ದೇಶ-ವಿದೇಶ ಸುತ್ತಾಡಿ ಕೆಲಸ ಮಾಡಿದ ಟೆಕ್ಕಿ, ಈಗ ಗ್ರಾ.ಪಂ ಅಧ್ಯಕ್ಷೆ
ದಾವಣಗೆರೆ, ಫೆಬ್ರವರಿ 13: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದಲ್ಲ ಒಂದು ವಿಸ್ಮಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಚುನುವಣೆಯಲ್ಲಿ ಅಪ್ಪ-ಮಗ ಸ್ಪರ್ಧೆ ಮಾಡಿದರೆ, ಇತ್ತ ಅತ್ತೆ-ಸೊಸೆ ಸ್ಪರ್ಧಿಸಿರುತ್ತಾರೆ. ಚುನಾವಣೆ ಮುಗಿತು, ಫಲಿತಾಂಶ ಕೂಡ ಬಂತು, ಈಗ ಅಧ್ಯಕ್ಷಗಿರಿ ಆಯ್ಕೆ ಕೂಡ ಮುಗಿದು ಹೋಗಿದೆ. ಆದರೆ ದಾವಣಗೆರೆಯ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿಗೆ ಇಂಜಿನಿಯರಿಂಗ್ ಮುಗಿಸಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ಉದ್ಯೋಗಿ, ಈಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿದ್ದಾರೆ.
ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ ಪದವೀಧರೆಯಾಗಿರುವ ಬೆಂಗಳೂರು ನಗರದ ನಿವಾಸಿ ಸ್ವಾತಿ ತಿಪ್ಪೇಸ್ವಾಮಿ, ಅಮೆರಿಕದಲ್ಲಿ ಐದು ವರ್ಷ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಮಾಜಸೇವೆ ಮಾಡುವ ತುಡಿತದೊಂದಿಗೆ ವಿದೇಶದಲ್ಲಿನ ಲಕ್ಷ ಲಕ್ಷ ಸಂಬಳ ಬರುವ ಹುದ್ದೆ ತೊರೆದು, ತಮ್ಮ ಸ್ವಗ್ರಾಮ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮಕ್ಕೆ ಹಿಂದಿರುಗಿ ಬಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಗ್ರಾ.ಪಂ ಉಪಾಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಸದಸ್ಯರಿಗೆ ಆಣೆ ಪ್ರಮಾಣ ಶಿಕ್ಷೆ!
ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದು
ಸ್ವಾತಿಯವರು ಯುಎಸ್ಎ ನಲ್ಲಿ ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳ ಪಡೆಯುತ್ತಿದ್ದರು. ರಜೆ ಹಾಕಿ ತಂದೆಯನ್ನು ಹಾಗೂ ಗ್ರಾಮವನ್ನು ನೋಡಲು ಪ್ರತಿ ವರ್ಷ ಗ್ರಾಮಕ್ಕೆ ಬರುತ್ತಿದ್ದರು. ಅದರಲ್ಲೂ ಜಗಳೂರು ತಾಲ್ಲೂಕು ಎಂದರೆ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಇದು ಕೂಡ ಒಂದು. ಸರಿಯಾಗಿ ಮಳೆ, ಬೆಳೆ ಇಲ್ಲದೆ ಇಲ್ಲಿನ ಬಡ ಜನರಿಗೆ ಸರಿಯಾಗಿ ಉದ್ಯೋಗ ಸಿಗದೆ ಕಷ್ಟದ ಜೀವನ ಅನುಭವಿಸುತ್ತಿದ್ದಾರೆ.
ಉನ್ನತ ಶಿಕ್ಷಣ ಪಡೆದ ಸ್ವಾತಿ
ಹಳ್ಳಿಗಾಡಿನಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ಕಣ್ಣಾರೆ ಕಂಡ ಸ್ವಾತಿ ತಿಪ್ಪೇಸ್ವಾಮಿ, ಹಳ್ಳಿಗಳಲ್ಲೂ ಕನಿಷ್ಠ ಪ್ರಾಥಮಿಕ ಸೌಕರ್ಯಗಳನ್ನು ಕಲ್ಪಿಸುವ, ಹಳ್ಳಿಗಾಡಿನ ಜನರ ಜೀವನ ಮಟ್ಟವನ್ನು ಎತ್ತರಿಸುವ ಕನಸನ್ನು ಕಂಡಿದ್ದರು. ಗ್ರಾಮ ಪಂಚಾಯತಿಯಲ್ಲಿರುವ ಸೌಲಭ್ಯಗಳನ್ನು ಬಡವರಿಗೆ ದೊರಕುವಂತೆ ಮಾಡಿದರೆ ಸಾಕು ಅಭಿವೃದ್ಧಿ ಸಾಧ್ಯ ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದ್ದ ಸ್ವಾತಿ, ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣೆಗೂ ಸ್ಪರ್ಧಿಸಿದರು. ಉನ್ನತ ಶಿಕ್ಷಣ ಪಡೆದ ಸ್ವಾತಿ ಅವರನ್ನು ತಾಲ್ಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಇಲ್ಲಿ ವಿದ್ಯಾವಂತೆ ಸ್ವಾತಿ ತಿಪ್ಪೇಸ್ವಾಮಿ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ತಲೆಮಾರಿನ ರಾಜಕೀಯ ಹಿನ್ನೆಲೆ
ಸೊಕ್ಕೆ ಗ್ರಾ.ಪಂ ಅಧ್ಯಕ್ಷೆ, ಟೆಕ್ಕಿ ಸ್ವಾತಿ ತಿಪ್ಪೇಸ್ವಾಮಿ ಅವರು ತಲೆಮಾರಿನ ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಸ್ವಾತಿ ತಂದೆ ತಿಪ್ಪೇಸ್ವಾಮಿ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಹಂಚಿಕೊಂಡಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ನಮ್ಮ ತಾತ ತಿಪ್ಪಯ್ಯ ಸೊಕ್ಕೆ ಗ್ರಾಮದಲ್ಲಿ 1920-1931ರ ಅವಧಿಯಲ್ಲಿ ಕಂದಾಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ನನ್ನ ಅಪ್ಪ ಜಿ.ಮದ್ದಾನಯ್ಯ 1965-1970ರ ಅವಧಿಯವರೆಗೆ ಸೊಕ್ಕೆ ಪಂಚಾಯತಿ ಅಧ್ಯಕ್ಷರಾಗಿದ್ದರು. ಕಳೆದ ಅವಧಿಯಲ್ಲಿ ನಮ್ಮ ಸಂಬಂಧಿಕ ಎಚ್.ಎಂ. ಕೊಟ್ರಯ್ಯ ಎರಡು ವರ್ಷ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದಿದ್ದಾರೆ.
ವಿದ್ಯಾವಂತರ ಕೈಗೆ ಗ್ರಾಮ ಪಂಚಾಯತಿ ಅಧಿಕಾರ
ಸೊಕ್ಕೆಯನ್ನು ತಾಲ್ಲೂಕಿನಲ್ಲಿ ಮಾದರಿ ಪಂಚಾಯತಿಯಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಇಲ್ಲಿನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಿ ಪೂರಕ ಕಾರ್ಯವಿಧಾನ ರೂಪಿಸಿಕೊಳ್ಳಬೇಕು. ಬಹಳಷ್ಟು ಕೆಲಸ ಆಗುವುದಕ್ಕಿದೆ. ಸದ್ಯಕ್ಕೆ ನನ್ನ ಸಾಫ್ಟ್ವೇರ್ ಕೆಲಸದಿಂದ ಸಂಪೂರ್ಣ ಆಚೆ ಬಂದಿದ್ದು, ಮಕ್ಕಳು ಮತ್ತು ಗ್ರಾ.ಪಂ ಅಧ್ಯಕ್ಷಗಿರಿ ಎರಡೇ ನನ್ನ ಎದುರಿನ ಆಯ್ಕೆ ಎಂದು ಹೇಳಿದರು.
ಅಲ್ಲದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಓದು, ಬರಹ ಬಾರದಿರುವರು ಮಾತ್ರ ಚುನಾವಣೆಗೆ ನಿಂತು, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸುವಲ್ಲಿ ವಿಫಲವಾಗುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ವಿದ್ಯಾವಂತ ಜನರು ಗ್ರಾಮ ಪಂಚಾಯತಿಗಳಲ್ಲಿ ಸ್ಪರ್ಧಿಸುತ್ತಿರುವುದು ಒಂದೊಳ್ಳೆ ಬದಲಾವಣೆ ಸಿಕ್ಕಂತಾಗಿದೆ. ಅದರಲ್ಲೂ ಸ್ವಾತಿಯವರಂತಹ ವಿದ್ಯಾವಂತರ ಕೈಗೆ ಗ್ರಾಮ ಪಂಚಾಯತಿ ಅಧಿಕಾರ ಸಿಕ್ಕರೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ಹೆಚ್ಚಾಗಲಿದೆ.