ಹರಿಹರಕ್ಕೂ ಅಯೋಧ್ಯೆ ಶ್ರೀರಾಮನಿಗೂ ಏನು ನಂಟು? ಪರಿಶೀಲನೆ ಶುರು
ಹರಿಹರ, ನವೆಂಬರ್ 19: ತುಂಗಭದ್ರಾ ನದಿ ತೀರದ ಹರಿಹರದ ಹೊರವಲಯದ ನಾರಾಯಣ ಆಶ್ರಮದಲ್ಲಿರುವ ಶ್ರೀರಾಮ ದೇವರ ಮೂರ್ತಿ ಅಯೋಧ್ಯೆಯದ್ದೇ ಎಂದು ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಬಗ್ಗೆ ಪರಿಶೀಲನೆ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಈ ವಿಗ್ರಹದ ಐತಿಹಾಸಿಕ ಹಿನ್ನೆಲೆ ತಿಳಿಯಲು ದಾವಣಗೆರೆ ವಿ.ವಿ.ಯ ಇತಿಹಾಸ ತಜ್ಞರು ಹಾಗೂ ಪುರಾತತ್ವ ತಜ್ಞರಿಂದ ಮಾಹಿತಿ ಪಡೆಯಲಾಗುವುದು, ಆಧಾರವಿಲ್ಲದ ಅಂತೆ - ಕಂತೆ ಮಾತುಗಳಿಂದ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಪರಿಶೀಲಿಸಿದ ನಂತರವೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯ ಎಂದರು.
ಕರುನಾಡಿನ ತುಂಗಭದ್ರೆಯ ತಟದಲ್ಲಿ ನೆಲೆಸಿದ್ದನಾ ಅಯೋಧ್ಯೆಯ ಶ್ರೀರಾಮ?
ಸಮರ್ಥ ರಾಮದಾಸರು ಅಯೋಧ್ಯೆ ಮೂಲದ ರಾಮ ಮಂದಿರವನ್ನು ಹರಿಹರಸಮೀಪದ ನಾರಾಯಣಾಶ್ರಮದಲ್ಲಿ ಸ್ಥಾಪಿಸಿದ್ದಾರೆ ಎಂಬ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಒನ್ಇಂಡಿಯಾ ಕನ್ನಡದಲ್ಲಿ ವರದಿ ಓದಿರುತ್ತೀರಿ.
ಅಯೋಧ್ಯೆಯ ಮೇಲೆ ಮೊಘಲ್ ದೊರೆ ಬಾಬರ್ ಆಕ್ರಮಣ ಮಾಡಿದ ಸಂದರ್ಭ ಅಯೋಧ್ಯೆಯ ರಾಮ ಮಂದಿರದ ಅರ್ಚಕ ಶ್ಯಾಮಾನಂದ ಮಹಾರಾಜರು ಮೂಲ ವಿಗ್ರಹಗಳನ್ನು ಕಾಪಾಡಲು ಅಲ್ಲಿಂದ ವಿಗ್ರಹಗಳೊಂದಿಗೆ ತಪ್ಪಿಸಿಕೊಂಡರು. ವಿಗ್ರಹಗಳೊಂದಿಗೆ ಜೋಪಾನವಾಗಿ ದಕ್ಷಿಣ ಭಾರತದ ಕಡೆಗೆ ಪ್ರಯಾಣ ಬೆಳೆಸಿದ ಅವರು, ದಕ್ಷಿಣ ಭಾಗದ ಮಹಾರಾಷ್ಟ್ರದ ಪೈಟಾನ್ ಎನ್ನುವ ನಗರಕ್ಕೆ ಬಂದರು.
ನಂತರ ಅಲ್ಲಿನ ಅರಸ ಏಕನಾಥ ಮಹಾರಾಜ್ ಎನ್ನುವವರಿಗೆ ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳನ್ನು ಹಸ್ತಾಂತರಿಸಿ, ಪೂಜಿಸಲು ಸೂಚಿಸಿದರು ಎಂದು ಹೇಳುತ್ತದೆ ಇತಿಹಾಸ. ಏಕನಾಥ ಮಹಾರಾಜ್ ಅವರು ದತ್ತಾತ್ರೆಯನ ಆರಾಧಕರಾಗಿದ್ದು, ರಾಮನ ಮೂರ್ತಿಯನ್ನು ಹೇಗೆ ಪೂಜಿಸಲಿ ಎಂದು ಕೇಳಿದಾಗ, ಮುಂದೆ ಸಮರ್ಥ ರಾಮದಾಸ್ ಅವರಿಗೆ ಹಸ್ತಾಂತರಿಸಲು ಅರ್ಚಕ ಶ್ಯಾಮಾನಂದ ಮಹಾರಾಜ್ ಸೂಚಿಸಿದ್ದರು.
ಸಮರ್ಥ ರಾಮದಾಸ್ ಸ್ವಾಮಿ ದಕ್ಷಿಣ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಬಂದಾಗ ಅಯೋಧ್ಯೆ ಮೂಲದ ಮೂರ್ತಿಗಳನ್ನು ಹರಿಹರದ ತುಂಗಭದ್ರ ನದಿಯ ದಡದಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿಯಿದೆ.