಾತು ಕೇಳದ ಅಧಿಕಾರಿಗಳನ್ನು ಕಿತ್ತು ಬೇರೆ ಕಡೆ ಹಾಕುತ್ತಾರೆ. ವರ್ಗಾವಣೆ ಬಗ್ಗೆ ತಲೆಕೆಡಿಸಿಕೊಂಡಷ್ಟು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ನ್ಯಾಯಸಮ್ಮತ ಅನುದಾನ ಮತ್ತು ಜಿಎಸ್ಟಿ ತೆರಿಗೆಯ ಪಾಲನ್ನು ಪಡೆಯಲು ರಾಜ್ಯ ಸರ್ಕಾರಕ್ಕೆ ಧ್ವನಿಯಿಲ್ಲ ಎಂದರು.
ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದೆ
ನಟಿಯರ ಡ್ರಗ್ಸ್ ವಿಚಾರದಲ್ಲಿ ಇಷ್ಟೊಂದು ಗಂಭೀರವಾಗಿ ಸಿಸಿಬಿ ಮೂಲಕ ತನಿಖೆ ನಡೆಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿ ಸಚಿವರ, ಶಾಸಕರ ಮತ್ತು ನಾಯಕರ ಕ್ರಿಮಿನಲ್ ಮೊಕ್ಕದ್ದಮೆಗಳನ್ನು ವಾಪಸ್ ಪಡೆದು ಪೊಲೀಸ್ ವ್ಯವಸ್ಥೆಗೆ ಅಪಮಾನ ಮಾಡಿದೆ. ಈ 62 ಕೇಸ್ಗಳಲ್ಲಿ ಸಚಿವರುಗಳಾದ ಬಿ.ಸಿ ಪಾಟೀಲ್, ಆನಂದಸಿಂಗ್, ಸಂಸದ ಪ್ರತಾಪ ಸಿಂಹ, ಶಾಸಕ ರೇಣುಕಾಚಾರ್ಯ, ಶಾಸಕ ನೆಹರು ಓಲೇಕಾರ್ ಸೇರಿದಂತೆ ಘಟಾನುಗಟಿಗಳ ಬಿಜೆಪಿ ನಾಯಕರ ಕೇಸಗಳನ್ನು ವಾಪಸ್ ಪಡೆದು ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದೆ.
ಶಾಂತಿ, ಸೌಹಾರ್ದ ಕದಡುವ ಶಕ್ತಿಗಳಿಗೆ ಬೆಂಬಲ
ಪೊಲೀಸ್ ಇಲಾಖೆ ಮತ್ತು ಕಾನೂನು ಇಲಾಖೆಗಳ ಅಭಿಪ್ರಾಯಗಳನ್ನು ಕಡೆಗಣಿಸಿ ಕೋಮು ಸಾಮರಸ್ಯ ಕದಡಿದ ಪ್ರಕರಣಗಳು ಸೇರಿದಂತೆ ಹಲವು ಗಂಭೀರ ಸ್ವರೂಪದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆದ ಸರ್ಕಾರದ ಕ್ರಮ ಸರಿಯಲ್ಲ. ಇದು ಒಂದು ರೀತಿಯಲ್ಲಿ ಶಾಂತಿ, ಸೌಹಾರ್ದ ಕದಡುವ ಶಕ್ತಿಗಳಿಗೆ ಬೆಂಬಲ, ಪ್ರಚೋದನೆ ನೀಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Recommended Video
ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಮೊರೆ
ರಾಜ್ಯದಲ್ಲಿ ಕೋವಿಡ್ ವೈರಸ್ನಿಂದ ಲಕ್ಷಾಂತರ ಜನ ಸಂಕಷ್ಟದಲ್ಲಿದ್ದಾರೆ. ದಿನನಿತ್ಯ ಸಹಸ್ರಾರು ಜನ ಮರಣ ಹೊಂದುತ್ತಿದ್ದಾರೆ. ನೆರೆ ಹಾವಳಿಯಿಂದ ರಾಜ್ಯದ ಜನ ಮನೆ ಮಠ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಈ ಬಗ್ಗೆ ಚಿಂತನೆ ನಡೆಸದೆ ರಾಜ್ಯ ಸರ್ಕಾರ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಮೊರೆ ಹೋಗಿದ್ದಾರೆಂದು ತೀವ್ರ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಕೆ ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಡಿ.ಶಿವಕುಮಾರ್ ಇದ್ದರು.