"ವಿಧಿಯೇ ನೀನೆಷ್ಟು ಕ್ರೂರಿ'': ಸೋಂಕಿತನ ಅಂತ್ಯಸಂಸ್ಕಾರ ಮಾಡಿ ಭಾವುಕರಾದ ರೇಣುಕಾಚಾರ್ಯ
ದಾವಣಗೆರೆ, ಜೂನ್ 1: ದಾವಣಗೆರೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ ಕಚೇರಿಯ ಡಿ ಗ್ರೂಪ್ ನೌಕರನ 30 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಪುತ್ರ ಸಾವಿಗೀಡಾಗಿದ್ದು, ಅಂತ್ಯಸಂಸ್ಕಾರ ನೆರವೇರಿಸಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.
Recommended Video
ಈ ವೇಳೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರೇ ಆಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ ಕೋವಿಡ್ ವಾರ್ಡ್ಗೆ ಹೋಗಿ ಆರೋಗ್ಯ ವಿಚಾರಿಕೊಂಡು ಬಂದಿದ್ದ ಶಾಸಕ ರೇಣುಕಾಚಾರ್ಯ, ಯುವಕನನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು. ಆದ್ರೆ ಸ್ವಲ್ಪ ಸಮಯದ ನಂತರವೇ ಯುವಕ ಕೊರೊನಾ ಸೋಂಕಿಗೆ ಬಲಿಯಾದರು.
ಆತನ ಶವವನ್ನು ಊರಿಗೆ ತರುವುದು ಬೇಡ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಆಗ ಶಾಸಕ ಎಂ.ಪಿ ರೇಣುಕಾಚಾರ್ಯ ಅವರೇ ತೆರಳಿ ಹೊನ್ನಾಳಿ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿಸಿದ್ದಾರೆ.
ಆತನ ಪೋಷಕರು ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ""ದುಃಖ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ, ಮೃತ ಯುವಕನ ತಾಯಿಯ ಗೋಳಾಟ ನನ್ನ ಕಣ್ಣಗಳಲ್ಲಿ ನೋಡಲು ಸಾಧ್ಯವಾಗಲಿಲ್ಲ, ವಿಧಿಯೇ ನಿನೇಷ್ಟು ಕ್ರೂರಿ'' ಎಂದಿದ್ದಾರೆ.