ದಾವಣಗೆರೆ: ಪತ್ನಿ ಕೊಂದಿದ್ದ ವೈದ್ಯ 9 ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ದಾವಣಗೆರೆ, ಅಕ್ಟೋಬರ್ 23: ವೈದ್ಯನೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದಿದ್ದ ಪ್ರಕರಣ ಭೇದಿಸುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೊಂದು ಹೈಪ್ರೊಫೈಲ್ ಕೇಸ್ ಆಗಿದ್ದು, ತನ್ನ ಹೆಂಡತಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದ ಪ್ರಕರಣ ಒಂಬತ್ತು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದ ಡಾ. ಚನ್ನೇಶಪ್ಪ ಹತ್ಯೆ ಮಾಡಿದ ಪತಿಯಾಗಿದ್ದು, ಶಿಲ್ಪಾ ಕೊಲೆಗೀಡಾದ ಪತ್ನಿ. ನ್ಯಾಮತಿ ತಾಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಚನ್ನೇಶಪ್ಪನನ್ನು ಪೊಲೀಸರು ಅ.9ರಂದೇ ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ಹದಿನೆಂಟು ವರ್ಷಗಳ ಹಿಂದೆ ಡಾ. ಚನ್ನೇಶಪ್ಪ ಮತ್ತು ಹಿರೇಕೆರೂರಿನ ಶಿಲ್ಪಾ ಜೊತೆ ವಿವಾಹವಾಗಿತ್ತು. ಇಬ್ಬರ ಸಂಸಾರವೂ ಆರಂಭದ ಮೂರು ವರ್ಷಗಳಲ್ಲಿ ಚೆನ್ನಾಗಿತ್ತು. ಒಂದು ಹೆಣ್ಣು ಹಾಗೂ ಓರ್ವ ಪುತ್ರ ಇದ್ದ ಸುಖ ಸಂಸಾರ ಆಗಿತ್ತು. ಆದರೆ, ಚನ್ನೇಶಪ್ಪನ ಹುಚ್ಚಾಟ ಬರಬರುತ್ತಾ ಹೆಚ್ಚಾಯಿತು. ಮದುವೆ ವೇಳೆ 700 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿ, 7 ಲಕ್ಷ ನಗದು ಅನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು.
ಅದಾದ ಬಳಿಕ ವಿಪರೀತವಾಗಿ ಕುಡಿಯಲು ಶುರು ಮಾಡಿದ್ದ. ಮಾತ್ರವಲ್ಲ, ಕ್ಯಾಸಿನೋ ಚಟ, ಜೂಜಾಟ, ವಾಮಾಚಾರದಂತ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ. ಇದಕ್ಕೆ ಇದ್ದಬದ್ದ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದ. ಆಗಾಗ್ಗೆ ತನ್ನ ಪತ್ನಿ ಹಾಗೂ ಮಕ್ಕಳನ್ನು ದೇವಸ್ಥಾನಕ್ಕೂ ಕರೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ ಏನು?
ಇನ್ನು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಚನ್ನೇಶಪ್ಪ ಕಿರುಕುಳ ನೀಡುತ್ತಿದ್ದ. ಇದರಿಂದ ಶಿಲ್ಪಾ ಮತ್ತು ಅವರ ಪೋಷಕರು ಬೇಸತ್ತಿದ್ದರು. ಈ ಬಗ್ಗೆ ತವರು ಮನೆಯಲ್ಲಿ ಹೇಳಿಕೊಂಡಿದ್ದರು. ಒಂಭತ್ತನೇ ತರಗತಿಯಲ್ಲಿ ಪುತ್ರಿ ಹಾಗೂ ನಾಲ್ಕನೇ ತರಗತಿಯಲ್ಲಿ ಮಗ ಓದುತ್ತಿದ್ದ. ಆದರೂ ಚನ್ನೇಶಪ್ಪ ಕಳೆದ ಒಂಭತ್ತು ತಿಂಗಳ ಹಿಂದೆ ತನ್ನ ಚಾಣಾಕ್ಷತನ ಬಳಸಿ ಶಿಲ್ಪಾಳನ್ನು ಸಾಯಿಸಿದ್ದ.
2021ರ ಫೆಬ್ರವರಿ 11ರಂದು ಪತಿ ಶಿಲ್ಪಾಳಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದ. ಬಳಿಕ ಆಕೆಯ ಪೋಷಕರಿಗೆ ಫೋನ್ ಮಾಡಿ ಶಿಲ್ಪಾ ಸಾವನ್ನಪ್ಪಿದ್ದಾಳೆ ಬನ್ನಿ ಎಂದು ಚನ್ನೇಶಪ್ಪ ಫೋನ್ನಲ್ಲಿ ಮಾಹಿತಿ ತಿಳಿಸಿದ್ದ. ಈ ವೇಳೆ ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಶಿಲ್ಪಾಳ ಭುಜದ ಮೇಲೆ ಇಂಜೆಕ್ಷನ್ನಿಂದ ಚುಚ್ಚಿದ ಗುರುತು ಕಂಡು ಬಂತು.
ನಾನೇ ಇಂಜೆಕ್ಷನ್ ಕೊಟ್ಟೆ
ಆಗ ಚನ್ನೇಶಪ್ಪನು ಶಿಲ್ಪಾಳಿಗೆ ಲೋ ಬಿಪಿ ಆಗಿತ್ತು. ಹಾಗಾಗಿ ನಾನೇ ಇಂಜೆಕ್ಷನ್ ಕೊಟ್ಟೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದ. ಆಗ ಬಾಯಿಂದ ರಕ್ತ ಮಿಶ್ರಿತ ನೊರೆ ಬರುತಿತ್ತು. ಫೆಬ್ರವರಿ 12ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದು ಹೊನ್ನಾಳಿ ಪೊಲೀಸರಿಗೆ ಮೃತ ಶಿಲ್ಪಾಳ ಪೋಷಕರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿದಿನ ರಾತ್ರಿ ಕುಡಿದು ಬಂದು ಅಪ್ಪ- ಅಮ್ಮನಿಗೆ ಹೊಡೆಯುತ್ತಿದ್ದರು. ಪ್ರತಿ ದಿನ ಅಮ್ಮನಿಗೆ, ನನಗೆ ಬೈಯ್ಯುತ್ತಿದ್ದರು. ಅಮ್ಮನಿಗೆ ಸೂಜಿ ಮಾಡುತ್ತಿದ್ದರು ಎಂದು ಮೊಮ್ಮಕ್ಕಳೇ ಹೇಳಿದ್ದಾರೆ. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಶಿಲ್ಪಾಳ ತಂದೆ ಚಂದ್ರಪ್ಪ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ನಿಧಿ ಆಸೆಗೆ ಕೊಂದನಾ?
ಇನ್ನು ಚೆನ್ನೇಶಪ್ಪನ ಮೇಲೆ ಮತ್ತೊಂದು ಅನುಮಾನ ಶುರುವಾಗಿದೆ. ಅದೇನೆಂದರೆ ಆತ ವಾಮಾಚಾರ ನಡೆಸುತ್ತಿದ್ದ. ಜೊತೆಗೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಿದ್ದ. ಕೆಲ ದೇವಸ್ಥಾನಗಳಿಗೆ ಹೋಗಿ ನಿಂಬೆ ಹಣ್ಣು ತರುವುದು ಸೇರಿದಂತೆ ಬೇರೆ ಬೇರೆ ಚಟುವಟಿಕೆ ನಡೆಸುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ನಿಧಿ ಆಸೆಗೆ ಕೊಂದನಾ ಎಂಬ ಆಯಾಮದಲ್ಲಿಯೂ ಈಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಚನ್ನೇಶಪ್ಪ ನಿಧಿಗಾಗಿ ರಾತ್ರೋರಾತ್ರಿ ಮನೆಯಲ್ಲಿ ಪೂಜೆ ಮಾಡಿಸುತ್ತಿದ್ದ. ಕೆಲ ಪೂಜಾರಿಗಳು ನಿಧಿಗಾಗಿ ಬಲಿ ಬೇಕಾಗಿರುವ ಬಗ್ಗೆ ಹೇಳಿದ್ದರು ಎನ್ನಲಾಗುತ್ತಿದ್ದು, ಇದೇ ವಿಚಾರವಾಗಿ ಮಗಳನ್ನು ಕೊಲೆ ಮಾಡಿದ್ದಾರೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಕೊಲೆ ಬೆಳಕಿಗೆ ಬಂದಿದ್ದು ಹೇಗೆ?
ಸುಮಾರು ನಲವತ್ತು ಎಕರೆ ಜಮೀನು ಹೊಂದಿದ್ದ ಆತ ಕುಡಿದು, ಜೂಜಾಡಿ ಹಣ ಕಳೆದಿದ್ದ. ಸಾಲ ತೀರಿಸಲು 32 ಎಕರೆ ಜಮೀನು ಮಾರಿದ್ದ. ಕೇವಲ 8 ಎಕರೆ ಮಾತ್ರ ಇತ್ತು. ಈ ವೇಳೆ ಉಳಿದ ಜಮೀನನ್ನು ಮಕ್ಕಳ ಹೆಸರಿಗೆ ಮಾಡುವುದಾಗಿ ನಂಬಿಸಿದ್ದ. ಈ ವೇಳೆ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಮೃತದೇಹವನ್ನು ಮಣ್ಣು ಮಾಡದೇ ಸುಟ್ಟು ಹಾಕಿದ್ದ. ಆದರೆ, ಆಗಿದ್ದು ಆಗಿ ಹೋಯ್ತು ಎಂಬ ಕಾರಣಕ್ಕೆ ಎಲ್ಲರೂ ಸುಮ್ಮನಾಗಿದ್ದರು. ಬಳಿಕ ಎಫ್ಎಸ್ಎಲ್ ವರದಿ ಬಂದಾಗ ಹೈಡೋಸ್ ಇಂಜೆಕ್ಷನ್ ಕೊಟ್ಟಿರುವುದು ಗೊತ್ತಾಗಿದೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರುವುದು ವರದಿಯಿಂದ ತಿಳಿದು ಬಂದಿದೆ.
ಇನ್ನು ಆಸ್ತಿ ಮಕ್ಕಳಿಗೆ ನೀಡದ ಕಾರಣ ಶಿಲ್ಪಾಳ ಪೋಷಕರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಾತ್ರವಲ್ಲ, ತನ್ನ ಪುತ್ರಿಯದ್ದು ಸಹಜ ಸಾವು ಅಲ್ಲ, ಕೊಲೆ ಎಂಬ ಆರೋಪ ಮಾಡಿದ್ದಾರೆ. ಆರೋಪಿ ಮೊದಲಿಗೆ ನಿರಾಕರಿಸಿದರೆ, ಆಮೇಲೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ತನ್ನ ಹೆಂಡತಿಯನ್ನು ಕೊಂದು ಮುಚ್ಚಿಹಾಕಿದ್ದ ವೈದ್ಯ ಕೊನೆಗೆ ಕಂಬಿ ಹಿಂದೆ ಹೋಗಿದ್ದು, ಮಕ್ಕಳಿಬ್ಬರು ಅನಾಥರಾಗಿದ್ದಾರೆ.