ದಾವಣಗೆರೆಯ ಕೊರೊನಾ ಸೋಂಕಿಗೆ ಗುಜರಾತ್ ನಂಟು?
ದಾವಣಗೆರೆ, ಮೇ02; ಇಲ್ಲಿನ ಜಾಲಿ ನಗರದ ನಿವಾಸಿಯಾಗಿದ್ದ ಹಾಗೂ ಕೊರೊನಾ ಸೋಂಕಿಗೆ ಒಳಗಾಗಿದ್ದ, ಹೃದಯಾಘಾತದಿಂದ ಸಾವನ್ನಪ್ಪಿದ್ದ ವೃದ್ಧನ ಅಂತ್ಯಕ್ರಿಯೆ ಆರೋಗ್ಯ ಇಲಾಖೆ ನಿಯಮದ ಪ್ರಕಾರ ಜರುಗಿದೆ. ಆದರೆ ಇದೀಗ ಈ ವೃದ್ಧನಿಗೆ ತಗುಲಿದ್ದ ಕೊರೊನಾ ಸೋಂಕಿಗೆ ಗುಜರಾತ್ ನಂಟಿದೆಯಾ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಪರಿಶೀಲನೆ ನಡೆಯುತ್ತಿದೆ.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಹಿಂದೆ ಗ್ರೀನ್ ಝೋನ್ ಎನಿಸಿಕೊಂಡ ಮರುದಿನವೇ ದಾವಣಗೆರೆಯಲ್ಲಿ ಕೊರೊನಾ ಪ್ರಕರಣವೊಂದು ಕಂಡುಬಂದಿತ್ತು. ಮತ್ತೆ ಒಂದೇ ದಿನದಲ್ಲಿ ಆರು ಪ್ರಕರಣಗಳು ದಾಖಲಾದವು. ನಿನ್ನೆಯಷ್ಟೇ ಜಿಲ್ಲೆಯಲ್ಲಿ ಕೊರೊನಾದಿಂದ ಮೊದಲ ಸಾವು ಸಂಭವಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಆತಂಕವೂ ಹೆಚ್ಚಾಗಿದೆ.
ಗ್ರೀನ್ ಝೋನ್ ಆಗಿದ್ದ ದಾವಣಗೆರೆಯಲ್ಲಿ ಕೊರೊನಾಗೆ ಮೊದಲ ಬಲಿ
ಅನಾರೋಗ್ಯ ಹಿನ್ನೆಲೆ ದಾಖಲಾಗಿದ್ದ ವೃದ್ಧ
ಸಾವನ್ನಪ್ಪಿದ ವೃದ್ಧ ಏಪ್ರಿಲ್ 28ಕ್ಕೆ ಅನಾರೋಗ್ಯ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಗೆ ಮಧುಮೇಹ, ಹೈಪರ್ ಟೆನ್ಷನ್, ಹೃದಯ ಸಂಬಂಧಿ ಕಾಯಿಲೆಯು ಐದು ವರ್ಷದಿಂದ ಇತ್ತು. ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಕಳೆದ 5 ವರ್ಷದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಇವರು ಸಾವನ್ನಪ್ಪಿದ್ದು, ಅವರಲ್ಲಿ ಕೊರೊನಾ ಸೋಂಕು ಇದ್ದದ್ದು ದೃಢಪಟ್ಟಿತ್ತು.
92 ಮಂದಿಯ ಗಂಟಲು ದ್ರವ ಪರೀಕ್ಷೆ
ದಾವಣಗೆರೆಯಲ್ಲಿ ಕಂಡುಬಂದಿರುವ ಇಬ್ಬರು ಸೋಂಕಿತರ ಒಟ್ಟು 92 ಜನರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದವರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಎರಡು ಎಪಿಕ್ ಸೆಂಟರ್ ಪ್ರದೇಶದ ಎಲ್ಲರ ಗಂಟಲು ದ್ರವಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಸಾವನ್ನಪ್ಪಿರುವ ವೃದ್ಧನ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ. ಆದರೆ ವೃದ್ಧನ ಓರ್ವ ಸೊಸೆ ಮಾರ್ಚ್ 15ರಂದು ಗುಜರಾತ್ ಗೆ ಹೋಗಿ ಬಂದಿದ್ದಾರೆ.
ದಾವಣಗೆರೆಯಲ್ಲಿ ಜನರ ಪ್ರತಿಭಟನೆ: ಲಘು ಲಾಠಿ ಪ್ರಹಾರ
ಗುಜರಾತ್ ನಿಂದ ಬಂದಿದ್ದ ವೃದ್ಧನ ಸೊಸೆ
ಗುಜರಾತ್ ನಿಂದ ಬಂದಿದ್ದ ಈ ವೃದ್ಧನ ಸೊಸೆಯಿಂದ ಈ ಸೋಂಕು ಬಂದಿರಬಹುದೇ ಎಂಬ ಪರಿಶೀಲನೆ ನಡೆಯುತ್ತಿದೆ. ಈ ವೃದ್ಧನ ಅಂತ್ಯಕ್ರಿಯೆ ಮಾಡುವಾಗ ಎಲ್ಲಾ ಮುಂಜಾಗೃತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಜೊತೆಗೆ ರೋಗಿ 556 ಸಂಪರ್ಕದಲ್ಲಿದ್ದ 29 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ರೋಗಿ 533 ಸಂಪರ್ಕದಲ್ಲಿದ್ದ 70 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ನರ್ಸ್ ಪತಿ ಹಾಗೂ ಇನ್ನೊಬ್ಬ ಮಗನ ವರದಿ ಹಾಗೂ ನರ್ಸ್ ಹೆರಿಗೆ ಮಾಡಿಸಿದ್ದ ಮಹಿಳೆ ಹಾಗೂ ಮಗುವಿನ ವರದಿ ನೆಗೆಟಿವ್ ಬಂದಿದೆ. ನರ್ಸ್ ಕೆಲಸ ಮಾಡುತ್ತಿದ್ದ ಪಿಎಚ್ ಸಿ ಕೇಂದ್ರದ ಸಿಬ್ಬಂದಿಯೆಲ್ಲರ ವರದಿ ನೆಗೆಟಿವ್ ಬಂದಿದೆ. ನರ್ಸ್ ಪುತ್ರ ಕೂಡಲ ಸಂಗಮಕ್ಕೆ ಮದುವೆಗೆ ಹೋಗಿ ಬಂದಿದ್ದಾನೆ. ಆತನ ಸಂಪರ್ಕದಲ್ಲಿದ್ದವರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ವೃದ್ಧನ ಸೊಸೆ ಪರೀಕ್ಷೆ
ಕೊರೊನಾ ಸೋಂಕಿಗೆ ಒಳಗಾಗಿದ್ದ ವೃದ್ಧನ ಸೊಸೆ ಗುಜರಾತ್ ಗೆ ಹೋಗಿಬಂದಿದ್ದಾರೆ. ಅವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ವಹಿಸಲಾಗುವುದು. ಅವಲೋಕನದಲ್ಲಿರುವ ಎಲ್ಲರ ಪರೀಕ್ಷೆ ಮಾಡಲಾಗುತ್ತದೆ. ಕೆಮ್ಮು, ನೆಗಡಿ, ಜ್ವರ ಕಂಡುಬಂದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಹಾಗೂ ಮೆಡಿಕಲ್ ಸ್ಟೋರ್ ಗಳಲ್ಲಿ ಔಷಧಿ ತೆಗೆದುಕೊಳ್ಳುವುದು ಕಂಡುಬಂದಿದೆ. ಅಂಥವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ.