ಎಚ್ ಡಿ ಕುಮಾರಸ್ವಾಮಿಗೆ ಎಲ್ಲಿದೆ ನೈತಿಕತೆ?; ವಿಜಯೇಂದ್ರ
ದಾವಣಗೆರೆ, ಸೆಪ್ಟೆಂಬರ್ 30: " ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ವಿಚಾರಕ್ಕೆ ತಂತಿ ಮೇಲಿನ ನಡಿಗೆ ಎಂದು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ" ಎಂದು ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.
ದಾವಣಗೆರೆ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಯುವಮೋರ್ಚಾ ಕಾರ್ಯಕ್ರಮಕ್ಕೆ ಬರುವ ಮುನ್ನ ಮಾತನಾಡಿ, ಯಡಿಯೂರಪ್ಪ ಹುಟ್ಟು ಹೋರಾಟಗಾರರು. ಅವರು ಹೋರಾಟದ ಹಿನ್ನೆಲೆಯಲ್ಲಿ ಹೇಳಿರಬಹುದು. ಪಕ್ಷ ಸಂಘಟನೆ, ಹೊಂದಾಣಿಕೆಯಿಂದ ಸರ್ಕಾರ ಮುನ್ನಡೆಯುತ್ತಿರುವ ಬಗ್ಗೆ ಹಿರಿಯರು ಪ್ರತಿಕ್ರಿಯೆ ನೀಡುತ್ತಾರೆ ಎಂದು ರೇಣುಕಾಚಾರ್ಯ ಅವರ ಕಡೆ ಕೈ ತೋರಿಸಿದರು.
ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಪತ್ರ ಬರೆದ ಬಿ.ವೈ. ವಿಜಯೇಂದ್ರ
ಇನ್ನು ರಾಜ್ಯಾಧ್ಯಕ್ಷ ಕಟೀಲ್ ಪಕ್ಷದ ಹುದ್ದೆಗಳನ್ನು ಬದಲಾವಣೆ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕಟೀಲ್ ಅವರು ರಾಜ್ಯಾಧ್ಯಕ್ಷ ಆದಾಗಿನಿಂದ ನಾನು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಯುವ ಮೋರ್ಚಾಕ್ಕೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಅಗಿಲ್ಲ ಎಂದರು.
ಇನ್ನು ಎಚ್ ಡಿಕೆ ಅವರ ಜೊತೆ ಟ್ವಿಟರ್ ವಾರ್ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ರಾಜಕಾರಣಿಗಳಿಗೆ ನೈತಿಕ ಪಾಠ ಹೇಳಿ ಕೊಡುತ್ತಿದ್ದಾರೆ. ಅವರಿಗೆ ನೈತಿಕತೆ ಇದೆಯಾ ಎನ್ನುವುದರ ಮೂಲಕ ಟಾಂಗ್ ನೀಡಿದರು.
ಇನ್ನು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪ ಅವರು ಸೇರಿದಂತೆ ಎಲ್ಲರಿಗೂ ಕುಮಾರಸ್ವಾಮಿಯವರು ನೈತಿಕತೆ ಪಾಠ ಹೇಳಿದ್ದೀರಿ. ಆದರೆ ಆದಿಚುಂಚನಗಿರಿ ಸ್ವಾಮೀಜಿ ಫೋನ್ ಟ್ರ್ಯಾಪ್ ಮಾಡುವ ಮೂಲಕ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಧೈರ್ಯವಿಲ್ಲ ಎಂದರೆ ನಾವು ಬರುತ್ತೇವೆ; ಕುಮಾರಸ್ವಾಮಿ ಟ್ವೀಟ್
ಇದರಲ್ಲಿ ಇಲ್ಲವಾ ನೈತಿಕತೆ? ತಾವು ಸಿಎಂ ಆಗಿ ಉಳಿದುಕೊಳ್ಳಲು, ಅಧಿಕಾರದಲ್ಲಿ ಮುಂದುವರೆಯಲು ಏನೆಲ್ಲಾ ಮಾಡಿದ್ದೀರಿ! ಇಂತಹ ಕೆಟ್ಟ ಚಾಳಿ ಮಾಡಿದ್ದೀರಿ. ರಾಜ್ಯದ ಸಿಎಂ ಅಗಿ ಐಷಾರಾಮಿ ಕಾರಿನಲ್ಲಿ ಓಡಾಡಿ, ರಾಜ್ಯದ ಮರ್ಯಾದೆ ಕಳೆದಿದ್ದೀರಿ. ಇದಾ ನಿಮ್ಮ ನೈತಿಕತೆ? ಆದರೆ ಯಡಿಯೂರಪ್ಪ ಸಿಎಂ ಆದ ಮೇಲೆ ರಾಜ್ಯ ಸಂಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರಿಂದ ಮಾತ್ರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎಂದು ವರಿಷ್ಠರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರು. 104 ಸ್ಥಾನ ತೆಗೆದುಕೊಂಡು, ನಾವು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಕಾಂಗ್ರೆಸ್, ಜೆಡಿಎಸ್ ಗೆ ಉಳಿಗಾಲ ಇಲ್ಲ ಎಂದು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದರು ಎಂದು ಕಾಂಗ್ರೆಸ್ - ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.