ಪೌರಕಾರ್ಮಿಕರಿಗೆ ಶೀಘ್ರದಲ್ಲೇ ಮನೆ ಹಸ್ತಾಂತರ: ದಾವಣಗೆರೆ ಮೇಯರ್
ದಾವಣಗೆರೆ, ಸೆಪ್ಟೆಂಬರ್ 24: ಪೌರಕಾರ್ಮಿಕರ ಗೃಹ ನಿರ್ಮಾಣ ಕಾರ್ಯವು ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಶೀಘ್ರದಲ್ಲೇ ಅವುಗಳನ್ನು ಪೌರ ಕಾರ್ಮಿಕರಿಗೆ ಹಸ್ತಾಂತರಿಸಲಾಗುವುದು ಎಂದು ಮೇಯರ್ ಬಿ.ಜಿ. ಅಜಯಕುಮಾರ್ ತಿಳಿಸಿದ್ದಾರೆ.
ಇಂದು ಪಾಲಿಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. "ಪೌರಕಾರ್ಮಿಕರ ಗೃಹ ನಿರ್ಮಾಣ ಸ್ಥಳಕ್ಕೆ 2 ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಕರೆದುಕೊಂಡು ಹೋಗಿ ತೋರಿಸಲಾಗಿದೆ. ವೇಗವಾಗಿ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಹಾಗೂ ಎಂಜಿನಿಯರ್ಗೆ ಸಚಿವರು ನಿರ್ದೇಶನ ನೀಡಿದ್ದಾರೆ" ಎಂದರು.
ಗುಡಿಸಲು ಮುಕ್ತ ಆಗುವತ್ತ ಹಿರಿಯೂರು ತಾಲೂಕು: 4448 ಮನೆ ಮಂಜೂರು
ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾತನಾಡಿ, 'ಪಾಲಿಕೆ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಪೌರಕಾರ್ಮಿಕರಿಗೂ ನೀಡಲಾಗುತ್ತದೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚ್ಯವನ್ ಪ್ರಾಶ್ ಅನ್ನು ಆಯುಷ್ ಇಲಾಖೆ ಮಾರ್ಗದರ್ಶನ ಪಡೆದು ವಿತರಿಸಲಾಗಿದೆ. ಇದರಿಂದಾಗಿ ಬೇರೆ ನಗರಗಳಿಗೆ ಹೋಲಿಸಿದರೆ ನಮ್ಮ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರಲ್ಲಿ ಬಹಳ ಕಡಿಮೆ ಕೊರೊನಾ ಪ್ರಕರಣಗಳು ಕಂಡುಬಂದಿವೆ' ಎಂದರು.
Recommended Video
ಕಾರ್ಯಕ್ರಮವನ್ನು ಹಿರಿಯ ಪೌರಕಾರ್ಮಿಕರಾದ ಫಕೀರಮ್ಮ ನಿಂಗಪ್ಪ ಉದ್ಘಾಟಿಸಿದರು. ಉಪಮೇಯರ್ ಸೌಮ್ಯಾ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ. ವೀರೇಶ್ ಗೌರಮ್ಮ ಗಿರಿರಾಜ್, ಜಯಮ್ಮ ಬಾಲರಾಜ್, ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಪೌರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನೀಲಗಿರಿಯಪ್ಪ ಹಾಗೂ ಗೋವಿಂದರಾಜ್ ಉಪಸ್ಥಿತರಿದ್ದರು.