ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಪಿಪಿಇ ಕಿಟ್ ಗೆ ಮನವಿ
ದಾವಣಗೆರೆ, ಏಪ್ರಿಲ್ 25; ಕೊರೊನಾ ವೈರಸ್ ಭೀತಿ ಆರಂಭವಾದಾಗಿನಿಂದಲೂ ಕೋವಿಡ್ ವಾರ್ಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ನಮಗೆ ಸೂಕ್ತ ಭದ್ರತಾ ಪರಿಕರಗಳನ್ನು ವಿತರಣೆ ಮಾಡಿಲ್ಲವೆಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಫಿವರ್ ಕ್ಲಿನಿಕ್ ಗಳಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ರಕ್ಷಣೆಗೆ ಅಗತ್ಯ ಪರಿಕರ ವಿತರಣೆಯಾಗದಿದ್ದರೆ ಕೋವಿಡ್ ವಾರ್ಡ್ ನಲ್ಲಿ ಸೇವೆ ಸಲ್ಲಿಸುವುದು ಕಷ್ಟವಾಗುತ್ತದೆ ಎಂದು ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ದಾವಣಗೆರೆ ಜಿಲ್ಲಾಧಿಕಾರಿಗಳು, ಡಿಎಚ್ ಒಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್
ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಗತ್ಯ ಕಿಟ್ ಗಳನ್ನು ನೀಡದಿದ್ದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ನಾಗರಾಜ್ ಈ ಬಗ್ಗೆ ಮಾತನಾಡಿ, "ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲು ಬೇಕಾದ ಕ್ರಮಗಳನ್ನು ವಹಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಅಗತ್ಯ ಪರಿಕರಗಳನ್ನು ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಪಿಪಿಇ ಕಿಟ್ ಗಳನ್ನು ಕೋಡಲಾಗಿದೆ. ಕೋವಿಡ್ ವಾರ್ಡ್ ಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಗತ್ಯ ಕ್ರಮಗಳನ್ನು ವಹಿಸಿದ್ದೇವೆ. ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಅವರಿಗೆ ಮೊದಲೇ ತರಬೇತಿ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನವನ್ನು ಪಾಲನೆ ಮಾಡುತ್ತಿದ್ದೇವೆ" ಎಂದು ಉತ್ತರಿಸಿದ್ದಾರೆ.
"ಜಿಲ್ಲೆಯಲ್ಲಿ 28 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ. ದಾವಣಗೆರೆ ಜಿಲ್ಲೆ ಹಸಿರುವ ವಲಯದಲ್ಲಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರಮದಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಪ್ರತಿದಿನ 50 ರಿಂದ 60 ಪರೀಕ್ಷೆಗಳನ್ನು ಸಿಜಿ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಎಲ್ಲಾ ನೆಗೆಟಿವ್ ಬರುತ್ತಿವೆ. ಪಿಪಿಇ ಕಿಟ್ ಗಳನ್ನು ಅಗತ್ಯವಿರುವ ಕಡೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಅನವಶ್ಯಕವಾಗಿ ಆರೋಪ ಮಾಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.
"ನಮ್ಮಲ್ಲಿ ಅಗತ್ಯವಿರುವಷ್ಟು ಪರಿಕರಗಳಿವೆ. ಆದರೆ ಎಲ್ಲಿ ಅಗತ್ಯವಿರುತ್ತದೆಯೋ ಅಲ್ಲಿ ನೀಡಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳು ಪಿಪಿಇ ಕಿಟ್ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ ಅಗತ್ಯವಿರುವ ಕಡೆ ಮಾತ್ರ ಕಿಟ್ ಬಳಕೆ ಮಾಡಲಾಗುತ್ತದೆ" ಎಂದು ಅಧೀಕ್ಷಕ ಡಾ.ನಾಗರಾಜ್ ತಿಳಿಸಿದ್ದಾರೆ.