ದಾವಣಗೆರೆ ಪಾಲಿಕೆ ಚುನಾವಣೆ; ಪಕ್ಷೇತರರೇ ಈಗ ಕಿಂಗ್ ಮೇಕರ್
ದಾವಣಗೆರೆ, ನವೆಂಬರ್ 16: ಜಿದ್ದಾಜಿದ್ದಿಯಿಂದ ನಡೆದ ದಾವಣಗೆರೆ ಪಾಲಿಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫಲಿತಾಂಶವೂ ಹೊರಬಿದ್ದಿದೆ. ಆದರೆ ಮತದಾರರು ಮಾತ್ರ ಯಾವುದೇ ಪಕ್ಷಕ್ಕೆ ಬಹುಮತ ನೀಡದೆ ಅತಂತ್ರ ರಾಜಕೀಯ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಆದರೆ ಪಕ್ಷೇತರರು ಯಾರ ಕಡೆ ಒಲವು ತೋರುತ್ತಾರೋ ಅವರೇ ಪಾಲಿಕೆ ಅಧಿಕಾರ ಹಿಡಿಯುತ್ತಾರೆ. ಈ ಚುನಾವಣೆಯಲ್ಲಿ ಪಕ್ಷೇತರರೇ ಕಿಂಗ್ ಮೇಕರ್ ಗಳಾಗಿದ್ದಾರೆ.
ಈ ಬಾರಿ ದಾವಣಗೆರೆ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ 45 ವಾರ್ಡ್ ಗಳಲ್ಲಿ 22 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್ ಹಾಗೂ 5 ಪಕ್ಷೇತರರ ಸ್ಥಾನಗಳು ಗೆಲುವು ಸಾಧಿಸಿ ಪಾಲಿಕೆ ಅಧಿಕಾರವನ್ನು ಅತಂತ್ರಕ್ಕೆ ದೂಡಿದೆ.
ಅಧಿಕಾರಕ್ಕೆ ಬಿಜೆಪಿ-ಕಾಂಗ್ರೆಸ್ ಹಣಾಹಣಿ
ಇದು ಮೂರನೇ ಮಹಾನಗರ ಪಾಲಿಕೆ ಚುನಾವಣೆಯಾಗಿದ್ದು, ಮೊದಲ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡಿತ್ತು. ಎರಡನೇ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿತ್ತು. ಮೂರನೇ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿ ನಡೆಸುತ್ತಿದೆ.
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಫೈಟ್; ಕಾಂಗ್ರೆಸ್ ಹಾದಿ ಸುಗಮ
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ ಕಾಂಗ್ರೆಸ್
ಕಳೆದ ಬಾರಿ 41 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ 39 ಸ್ಥಾನಗಳನ್ನು ಕಾಂಗ್ರೆಸ್ ಪಡೆದು ಅಧಿಕಾರ ನಡೆಸಿದ್ದರೆ, ಈ ಬಾರಿ 45 ವಾರ್ಡ್ ಗಳಲ್ಲಿ ಕೇವಲ 22 ಸ್ಥಾನಗಳನ್ನು ಪಡೆದುಕೊಂಡಿದೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಾಗಿದೆ. ಕಾಂಗ್ರೆಸ್ ಜನಪ್ರಿಯತೆ ಕುಸಿಯುತ್ತಿದೆಯಾ ಎಂಬ ಪ್ರಶ್ನೆ ಮತದಾರರನ್ನು ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಮುಖಂಡರನ್ನೂ ಕಾಡುತ್ತಿದೆ. ಅಲ್ಲದೆ ಒಂದು ಸ್ಥಾನವಿದ್ದ ಬಿಜೆಪಿ ಈ ಬಾರಿ 17 ಸ್ಥಾನಗಳನ್ನು ಪಡೆದುಕೊಂಡಿದೆ. ಆದ್ರೆ ಪಾಲಿಕೆ ಗದ್ದುಗೆ ಹಿಡಿಯಲು 23 ಸ್ಥಾನಗಳು ಬೇಕಿದ್ದು, ಕಾಂಗ್ರೆಸ್ ಗೆ ಕೇವಲ ಒಂದು ಸ್ಥಾನ ಬೇಕಿದೆ. ಕಾಂಗ್ರೆಸ್ ಬಂಡಾಯ ನಿಂತು ಗೆದ್ದಿದ್ದ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು, ಪಕ್ಷೇತರ ಅಭ್ಯರ್ಥಿಗಳನ್ನು ಸಹ ಪಕ್ಷಕ್ಕೆ ಸೇರಿಸಿಕೊಂಡು ಮತ್ತೆ ಅಧಿಕಾರವನ್ನು ಹಿಡಿಯುಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಬಂಡಾಯ ಶಮನಕ್ಕೆ ಪ್ರಯತ್ನ ಪಟ್ಟರೂ ದೊರೆಯದ ಫಲ
ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಪ್ರಮುಖರಿಗೆ ಕನಿಷ್ಠ 30-34 ಸ್ಥಾನ ಗಳಿಸುತ್ತೇವೆ ಎಂಬ ವಿಶ್ವಾಸವಿತ್ತು. ಪಕ್ಷದಲ್ಲಿ ಭುಗಿಲೆದ್ದ ಬಂಡಾಯ ಶಮನಕ್ಕಾಗಿ ಶತಪ್ರಯತ್ನ ಮಾಡಿದರೂ ಪ್ರತಿಫಲ ದೊರೆಯಲಿಲ್ಲ. 9 ಜನ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಇದೂ ಬಿಜೆಪಿಯ ಸಂಖ್ಯೆ ಕುಸಿತಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಹರಿದಾಡುತ್ತಿವೆ.
ದಾವಣಗೆರೆ ಪಾಲಿಕೆ ಚುನಾವಣೆ; ಈ ಬಾರಿ ಮಹಿಳೆಯರದ್ದೇ ದರ್ಬಾರ್
ಪುನಃ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು
32ನೇ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಮೇಯರ್ ಉಮಾ ಪ್ರಕಾಶ, 19ನೇ ವಾರ್ಡ್ ನಿಂದ ಶಿವಪ್ರಕಾಶ್ ಗೆಲುವು ಸಾಧಿಸಿದ್ದಾರೆ. ಅಧಿಕಾರ ಗದ್ದುಗೆಗಾಗಿ ಉಚ್ಛಾಟಿತರನ್ನು, ಪುನಃ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಹಾಗೂ ಪಕ್ಷೇತರರನ್ನು ಮತ್ತೆ ಜೆಡಿಎಸ್ ಅನ್ನು ಮನವೊಲಿಸಿ ಪಾಲಿಕೆ ಅಧಿಕಾರವನ್ನು ಪಡೆಯಲು ಶತಾಯಗತಾಯ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ.