ದಾವಣಗೆರೆ: ಶಾಂತಿಯುತವಾಗಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ
ದಾವಣಗೆರೆ, ಅಕ್ಟೋಬರ್ 28: ಆಗ್ನೇಯ ಪದವೀಧರರ ಚುನಾವಣೆಯ ಮತದಾನ ಪ್ರಕ್ರಿಯೆ ದಾವಣಗೆರೆಯಲ್ಲಿ ಶಾಂತಿಯುತವಾಗಿ ನಡೆಯಿತು. ಬುಧವಾರ ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪ್ರಾರಂಭದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತ್ತು.
ಬಳಿಕ, ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ಈ ಮಧ್ಯೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕೂಡ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.
ಅ.28 ರಂದು ವಿಧಾನ ಪರಿಷತ್ ಚುನಾವಣೆ: 2.34 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ
ಆಗ್ನೇಯ ಪದವೀಧರರ ಚುನಾವಣೆಯ ಮತದಾನ ಪ್ರಕ್ರಿಯೆ ಹಿನ್ನೆಲೆ ದಾವಣಗೆರೆಯ ಹೈಸ್ಕೂಲ್ ಮೈದಾನದ ಮತಗಟ್ಟೆ ಜನಜಂಗುಳಿಯಿಂದ ತುಂಬಿ ಹೋಗಿತ್ತು. ಈ ವೇಳೆ ಮತಗಟ್ಟೆಗೆ ಎರಡು ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಮತದಾರರ ಓಲೈಕೆಗೆ ಕಾಂಗ್ರೆಸ್, ಬಿಜೆಪಿ ಮುಖಂಡರ, ಕಾರ್ಯಕರ್ತರ ಹರಸಾಹಸ ಪಟ್ಟರು. ಸಾಮಾಜಿಕ ಅಂತರ ಮರೆತ ರಾಜಕೀಯ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳು ವಾಗ್ವಾದಕ್ಕಿಳಿದ ಘಟನೆ ನಡೆಯಿತು. ಮತಗಟ್ಟೆ ಪ್ರವೇಶ ದ್ವಾರದಿಂದ ಮುಖಂಡರನ್ನು ದೂರ ಕಳುಹಿಸಲು ಪೊಲೀಸರು ಪರದಾಡಿದರು.
ಮತದಾನ ಮಾಡುವಂತೆ ಮತ ಕೇಂದ್ರದ ಹೊರಗೆ ಮಾತ್ರ ಮನವಿ ಮಾಡಿಕೊಳ್ಳಬೇಕಿದ್ದ, ಹರಿಹರ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅನಧಿಕೃತವಾಗಿ ಮಲೇಬೆನ್ನೂರು ಮತಗಟ್ಟೆಯ ಒಳಗೆ ಪ್ರವೇಶಿಸುವ ಮೂಲಕ ಶಾಸಕರು ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಘಟನೆ ಜರುಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ದಾವಣಗೆರೆ ನಗರ, ಮಾಯಕೊಂಡ, ಹರಿಹರ ಹಾಗೂ ಜಗಳೂರು ಆಗ್ನೇಯ ಕ್ಷೇತ್ರಕ್ಕೆ ವ್ಯಾಪ್ತಿಗೆ ಒಳಪಡುತ್ತವೆ. ಇಲ್ಲಿ ಒಟ್ಟು 20,962 ಮತದಾರರಿದ್ದು, ಈ ಪೈಕಿ ಗ್ರಾಮಾಂತರ ವ್ಯಾಪ್ತಿಯ ಮಾಯಕೊಂಡದಲ್ಲಿ 2076 ಮತದಾರರಿದ್ದಾರೆ. ಇದಕ್ಕಾಗಿ ಕ್ಷೇತ್ರದಲ್ಲಿ ಒಟ್ಟು 32 ಮತಗಟ್ಟೆಗಳನ್ನು ತೆರೆಯಲಾಗಿತ್ತು. ದಾವಣಗೆರೆ ನಗರದಲ್ಲಿ 18, ಮಾಯಕೊಂಡ 4, ಹರಿಹರದಲ್ಲಿ 6, ಜಗಳೂರಿನಲ್ಲಿ 4 ಮತಗಟ್ಟೆಗಳಿದ್ದವು. ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿತ್ತು.
Recommended Video
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮತದಾನ ಶಾಂತಿಯುತವಾಗಿ ನಡೆದಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾಗಿ ಹೇಳಿದ್ದಾರೆ.