"ನಾನೇ ಡಿಸಿಎಂ ಆಗ್ತೀನಿ" ಎಂದು ನಕ್ಕು ನುಣುಚಿಕೊಂಡ ರೇಣುಕಾಚಾರ್ಯ
ದಾವಣಗೆರೆ, ಜನವರಿ 8: "ಸುಮ್ನೆ ಡಿಸಿಎಂ ಸ್ಥಾನದ ಬಗ್ಗೆ ಗೊಂದಲವಾಗುತ್ತಿದೆ. ನಾನೇ ಡಿಸಿಎಂ ಆಗ್ತಿನಿ ಬಿಡಿ" ಎಂದು ಹೇಳಿ, ನಂತರ ತಮಾಷೆಗೆ ಹೇಳಿದೆ ಎಂದು ನಗೆಯಾಡಿದರು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ.
ದಾವಣಗೆರೆಯಲ್ಲಿ ನೂತನ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ರನ್ನು ಅಭಿನಂದಿಸಲು ಆಗಮಿಸಿದ್ದ ರೇಣುಕಾಚಾರ್ಯ, "ಮಧ್ಯ ಕರ್ನಾಟಕದ ದಾವಣಗೆರೆಗೆ ಒಂದು ಸಚಿವ ಸ್ಥಾನ ಬೇಕು. ಈ ಬಗ್ಗೆ ಸಚಿವ ಈಶ್ವರಪ್ಪನವರ ಜೊತೆ ಮಾತನಾಡಿ ದಾವಣಗೆರೆಗೆ ಸಚಿವ ಸ್ಥಾನ ಬೇಕು ಎಂದಿದ್ದೇವೆ. ಅಲ್ಲದೆ ಅವರೇ ಹೇಳಿದ್ದಾರೆ, ನನಗೆ ಎರಡು ಜಿಲ್ಲೆಗಳನ್ನು ನೋಡಿಕೊಳ್ಳಲು ಆಗುತ್ತಿಲ್ಲ ನೀವೇ ಯಾರಾದ್ರು ಉಸ್ತುವಾರಿ ಸಚಿವರಾಗಿ ಎಂದು. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣಾ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಹೆಸರಿನ ಬದಲು ಭಯೋತ್ಪಾದಕ ಪಕ್ಷ ಅಂತ ಇರಬೇಕಿತ್ತು:ರೇಣುಕಾಚಾರ್ಯ
ಡಿಸಿಎಂ ಸ್ಥಾನದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೀರಾ ಎಂಬ ಪ್ರಶ್ನೆಗೆ, "ನಾನಿನ್ನೂ ರಾಜಕೀಯವಾಗಿ ಮೆಚ್ಯೂರ್ ಆಗಿಲ್ಲ. ಇನ್ನೂ ಹುಡುಗಾಟ ಮಾಡುತ್ತಾ ಹೋದರೆ ಜನ ಮೆಚ್ಚಲ್ಲ" ಎಂದು ಹೇಳಿಕೊಂಡರು.
ಇದೇ ಸಂದರ್ಭ. ಪೌರತ್ವ ವಿರೋಧಿ ಹೋರಾಟ ಪ್ರತಿಭಟನೆಗಳು ಕಾಂಗ್ರೆಸ್ ಕೃಪಾಪೋಷಿತ ರ್ಯಾಲಿಗಳು ಎಂದು ಕಿಡಿಕಾರಿದರು. "ನಮ್ಮ ದೇಶದಲ್ಲಿ ನೆಲೆಸೋಕೆ ಯಾರಿಗೆ ಬೇಕಾದರೂ ಅವಕಾಶ ಕೊಡಲು ಮಾವನ ಮನೆ ಅಲ್ಲ" ಎಂದು ರೇಣುಕಾಚಾರ್ಯ ಪೌರತ್ವ ಕಾಯ್ದೆ ವಿರೋಧಿಸಿದವರ ಬಗ್ಗೆ ಕಟುವಾಗಿ ಟೀಕಿಸಿದರು. ವೋಟ್ ಬ್ಯಾಂಕ್ ರಾಜಕಾರಣಿಗಳು ಕಾಂಗ್ರೆಸ್ ನ ಕೃಪಾ ಪೋಷಿತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕಾನೂನು ಕೈಗೆ ತೆಗೆದುಕೊಂಡರೆ ಸುಮ್ಮನಿರುವುದಿಲ್ಲ. ಮುಸ್ಲಿಂ ಧರ್ಮ ಗುರುಗಳೇ ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿದ್ದಾರೆ" ಎಂದರು.
ಸಹಿ ಸಂಗ್ರಹದ ಮೂಲಕ ಆಖಾಡಕ್ಕಿಳಿದ ರೇಣುಕಾಚಾರ್ಯ: ಟಾರ್ಗೆಟ್ ಯಾರು?
"ಮೋದಿ, ಅಮಿತ್ ಶಾ, ಯಡಿಯೂರಪ್ಪನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂ ಕಾರ್ಯಕರ್ತರು ಕೊಲೆಯಾದರು. ಆಗ ಏಕೆ ಮಾತನಾಡಿಲ್ಲ, ಈಗ ಮುಸ್ಲಿಂ ಯುವಕರು ಸಾವನ್ನಪ್ಪಿದ್ದಕ್ಕೆ ಪರಿಹಾರ ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ, ಸಾವಿಗೆ ಸರ್ಕಾರವೇ ಕಾರಣ ಎಂದು ಹೇಳುತ್ತಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಈ ಬಗ್ಗೆ ಬೆಂಕಿ ಹಚ್ಚಲು ಕಾರಣವೇ ಮಾಜಿ ಸಚಿವ ಯುಟಿ ಖದರ್. ಖಾದರ್ ಗೆ ಅತಿಯಾದ ಆಸೆ ಇದ್ದರೆ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ. ಅಲ್ಲಿ ಹಿಂದೂಗಳ ರಕ್ಷಣೆಗೆ ಹೋರಾಟ ಮಾಡಲಿ ನೋಡೋಣಾ. ಪಾಕಿಸ್ತಾನದಲ್ಲಿ ಹಿಂದೂಗಳು ಯಾವ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಗೊತ್ತಾಗುತ್ತೆ" ಎಂದು ಆಕ್ರೋಶಗೊಂಡರು.