ದಾವಣಗೆರೆಯಲ್ಲಿ ಭ್ರಷ್ಟರಿಗೆ ಬೆಣ್ಣೆದೋಸೆ ತಿನ್ನಿಸಿದ ಎಸಿಬಿ ಅಧಿಕಾರಿಗಳು
ದಾವಣಗೆರೆ, ಆಗಸ್ಟ್. 21: ಇಂದು ಮಂಗಳವಾರ ಬೆಳ್ಳಂಬೆಳಗ್ಗೆ ಎರಡು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಶಿಕಾರಿಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಎಫ್ಡಿಎ ಚನ್ನಪ್ಪನ ಮನೆ ಹಾಗೂ ಮಲೆಬೆನ್ನೂರು ಬ್ರಾಂಚ್ ಡಿಸಿಸಿ ಬ್ಯಾಂಕ್ ಅಸಿಸ್ಟಂಟ್ ಮ್ಯಾನೇಜರ್ ಭೀಮನಗೌಡ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಲಂಚ ಸ್ವೀಕರಿಸುತ್ತಿದ್ದ ಸರ್ಕಾರಿ ಅಧಿಕಾರಿಗಳನ್ನು ಹಿಡಿದ ಎಸಿಬಿ
ದಾವಣಗೆರೆಯ ಆಜಾದ್ ನಗರದಲ್ಲಿರುವ ಚನ್ನಪ್ಪನ ನಿವಾಸ ಹಾಗೂ ಎಸ್ಎಸ್ ಲೇಔಟ್ ನಲ್ಲಿರುವ ಭೀಮನಗೌಡ ಅವರ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಭೀಮನಗೌಡ ಎನ್ನುವರು ಅಕ್ರಮವಾಗಿ ದಾವಣಗೆರೆಯಲ್ಲಿ ಒಂದು ಮನೆ, 4 ನಿವೇಶನ, 3 ಬೈಕ್, ಹರಿಹರ ತಾಲೂಕಿನ ವಾಸನ ಗ್ರಾಮದಲ್ಲಿ 4 ಎಕರೆ ಜಮೀನು, ಸ್ವಗ್ರಾಮವಾದ ಹೀರೆಹಡಗಲಿ ತಾಲೂಕಿನ ಯಾರಡ ಗ್ರಾಮದಲ್ಲಿ 8 ಎಕರೆ ಅಕ್ರಮ ಜಮೀನು ಹೊಂದಿದ್ದಾರೆ ಎನ್ನುವ ಆರೋಪವಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಎಸಿಬಿ ಡಿವೈಎಸ್ ಪಿ ಪರಮೇಶ್ವರ್, ಪ್ರಕಾಶ್ ಗೌಡ ಪಾಟೀಲ್, ನಾಗಪ್ಪ ಹಾಗೂ ಎಸಿಬಿ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ.