ಸಿಎಂ ಬದಲಾವಣೆ; ಎಂ. ಪಿ. ರೇಣುಕಾಚಾರ್ಯ ಹೇಳಿದ್ದೇನು?
ದಾವಣಗೆರೆ, ಆಗಸ್ಟ್, 09: "ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯನೋ, ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮುಂದುವರೆಯುವುದು ಅಷ್ಟೇ ಸತ್ಯ" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿಗಳ ಬದಲಾವಣೆ ಮಾತುಗಳು ಊಹಾಪೋಹ. ಕಾಂಗ್ರೆಸ್ನವರು ತಮ್ಮಲ್ಲಿರುವ ಭಿನ್ನಾಭಿಪ್ರಾಯ ಮುಚ್ಚಿಹಾಕಲು ಈ ರೀತಿ ಟ್ವೀಟ್ ಮಾಡಿದ್ದಾರೆ" ಎಂದರು.
Breaking: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ
"ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹತ್ತಾರು ಗುಂಪುಗಳಿವೆ. ಅವರಲ್ಲಿನ ವ್ಯತ್ಯಾಸ, ಭಿನ್ನಾಭಿಪ್ರಾಯ ಮುಚ್ಚಿಹಾಕಿಕೊಳ್ಳಲು ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಹಬ್ಬಿಸಿದ್ದಾರೆ. ನಾವು ಜನೋತ್ಸವ ಮಾಡುತ್ತೇವೆ. ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ನವರು ಭ್ರಮೆಲೋಕದಲ್ಲಿದ್ದಾರೆ" ಎಂದು ಟೀಕಿಸಿದರು.
ಸಾಧನಾ ಸಮಾವೇಶ; "ಪ್ರವೀಣ್ ನೆಟ್ಟಾರು ಹತ್ಯೆ ಕಾರಣದಿಂದ ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಜನೋತ್ಸವ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಎರಡು ವರ್ಷ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದ್ದಾರೆ. ಮೋದಿ ನಾಯಕತ್ವಕ್ಕೆ ದೇಶದ ಬೆಂಬಲ ಸಿಕ್ಕಿದೆ. ನಾವು ಸಾಧನಾ ಸಮಾವೇಶ ಮಾಡುತ್ತೇವೆ. ದಾವಣಗೆರೆಯಲ್ಲಿ ಸಮಾರೋಪ ಸಮಾರಂಭ ಮಾಡಲು ಅನುವು ಮಾಡಿಕೊಡುವಂತೆ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡುತ್ತೇನೆ" ಎಂದು ರೇಣುಕಾಚಾರ್ಯ ತಿಳಿಸಿದರು.
"ಕೋವಿಡ್ ಲಸಿಕೆ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡಿತ್ತು. ಆ ಪಕ್ಷದ ನಾಯಕರು ವಿರೋಧ ಮಾಡಿ ಅವರೇ ಲಸಿಕೆ ಹಾಕಿಸಿಕೊಂಡರು. ಅಮೃತ ಮಹೋತ್ಸವ ಗೌರವದಿಂದ ಆಚರಿಸುತ್ತೇವೆ. ಅಭಿವೃದ್ಧಿಪರ ಚಿಂತನೆ ಮಾಡುವ ಪಕ್ಷ ಎಂದರೆ ಬಿಜೆಪಿ ಮಾತ್ರ" ಎಂದರು.
Recommended Video