ಪ್ರೀತಿಸಿ ಮದುವೆಯಾಗಿ ವಿಕೃತ ಕಿರುಕುಳ; ಸೈಕೋ ಗಂಡನ ವಿರುದ್ಧ ಯುವತಿ ದೂರು
ದಾವಣಗೆರೆ, ಜನವರಿ 6: ಫೇಸ್ ಬುಕ್ ನಲ್ಲಾದ ಪರಿಚಯ ಪ್ರೀತಿಗೆ ತಿರುಗಿ ಮನೆಯವರನ್ನು ಎದುರು ಹಾಕಿಕೊಂಡು ಮದುವೆಯಾಯಿತು ಈ ಜೋಡಿ. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಅನುಮಾನವೆಂಬ ಭೂತ ಹುಡುಗನ ತಲೆ ಹೊಕ್ಕಿದೆ. ಹೀಗೆ ತಲೆ ಹೊಕ್ಕಿದ್ದೇ ಹುಡುಗ ವರಸೆ ಬದಲಿಸಿದ್ದಾನೆ. ಆ ಯುವತಿಗೆ ವಿಕೃತ ಹಿಂಸೆ ನೀಡಲು ಆರಂಭಿಸಿದ್ದಾನೆ.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಗಂಡನ ಕಿರುಕುಳ ತಾಳಲಾರದೆ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಜಗಳೂರು ಪಟ್ಟಣದ ಭರಮಸಮುದ್ರ ವಾಸಿಯಾದ ಪ್ರಿಯಾ ಕಿರುಕುಳಕ್ಕೊಳಗಾದ ಮಹಿಳೆ.
ಮನೆಯವರಿಗೆ ಗೊತ್ತಿಲ್ಲದೆ ಮದುವೆ
ಪ್ರಿಯಾ ಎರಡು ವರ್ಷಗಳ ಹಿಂದೆ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಟ್ರೇನಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಪ್ರಿಯಾ ಗ್ರಾಮದವನಾದ ಕಲ್ಲೇಶ್ ಫೇಸ್ ಬುಕ್ ಮೂಲಕ ಪರಿಚಿತಗೊಂಡಿದ್ದಾನೆ. ನಂತರ ಆ ಪರಿಚಯ ಪ್ರೀತಿಗೆ ತಿರುಗಿದೆ. ನಂತರ ಮನೆಯವರಿಗೆ ಗೊತ್ತಿಲ್ಲದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು. ಪತ್ನಿ ಪ್ರಿಯಾಳನ್ನು ನರ್ಸಿಂಗ್ ಮಾಡಲು ಹಾವೇರಿಗೆ ಸೇರಿಸಿದ್ದನು.
ದಾವಣಗೆರೆ: ಕುಡಿತಕ್ಕೆ ಹಣ ನೀಡಲಿಲ್ಲವೆಂದು ಪ್ರೀತಿಸಿ ಮದುವೆಯಾದವಳನ್ನೇ ಕೊಂದ
ಅಕ್ರಮ ಸಂಬಂಧದ ಶಂಕೆ
ಆದರೆ ನರ್ಸಿಂಗ್ ಗಾಗಿ ಪ್ರಿಯಾಳನ್ನು ಸೇರಿಸಿದ ನಂತರ ಕಲ್ಲೇಶ್ ಗೆ ಅನುಮಾನ ಶುರುವಾಗಿದೆ. ಪ್ರಿಯಾ ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ಚಿತ್ರಹಿಂಸೆ ಕೊಡಲು ಆರಂಭಿಸಿದ್ದಾನೆ. ಮನೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ನೀಡಿರುವುದಾಗಿ ಯುವತಿ ಆರೋಪ ಮಾಡಿದ್ದಾಳೆ.
"ಪತಿವ್ರತೆಯಾಗಿದ್ರೆ ಕೈಯಲ್ಲಿ ಕರ್ಪೂರ ಹಚ್ಚಿಕೋ"
ಪ್ರಿಯಾಗೆ ಸಾಕಷ್ಟು ಕಿರುಕುಳ ನೀಡುತ್ತಾ ಬಂದ ಕಲ್ಲೇಶ್, ಮೇಣದ ಬತ್ತಿ, ಕರ್ಪೂರ, ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಿ ಪ್ರಿಯಾಳ ಮೈಯಲ್ಲಾ ಸುಟ್ಟು ವಿಕೃತಿ ಮೆರೆಯುತ್ತಿದ್ದ. ಅಲ್ಲದೆ "ನೀನು ಪತಿವ್ರತೆಯಾಗಿದ್ದರೆ ಕೈ ಮೇಲೆ ಕರ್ಪೂರ ಹಚ್ಚಿಕೊ, ಆಗ ಸುಟ್ಟರೆ ನೀನು ಪತಿವ್ರತೆಯಲ್ಲ, ಸುಡದೇ ಇದ್ದರೆ ಪತಿವ್ರತೆ" ಎಂದು ಕೈ ಮೇಲೆ ಕರ್ಪೂರ ಹಚ್ಚಿ ವಿಕೃತ ಮೆರೆದಿದ್ದನು.
ಪ್ರೇಮಿಗಳಿಗೆ ಜೀವ ಬೆದರಿಕೆ: ರಕ್ಷಣೆ ಕೋರುತ್ತಿರುವ ಜೋಡಿಗಳು
ಖಾಸಗಿ ವೀಡಿಯೋ ಇಟ್ಟುಕೊಂಡು ಬೆದರಿಕೆ
ಅಲ್ಲದೆ ಗಂಡ ಹೆಂಡತಿಯ ಖಾಸಗಿ ವೀಡಿಯೋಗಳನ್ನು ಚಿತ್ರಿಸಿಕೊಂಡಿದ್ದ ಕಲ್ಲೇಶ್, ಮನೆಯವರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದರೆ ಆ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಇತ್ತ ಮನೆಗೆ ಹೋಗಲಾರದೇ, ಈ ಕಡೆ ಗಂಡನ ಜೊತೆ ಬದುಕಲಾರದೆ ಪ್ರಿಯಾ ಚಿತ್ರ ಹಿಂಸೆ ಅನುಭವಿಸುತ್ತಿದ್ದಳು. ಆದರೆ ಕಿರುಕುಳ ಮಿತಿ ಮೀರಿದಾಗ, ಪ್ರಿಯಾ, ಅಪ್ಪ ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಮಗಳನ್ನು ಕರೆದಂದು ಜಗಳೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ದೂರು ನೀಡಿದರೂ ಆರೋಪಿಯನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿಲ್ಲ ಎಂದು ನ್ಯಾಯಕ್ಕಾಗಿ ಪೋಷಕರು ಹಾಗೂ ಯುವತಿ ದಿಕ್ಕು ತೋಚದೆ ಇದ್ದಾರೆ.