ಮೇ 23ರ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನ : ರಾಜೂ ಗೌಡ
Recommended Video
ದಾವಣಗೆರೆ, ಏಪ್ರಿಲ್ 19 : 'ಮೇ 23ರ ತನಕ ಕಾಂಗ್ರೆಸ್-ಜೆಡಿಎಸ್ ಒಪ್ಪಂದವಿದೆ. ನಂತರ ಅವರು ವಿಚ್ಚೇಧನ ತೆಗೆದುಕೊಳ್ಳಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪತನವಾಗಲಿದೆ' ಎಂದು ಸುರಪುರ ಶಾಸಕ ರಾಜೂ ಗೌಡ ಭವಿಷ್ಯ ನುಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶುಕ್ರವಾರ ದಾವಣಗೆರೆಯಲ್ಲಿ ಮಾತನಾಡಿದ ರಾಜೂ ಗೌಡ ಅವರು, 'ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವುದು ಖಚಿತ. ನಿಖಿಲ್ ಜೊತೆ ದೇವೇಗೌಡ, ಪ್ರಜ್ವಲ್ ರೇವಣ್ಣ ಅವರು ಸೋಲು ಅನುಭವಿಸಲಿದ್ದಾರೆ' ಎಂದು ಹೇಳಿದರು.
'ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪ ಎಂದರೆ ಜನರ ಮಧ್ಯೆ ಇದ್ದೇನೆ ಎಂದು ಟ್ರಾಲ್ ಆಗುತ್ತಿತ್ತು. ಇನ್ನು ಮುಂದೆ ಮಂಡ್ಯದ ಜನ ಸೋಲಿಸುತ್ತಾರೆ ಎಂದರೆ ಮಂಡ್ಯದ ಜನ ಸೋಲಿಸುತ್ತಾರೆಂದು ಬೆಂಗಳೂರಿನಲ್ಲಿದ್ದೀನಿ ಅಪ್ಪಾ ಎಂದು ಟ್ರಾಲ್ ಆಗುತ್ತದೆ' ಎಂದರು.
'ಆಪರೇಷನ್ ಮಾಡಲು ಬಿಜೆಪಿಯಲ್ಲಿ ಡಾಕ್ಟರ್ ಇಲ್ಲ. ನಾಟಿ ವೈದ್ಯರು ಇಲ್ಲ. ಕಾಂಗ್ರೆಸ್-ಜೆಡಿಎಸ್ನಲ್ಲಿ ರೋಗಿಗಳು ಹೆಚ್ಚಿದ್ದಾರೆ. ಹಾಗಾಗಿ ರೋಗಿಗಳಿಂದಲೇ ಮೈತ್ರಿ ಸರ್ಕಾರ ಮುರಿದು ಬೀಳಲಿದೆ' ಎಂದು ರಾಜೂ ಗೌಡ ಭವಿಷ್ಯ ನುಡಿದರು.
'ಮುಖ್ಯಮಂತ್ರಿಗಳು ನಮಗೆ ಗೋಡೆಯ ಮೇಲಿನ ಸುಣ್ಣವನ್ನು ತೋರಿಸಿ ಹಾಲು ಎಂದು ಹೇಳುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಸಿಎಂ ಆಗಿ ಮಾತನಾಡುತ್ತಾರೋ ಅಥವ ನಿಖಿಲ್ ತಂದೆಯಾಗಿ ಮಾತನಾಡುತ್ತಾರೋ?' ತಿಳಿಯದು ಎಂದು ಹೇಳಿದರು.
'ಈ ಬಾರಿ ನಾವು 20 ರಿಂದ 22 ಸ್ಥಾನ ಗೆಲ್ಲುತ್ತೇವೆ. ಮೇ 23ರ ನಂತರ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ. ರೋಗಿಗಳು ಜಾಸ್ತಿಯಾಗಿದ್ದರೆ ಡಾಕ್ಟರ್ ಕಡಿಮೆಯಾಗಿದ್ದಾರೆ. ಹೀಗಾಗಿ ನಾವು ಆಸ್ಪತ್ರೆ ಬಂದ್ ಮಾಡಿದ್ದೇವೆ' ಎಂದರು.