ಬೆಣ್ಣೆನಗರಿಯಲ್ಲಿ ಹೊಟೇಲ್ ತಿಂಡಿ ತಿನಿಸುಗಳ ದರ ಹೆಚ್ಚಳ ಇಲ್ಲ!
ದಾವಣಗೆರೆ, ನವೆಂಬರ್ 16; ಎಲ್ಲೆಡೆ ದರ ಹೆಚ್ಚಳದ್ದೇ ಮಾತು. ಪೆಟ್ರೋಲ್, ಡೀಸೆಲ್ ಸೇರಿದಂತೆ ಕೆಲವು ವಸ್ತುಗಳ ಬೆಲೆ ಕಡಿಮೆಯಾಗುತ್ತಿದ್ದರೂ ಜನಸಾಮಾನ್ಯರಿಗೆ ಅನುಕೂಲ ಇನ್ನು ಆಗಿಲ್ಲ. ಈಗಾಗಲೇ ತೈಲ, ಅಗತ್ಯವಸ್ತುಗಳ ದರ ಗಗನಕ್ಕೇರಿದೆ.
ಇನ್ನು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೊಟೇಲ್ ತಿಂಡಿ, ಊಟದ ದರ ಹೆಚ್ಚಳ ಮಾಡಲು ಹೊಟೇಲ್ ಮಾಲೀಕರ ಸಂಘ ನಿರ್ಧರಿಸಿ ಹೊಸ ದರ ಜಾರಿಯಾಗಿದೆ. ಆದರೆ ಬೆಣ್ಣೆನಗರಿಯಲ್ಲಿ ಸದ್ಯಕ್ಕೆ ರೇಟ್ ಹೆಚ್ಚಿಸುವ ನಿರ್ಧಾರಕ್ಕೆ ಬಂದಿಲ್ಲ. ಇದು ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ, ಸಂತೋಷಕ್ಕೂ ಕಾರಣವಾಗಿದೆ.
ಹಾಸನ ಮೋತಿ ಹೋಟೆಲ್ ಮಸಾಲೆ ದೋಸೆ ಇನ್ನು ನೆನಪು ಮಾತ್ರ!
ಕೊರೊನಾ ಸೋಂಕು ಹೆಚ್ಚಳ, ಲಾಕ್ ಡೌನ್ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಸಮಸ್ಯೆ ಅನುಭವಿಸಿದ್ದ ಹೊಟೇಲ್ ಉದ್ಯಮ ಈಗ ನಿಧಾವಾಗಿ ಚೇತರಿಸಿಕೊಳ್ಳುತ್ತಿದೆ. ದಾವಣಗೆರೆ ಬೆಣ್ಣೆದೋಸೆ, ಮಿರ್ಚಿ, ಮಂಡಕ್ಕಿ ಸೇರಿದಂತೆ ಹೊಟೇಲ್ ಉದ್ಯಮಕ್ಕೆ ಹೆಸರುವಾಸಿ.
ಬೆಂಗಳೂರು; ಕೆಲ ಹೋಟೆಲ್ಗಳಲ್ಲಿ ಇನ್ನೂ ಏರಿಕೆಯಾಗಿಲ್ಲ ದರ!
ಹೆಚ್ಚಾಗಿ ಹೊಟೇಲ್ ಉದ್ಯಮ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಇವೆ. ಈಗಾಗಲೇ ಕೊರೊನಾ ಹೊಡೆತಕ್ಕೆ ಎಷ್ಟೋ ಸಣ್ಣ ಸಣ್ಣ ಹೊಟೇಲ್ ಗಳು ಮುಚ್ಚಿ ಹೋಗಿದ್ದರೆ, ಮತ್ತೆ ಕೆಲ ಹೊಟೇಲ್ಗಳಲ್ಲಿ ಇನ್ನು ವ್ಯಾಪಾರದ ಹಳಿ ಸಹಜ ಸ್ಥಿತಿಗೆ ಬರುತ್ತಿದೆ. ಇದರಿಂದಾಗಿ ನಷ್ಟ ಅನುಭವಿಸಿದ್ದ ಮಾಲೀಕರು, ತುಸು ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ.
IRCTC ಕೆಲವು ರೈಲುಗಳಲ್ಲಿ 'ಪ್ರಮಾಣೀಕೃತ ಸಾತ್ವಿಕ ಆಹಾರ' ಲಭ್ಯ!
ಚೇತರಿಕೆ ಕಾಣುತ್ತಿದೆ ಹೋಟೆಲ್ ಉದ್ಯಮ
ಶಾಲಾ ಕಾಲೇಜುಗಳು ಪ್ರಾರಂಭವಾದ ಬಳಿಕ ಹಳ್ಳಿಗಳಿಂದ ನಗರಕ್ಕೆ ಜನರು ಬರುತ್ತಿದ್ದಾರೆ. ವ್ಯಾಪಾರವೂ ಚೇತರಿಸಿಕೊಳ್ಳುತ್ತಿದೆ. ಹೊಟೇಲ್ಗಳಿಗೆ ಬರುವ ಜನರು ಹೆಚ್ಚಾಗ ತೊಡಗಿದ್ದಾರೆ. ಹೊಟೇಲ್ ಉದ್ಯಮ ಸದ್ಯದ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಇಂತ ವೇಳೆಯಲ್ಲಿ ದರ ಹೆಚ್ಚು ಮಾಡಿದರೆ ಜನರು ಮತ್ತೆ ಇತ್ತ ಬರುವುದಿಲ್ಲ ಎಂಬ ಆತಂಕ ಕಾಡುತ್ತಿದೆ. ಬೆಂಗಳೂರಿನಂತಹ ನಗರದಲ್ಲಿ ಊಟ, ತಿಂಡಿಗೆ ಜನರುಬಂದೇ ಬರುತ್ತಾರೆ. ಆದರೆ ಸ್ಥಳೀಯವಾಗಿಯೇ ವ್ಯಾಪಾರ ನೆಚ್ಚಿಕೊಂಡಿರುವ ಮಾಲೀಕರು ದರ ಹೆಚ್ಚಿಸಿದರೆ ವ್ಯಾಪಾರಕ್ಕೆ ಕುಂದುಂಟಾಗುತ್ತದೆ ಎಂಬ ಭಯದ ಹಿನ್ನೆಲೆಯಲ್ಲಿ ದರ ಜಾಸ್ತಿ ಮಾಡದಿರಲು ಮಾಲೀಕರು ನಿರ್ಧರಿಸಿದ್ದಾರೆ.
ಅಪಾರವಾದ ನಷ್ಟವಾಗಿದೆ
ಕೊರೊನಾ ಸೋಂಕು ಹೆಚ್ಚಳವಾದಾಗ ಲಾಕ್ ಡೌನ್ ಮಾಡಲಾಗಿತ್ತು. ಆಗ ಹೊಟೇಲ್ಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ವ್ಯಾಪಾರ ಇಲ್ಲದೇ ಬಾಡಿಗೆ, ಕಾರ್ಮಿಕರಿಗೆ ವೇತನ, ಕರೆಂಟ್ ಬಿಲ್ ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವ್ಯಾಪಾರವೂ ಹೆಚ್ಚಾಗಿಲ್ಲ. ಕೊರೊನಾ ಸೋಂಕು ಹರಡುತ್ತಿರುವ ವೇಳೆಯಲ್ಲಿ ಹೊಟೇಲ್ ಗಳಿಗೆ ಜನರು ಬರಲೇ ಇಲ್ಲ. ಆಗ ಮಾಡಿದ ಅಡುಗೆ ಸಹ ಎಸೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಳೆದ ಕೆಲ ತಿಂಗಳಿನಿಂದ ವ್ಯಾಪಾರ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಈಗ ದರ ಹೆಚ್ಚಿಸಿದರೆ ಬರುವ ಜನರು ಬರುವುದಿಲ್ಲ. ಹಾಗಾಗಿ ರೇಟ್ ಜಾಸ್ತಿ ಮಾಡುವ ಚಿಂತನೆ ಆಗಲೀ, ಪ್ರಸ್ತಾಪ ಆಗಲೀ ನಮ್ಮ ಮುಂದೆ ಇಲ್ಲ ಎನ್ನುತ್ತಾರೆ ಜಿಲ್ಲಾ ಹೊಟೇಲ್ ಉದ್ಯಮ ಸಂಘದವರು.
ಹಳೇ ದರವೇ ಮುಂದುವರಿಕೆ
ಇನ್ನು ಹಳೆಯ ದರವನ್ನೇ ಮುಂದುವರಿಸಲಾಗಿದೆ. ಇಡ್ಲಿ, ವಡೆ, ಬೆಣ್ಣೆ ದೋಸೆ, ಊಟ ಸೇರಿದಂತೆ ಯಾವ ಆಹಾರದ ದರವೂ ಹೆಚ್ಚಿಸಿಲ್ಲ. ಅಲ್ಲೋ ಇಲ್ಲೋ ಎಂಬಂತೆ ಹೊಟೇಲ್ಗಳಲ್ಲಿ ಸ್ವಲ್ಪ ಮಟ್ಟಿಗೆ ದರ ಹೆಚ್ಚಿಸಿರಬಹುದು. ಆದರೆ ಇನ್ನುಳಿದ ಬಹುತೇಕ ಹೊಟೇಲ್ಗಳಲ್ಲಿ ಹಿಂದಿನ ದರವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ. ಜನರು ಸಹ ಸ್ವಲ್ಪ ಮಟ್ಟಿಗೆ ಹೊಟೇಲ್ ಗಳಿಗೆ ಆಗಮಿಸಿ ಆಹಾರ ಸೇವಿಸುತ್ತಿದ್ದಾರೆ. ತಳ್ಳು ಗಾಡಿಗಳಿಂದ ಹಿಡಿದು ದೊಡ್ಡ ದೊಡ್ಡ ಹೊಟೇಲ್ಗಳ ಮಾಲೀಕರು ಈಗೀಗ ಸ್ವಲ್ಪ ಮಟ್ಟಿಗೆ ವ್ಯಾಪಾರ ನೋಡುವಂತಾಗಿದೆ.
ಇನ್ನು ಕೆಲ ತಿಂಗಳುಗಳೇ ಬೇಕು
"ಇನ್ನು ಹಿಂದಿನ ವ್ಯಾಪಾರಕ್ಕೆ ಬರುವಂತಾಗಲು ಇನ್ನು ಕೆಲವು ತಿಂಗಳುಗಳೇ ಬೇಕಾಗುತ್ತವೆ. ಯಾಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಆಗುತ್ತಿದ್ದ ವ್ಯಾಪಾರಕ್ಕೆ ಹೋಲಿಸಿದರೆ ಈಗ ಕೇವಲ ಅರ್ಧದಷ್ಟು ಮಾತ್ರ ಆಗುತ್ತಿದೆ. ಮಾತ್ರವಲ್ಲ ಎಣ್ಣೆ, ದಿನಸಿ, ತರಕಾರಿ ಸೇರಿದಂತೆ ಎಲ್ಲವೂ ದುಬಾರಿಯಾಗಿವೆ. ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ದರವೂ ದುಪ್ಪಟ್ಟಾಗಿದೆ. ಹೊಟೇಲ್ ನಡೆಸಲು ಖರ್ಚು ಹೆಚ್ಚಾಗುತ್ತಿದೆ. ಲಾಭ ನಿರೀಕ್ಷಿಸುವುದಕ್ಕಿಂತ ನಾವು ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಸ್ಥಿತಿಯಲ್ಲಿದ್ದೇವೆ. ಕೆಲವೊಮ್ಮೆ ಕೈಯಿಂದ ಹಣ ಹಾಕಿ ಹೊಟೇಲ್ ನಡೆಸಿಕೊಂಡು ಹೋಗುವ ಸ್ಥಿತಿ ಈಗಲೂ ಇದೆ" ಎನ್ನುತ್ತಾರೆ ಹೊಟೇಲ್ ನಡೆಸುವ ನಾಗರಾಜ್.
"ಜನರಿಗೆ ಟೇಸ್ಟ್ ಕೊಡಬೇಕು. ಗುಣಮಟ್ಟದ ಜೊತೆಗೆ ಸಂತೃಪ್ತಿಗೊಳಿಸಬೇಕಿದೆ. ಗ್ರಾಹಕರೇ ನಮಗೆ ದೇವರು. ರುಚಿಯಲ್ಲಿ ಅಲ್ಪ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಗ್ರಾಹಕರು ಬೇರೆ ಕಡೆ ಹೋಗಿಬಿಡುತ್ತಾರೆ. ಆಗ ಈಗಿರುವ ವ್ಯಾಪಾರವೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ಸಂಕಷ್ಟವಾದರೂ ಇದನ್ನು ಮಾಡಿಕೊಂಡು ಹೋಗಲೇಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ" ಎನ್ನುತ್ತಾ
Recommended Video
ಹೊಟೇಲ್ ಗಳು ಖಾಲಿ, ಖಾಲಿ
"ಇನ್ನು ಕೆಲ ಹೊಟೇಲ್ಗಳಲ್ಲಿ ಮೊದಲಿದ್ದ ವ್ಯಾಪಾರ ಈಗಲೂ ಆಗುತ್ತಿಲ್ಲ. ಮಾತ್ರವಲ್ಲ, ಮುಚ್ಚುವಂತ ಪರಿಸ್ಥಿತಿಯಲ್ಲಿದ್ದೇವೆ. ಯಾಕೆಂದರೆ ಜನರು ಹೆಚ್ಚಾಗಿ ಬಂದರೆ ವ್ಯಾಪಾರ ಆಗುತ್ತದೆ. ತಿಂಗಳಿಂದ ತಿಂಗಳಿಗೆ ನಷ್ಟ ಹೆಚ್ಚುತ್ತಾ ಹೋದರೆ ಹೊಟೇಲ್ ಗಳನ್ನು ಬಂದ್ ಮಾಡುವಂತ ಸ್ಥಿತಿಯಲ್ಲಿದ್ದೇವೆ. ಈಗಾಗಲೇ ನಾವು ನೋಡಿರುವಂತೆ ಎಷ್ಟೋ ಮಂದಿ ಹೊಟೇಲ್ ಉದ್ಯಮ ಬಿಟ್ಟು ಬೇರೆ ಬೇರೆ ಕೆಲಸದತ್ತ ವಾಲಿದ್ದಾರೆ, ಹೋಗಿದ್ದಾರೆ. ಹೋಗುತ್ತಲೂ ಇದ್ದಾರೆ. ಹೆಚ್ಚು ಕಡಿಮೆ ನಮ್ಮದು ಇದೇ ಪರಿಸ್ಥಿತಿ ಇದೆ. ಹಾಗಾಗಿ, ಈ ಉದ್ಯಮ ನಂಬಿಕೊಂಡು ಬದುಕುತ್ತಿರುವವರ ಬದುಕು ಬೀದಿಗೆ ಬರುವಂತಾಗಿದೆ ಎನ್ನುತ್ತಾರೆ" ತಳ್ಳು ಗಾಡಿಯಲ್ಲಿ ವ್ಯಾಪಾರ ನಡೆಸುತ್ತಿರುವ ಮಂಜುನಾಥ್.