ಶಿವಮೊಗ್ಗ- ದಾವಣಗೆರೆ ರಸ್ತೆಯ ಮಧು ಮಂಡಕ್ಕಿ ಹೋಟೆಲ್ ಬಗ್ಗೆ ಒಂದಿಷ್ಟು
ಮೊನ್ನೆ ಭಾನುವಾರ ದಾವಣಗೆರೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಾರ್ಯಕ್ರಮ ಇತ್ತು. ಅದನ್ನು ಮುಗಿಸಿಕೊಂಡು ಮಲೇಬೆನ್ನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಹೊರಟಿದ್ದೆವು. ಇಲ್ಲೊಂದು ಕಡೆ ಮಂಡಕ್ಕಿ ಒಗ್ಗರಣೆ ಬಹಳ ಚೆನ್ನಾಗಿರುತ್ತದೆ, ತಿನ್ನುತ್ತೀಯೇನೋ ಎಂದು ಅಪ್ಪ ಆಸೆ ಹುಟ್ಟಿಸಿದರು. ಸರಿ, ಆ ಹೋಟೆಲ್ ಬಂದಾಗ ಹೇಳಿ, ಒಂದು ಕೈ ನೋಡೋಣ ಅಂದೆ.
ಹೆಸರೇ ಇಲ್ಲದ ಪುಟ್ಟ ಪುಟಾಣಿ ಹೋಟೆಲ್ ಅದು. ಅದರ ಮುಂದೆ ಕಾರು ನಿಲ್ಲಿಸಲಾಯಿತು. ಮಂಡಕ್ಕಿ ಒಗ್ಗರಣೆ, ಅವಲಕ್ಕಿ, ಟೀ, ಮಿರ್ಚಿ ಬಜ್ಜಿ ಅಥವಾ ಪಕೋಡಾ ಹೀಗೆ ಮೂರು-ಮತ್ತೊಂದನ್ನು ಬಿಟ್ಟರೆ ಇನ್ನೇನೂ ಮಾಡದ ಆ ಹೋಟೆಲ್ ನಲ್ಲಿ ವಾರದ ಬಹುತೇಕ ದಿನ-ಸಮಯ ಗಿಜಿಗಿಜಿ ಜನ. ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನದ ಸಮಯ. ಆಗಲೂ ಅಲ್ಲಿ ಜನರಿಂದ ತುಂಬಿಹೋಗಿತ್ತು.
ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್
ದಾವಣಗೆರೆಯಿಂದ ಹೊರಡುವಾಗ ಮಲೇಬೆನ್ನೂರು ಬಿಟ್ಟ ನಂತರ ಎರಡು ಕಿಲೋಮೀಟರ್ ದೂರಕ್ಕೆ ಬಲ ಭಾಗದಲ್ಲಿ ಈ ಹೋಟೆಲ್ ಕಾಣಸಿಗುತ್ತದೆ. ಇದಕ್ಕೆ ಹೆಸರೇ ಇಲ್ಲವಾದ್ದರಿಂದ ಹೊಸದಾಗಿ ಹೋಗುವವರು ಸ್ಥಳೀಯರನ್ನೇ ಕೇಳಬೇಕು. ಈ ಊರಿನ ಹೆಸರು ಕೌಮಾರನಹಳ್ಳಿ. ಅಲ್ಲಿ ಇರುವುದು ಮಧು ಮಂಡಕ್ಕಿ ಹೋಟೆಲ್. ಮಧುಸೂದನ್ ಎಂಬುದು ಹೋಟೆಲ್ ಮಾಲೀಕರ ಹೆಸರು.
ಮಧುಸೂದನ್ ಈಗ ಹೋಟೆಲ್ ಮಾಲೀಕರಾದ್ದರಿಂದ ಮಧು ಮಂಡಕ್ಕಿ ಹೋಟೆಲ್ ಅಂತ ಕರೆಯಲಾಗುತ್ತದೆ. ಆದರೆ ಮಧುಸೂದನ್ ತಂದೆ ಸೀತಾರಾಮ್ ಅವರು ನಲವತ್ತು ವರ್ಷದ ಹಿಂದೆ ಆರಂಭಿಸಿದ ಹೋಟೆಲ್ ಇದು. ಈ ಹೋಟೆಲ್ ನಲ್ಲಿ ನಿತ್ಯವೂ ಅದೆಷ್ಟು ತಪ್ಪಲೆ ಮಂಡಕ್ಕಿ ಒಗ್ಗರಣೆ ಖಾಲಿ ಆಗುತ್ತದೆ ಎಂಬ ಲೆಕ್ಕವನ್ನು ಈಗಲೂ ಇಟ್ಟಿಲ್ಲ. ಏಕೆಂದರೆ, ಜನ ಬಂದಂತೆಯೂ ಮಂಡಕ್ಕಿ ಒಗ್ಗರಣೆ ಮಾಡುತ್ತಾ, ಬಜ್ಜಿ ಕರಿಯುತ್ತಾ ಇರುತ್ತಾರೆ.
ಮಧ್ಯಾಹ್ನ ಒಂದು ಗಂಟೆಯೊಳಗೆ ಅವಲಕ್ಕಿ ಒಗ್ಗರಣೆ ಖಾಲಿ
ಆದರೆ, ಅವಲಕ್ಕಿ ಒಗ್ಗರಣೆ ಮಾತ್ರ ಇಡೀ ದಿನ ಸಿಗೋದಿಲ್ಲ. ಮಧ್ಯಾಹ್ನ ಒಂದು ಗಂಟೆಯೊಳಗೆ ಖಾಲಿ ಆಗಿಬಿಡುತ್ತದೆ. ಆ ನಂತರ ಅದನ್ನು ಮತ್ತೆ ಮಾಡುವುದಿಲ್ಲ. ಇನ್ನು ವಾರದ ಎಲ್ಲ ದಿನವೂ ಹೋಟೆಲ್ ತೆರೆದೇ ಇರುತ್ತದೆ. ಬೆಳಗ್ಗೆ 5 ಗಂಟೆಗೆ ಶುರುವಾದರೆ ರಾತ್ರಿ 9 ಗಂಟೆ ತನಕ ನಡೆಯುತ್ತಲೇ ಇರುತ್ತದೆ ವ್ಯಾಪಾರ.
ಮಂಡಕ್ಕಿ ಒಗ್ಗರಣೆ, ಮಿರ್ಚಿ ಹಾಗೂ ಟೀಗೆ 30 ರುಪಾಯಿ
ಮಂಡಕ್ಕಿ ಒಗ್ಗರಣೆ ಅಥವಾ ಅವಲಕ್ಕಿ ಒಗ್ಗರಣೆ ಒಂದು ಪ್ಲೇಟ್ ಗೆ 20 ರುಪಾಯಿ, ಒಂದು ಬಜ್ಜಿಗೆ 5 ರುಪಾಯಿ ಮತ್ತು ಒಂದು ಟೀಗೆ 5 ರುಪಾಯಿ. ಇವೆಲ್ಲವನ್ನೂ ಸೇರಿಸಿ 30 ರುಪಾಯಿ ತೆಗೆದುಕೊಳ್ಳಲಾಗುತ್ತದೆ. ಎಷ್ಟೋ ಸಲ, ನಮ್ಮ ಹತ್ತಿರ ಇರೋದೇ ಇಪ್ಪತ್ತು ರುಪಾಯಿ ಅನ್ನೋರು ಉಂಟು. ಅಂಥವರಿಗೂ ಕೆಲವರಿಗೆ ಅಷ್ಟಕ್ಕೇ ಎಲ್ಲವನ್ನೂ ಕೊಟ್ಟಿದ್ದೇವೆ ಎಂದರು ಮಂಡಕ್ಕಿ ಒಗ್ಗರಣೆಗೆ ಸಿದ್ಧಪಡಿಸುತ್ತಿದ್ದ ಬಾಣಸಿಗರು.
ನಾಲಗೆ ಮೇಲೆ ಕರಗುವ ಚಿಬ್ಬುಲು ಇಡ್ಲಿ, ಕೆಂಪು ಚಟ್ನಿ ರುಚಿ ನೋಡಿ
ಯಡಿಯೂರಪ್ಪ, ಈಶ್ವರಪ್ಪನವರೂ ಇಲ್ಲಿ ರುಚಿ ನೋಡಿದ್ದಾರೆ
ಈ ರಸ್ತೆಯಲ್ಲಿ ಓಡಾಡುವ ಬಹುತೇಕರು ಇಲ್ಲಿಗೆ ಬರುತ್ತಾರೆ. ಯಡಿಯೂರಪ್ಪನವರು, ಈಶ್ವರಪ್ಪನವರು, ಶಿವಮೊಗ್ಗದ ಈ ಹಿಂದಿನ ಶಾಸಕರಾದ ಪ್ರಸನ್ನ ಕುಮಾರ್ ಹೀಗೆ ಎಷ್ಟೋ ಜನರು ಈ ಹೋಟೆಲ್ ನಲ್ಲಿ ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ, ಮಿರ್ಚಿ ಬಜ್ಜಿ, ಪಕೋಡಾ, ಟೀ ರುಚಿ ನೋಡಿದ್ದಾರೆ.
ನರ್ಗೀಸ್, ಚೌಚೌ ಕೂಡ ಮಾರಾಟ ಮಾಡ್ತಾರೆ
ಹತ್ತಿರಹತ್ತಿರ ಎಂಟು ಮಂದಿ ಈ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ. ಬಜ್ಜಿ ಕರಿಯುವವರು ಬೇರೆ, ಮಂಡಕ್ಕಿ ಒಗ್ಗರಣೆ ಮಾಡುವವರು ಬೇರೆ. ಮಂಡಕ್ಕಿ-ಅವಲಕ್ಕಿ ಒಗ್ಗರಣೆಗೆ ಮೊಸರು ಹಾಕಿಕೊಂಡು ತಿನ್ನುವುದಕ್ಕೆ ಬಹಳ ಚೆನ್ನಾಗಿರುತ್ತದೆ. ಇದರ ಜತೆಗೆ ನರ್ಗೀಸ್ ಹಾಗೂ ಖಾರವನ್ನು (ಚೌಚೌ) ಸಹ ಮಾರಲಾಗುತ್ತದೆ. ಕಣ್ಣು ಕೋರೈಸುವ ಅಲಂಕಾರ ಇಲ್ಲದ, ದೊಡ್ಡ ಕುರ್ಚಿ-ಟೇಬಲ್ ಗಳಿಲ್ಲದ ಮಧು ಮಂಡಕ್ಕಿ ಹೋಟೆಲ್ ಅನ್ನು ಬೇರೆ ಬೇರೆ ಊರುಗಳಿಂದ ಹುಡುಕಿಕೊಂಡು ಬರುವವರಿದ್ದಾರೆ. ಆ ರಸ್ತೆಯಲ್ಲಿ ಸ್ವಂತ ವಾಹನದಲ್ಲಿ ಹೋಗುವವರಿದ್ದರಂತೂ ಇಲ್ಲಿನ ರುಚಿ ಬಗ್ಗೆ ಗೊತ್ತಿರುವವರು ಭೇಟಿ ತಪ್ಪಿಸುವುದಿಲ್ಲ. ಮಲೇಬೆನ್ನೂರು ಬಳಿ ಇರುವ ಕೌಮಾರನಹಳ್ಳಿ ಮಧು ಮಂಡಕ್ಕಿ ಹೋಟೆಲ್ ಗೆ ಖಂಡಿತಾ ಒಮ್ಮೆ ಭೇಟಿ ನೀಡಬಹುದು.