ದಾವಣಗೆರೆ: 30 ಅಡಿ ಎತ್ತರದ ಶ್ರೀರಾಮನ ಮೂರ್ತಿ ಅನಾವರಣ
ದಾವಣಗೆರೆ. ಆಗಸ್ಟ್ 04: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಆ.5 ರಂದು ನಡೆಯುತ್ತಿರುವ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.
ಈ ಹಿನ್ನೆಲೆಯಲ್ಲಿ ದಾವಣಗೆರೆಯ ಶ್ರೀರಾಮನ ಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ನಗರದ ಹೊಂಡದ ವೃತ್ತದಲ್ಲಿ ಸುಮಾರು 30 ಅಡಿ ಎತ್ತರದ ಶ್ರೀರಾಮನ ಬೃಹತ್ ಮೂರ್ತಿ ಅಳವಡಿಸಿದ್ದಾರೆ.
ರಾಮಮಂದಿರ ಭೂಮಿ ಪೂಜೆ; ದಾವಣಗೆರೆ, ಕಲಬುರಗಿಯಲ್ಲಿ ನಿಷೇಧಾಜ್ಞೆ ಜಾರಿ
ಬುಧವಾರ ನಡೆಯುವ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ, ಯಾವುದೇ ವಿಘ್ನಗಳು ಅಡ್ಡಿಬಾರದಂತೆ ಪ್ರಾರ್ಥಿಸಿ ನಗರದ ಪಿ.ಜೆ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಸರಳವಾಗಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರಾದ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.
ಈ ಸಮಯದಲ್ಲಿ ಯಾವುದೇ ಘೋಷಣೆಗಳನ್ನು ಕೂಗದೇ, ಯಾರಿಗೂ ತೊಂದರೆಯಾಗದಂತೆ ಸರಳವಾಗಿ ಪೂಜೆ ಕೈಗೊಳ್ಳಲಾಗುವುದು, ನಂತರ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಜಗಜ್ಯೋತಿ ಬಸವಣ್ಣನವರ ಪ್ರತಿಮೆ, ಮದಕರಿ ನಾಯಕರ ಪ್ರತಿಮೆ, ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.