ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮ ವಾಸ್ತವ್ಯ ನೆಪದಲ್ಲಿ ರೇಣುಕಾಚಾರ್ಯ ಮೋಜು- ಮಸ್ತಿ: ಕೋವಿಡ್ ನಿಯಮ ಗಾಳಿಗೆ ತೂರಿ ಎಂಜಾಯ್!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 18: ಸಂಭಾವ್ಯ ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತವು ಮೆರವಣಿಗೆ, ಡಿಜೆ ಸೇರಿದಂತೆ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದೆ. ಮಾತ್ರವಲ್ಲ, ಈದ್ ಮಿಲಾದ್ ಸೇರಿದಂತೆ ಹಬ್ಬಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯರಿಗೆ ಈ ಆದೇಶ ಅನ್ವಯಿಸುವಂತೆ ಕಂಡಿಲ್ಲ.

ಕಂದಾಯ ಸಚಿವ ಆರ್. ಅಶೋಕ್ ಶನಿವಾರ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಗ್ರಾಮದ ಜನರ ಸಂಕಷ್ಟ ಆಲಿಸಿದರು. ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರು. ಇನ್ನು ರಾತ್ರಿ ಕುಂದೂರು ಗ್ರಾಮದಲ್ಲಿ ಚಂದನ್ ಶೆಟ್ಟಿ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಇಲ್ಲಿ ಯಾವುದೇ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿರಲಿಲ್ಲ. ಸಾಮಾಜಿಕ ಅಂತರವೂ ಇರಲಿಲ್ಲ. ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರೂ ಮಾಸ್ಕ್ ಧರಿಸಿರಲಿಲ್ಲ. ಗ್ರಾಮ ವಾಸ್ತವ್ಯ ನೆಪದಲ್ಲಿ ಹೊನ್ನಾಳಿ ಶಾಸಕ ಎಂ.ಪಿ‌. ರೇಣುಕಾಚಾರ್ಯ ಮೋಜು- ಮಸ್ತಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಜನರು ಸಹ ಕಾರ್ಯಕ್ರಮವನ್ನು ಸಖತ್ತಾಗಿಯೇ ಎಂಜಾಯ್ ಮಾಡಿದ್ದು, ಕುಣಿದು ಕುಪ್ಪಳಿಸಿದರು. ಶಾಸಕ ಎಂ.ಪಿ. ರೇಣುಕಾಚಾರ್ಯರಂತೂ ಮಕ್ಕಳ ಜೊತೆ ಸಖತ್ ಸ್ಟೆಪ್ ಹಾಕಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ಕ್ರೇಜಿಕ್ವೀನ್ ರಕ್ಷಿತಾ ಅಭಿನಯದ ಸುಂಟರಗಾಳಿ ಸಿನಿಮಾದ ಹಾಡಿಗೆ ಮಕ್ಕಳ ಜೊತೆ ನೃತ್ಯ ಮಾಡಿ ಹಾಕಿ ರಂಜಿಸಿದರು.

Davanagere: Honnali MLA MP Renukacharya Enjoying In The Name Of Grama Vasthvya By Flouting Covid Rules


ಕಾರ್ಯಕ್ರಮದಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದರು?
ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇನ್ನು ರಾಕ್‌ಸ್ಟಾರ್ ಚಂದನ್ ಶೆಟ್ಟಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ, ಸರಿಗಮಪ ಖ್ಯಾತಿಯ ಚನ್ನಪ್ಪ ಸೇರಿದಂತೆ ವಿವಿಧ ಕಲಾವಿದರು ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಚಿತ್ರಗೀತೆಗಳ ಹಾಡಿಗೆ ಸಖತ್ ಸ್ಟೆಪ್ ಹಾಕಿ ಕುಂದೂರಿನ ಜನತೆ ಕುಣಿದರು. ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜನರಿಗೆ ಮನೋರಂಜನೆ ನೀಡಲು ಹಮ್ಮಿಕೊಂಡಿರುವ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಿತಾದರೂ ಕೋವಿಡ್ ಮೂರನೇ ಅಲೆ ಭೀತಿ ವೇಳೆ ಇದು ಬೇಕಾಗಿತ್ತಾ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.

Davanagere: Honnali MLA MP Renukacharya Enjoying In The Name Of Grama Vasthvya By Flouting Covid Rules

ಮಕ್ಕಳೊಂದಿಗೆ ಬೆರೆತ ಎಂ.ಪಿ. ರೇಣುಕಾಚಾರ್ಯ 'ಸುಂಟರಗಾಳಿ' ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಕಾಲು ನೋವಿದ್ದರೂ ಅದನ್ನು ಮರೆತು ಮಕ್ಕಳೊಂದಿಗೆ ಹೆಜ್ಜೆ ಹಾಕಿದರಲ್ಲದೇ, ಮಕ್ಕಳಿಗೆ ಹುರುಪು ತುಂಬಿದರು. ಇದೇ ವೇಳೆ ವೇದಿಕೆ ಮೇಲೆ ಹೊನ್ನಾಳಿ‌- ನ್ಯಾಮತಿ ಅವಳಿ ತಾಲೂಕಿನ ಜನರಿಗೆ ರೇಣುಕಾಚಾರ್ಯ ನಮಸ್ಕರಿಸಿದರು. ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಮಾಡಿ‌ ಹೊನ್ನಾಳಿ‌ ಜನರಿಗೆ ನಮಸ್ಕರಿಸಿದರು. ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕು ನನ್ನ ಜನ್ಮಭೂಮಿ ಮತ್ತು ಕರ್ಮ‌ಭೂಮಿ. ನಾನು ಯಾವುದಕ್ಕೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

Davanagere: Honnali MLA MP Renukacharya Enjoying In The Name Of Grama Vasthvya By Flouting Covid Rules

ರಾತ್ರಿ ಹನ್ನೊಂದು ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ನೃತ್ಯ, ಹಾಡು ಸೇರಿದಂತೆ ವಿಭಿನ್ನ ಕಾರ್ಯಕ್ರಮ ನಡೆಸಲಾಯಿತು. ಗ್ರಾಮ ವಾಸ್ತವ್ಯ ನೆಪದಲ್ಲಿ ಇಂಥ ಅದ್ಧೂರಿ ಕಾರ್ಯಕ್ರಮ ನಡೆಸುವ ಉದ್ದೇಶವಾದರೂ ಏನು? ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದರೂ ಜಿಲ್ಲಾಡಳಿತ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದು ಕಾಂಗ್ರೆಸ್ ಮುಖಂಡರ ಪ್ರಶ್ನೆಯಾಗಿದೆ.

Recommended Video

Dhoni ಅವರ ಅಭಿಮಾನಿಗಳಿಗೆ ಖುಷಿ ಪಡಲು ಎರಡು ವಿಷಯಗಳು | Oneindia Kannada

English summary
Honnali MLA MP Renukacharya enjoying in the name of grama vasthvya by flouting covid rules in Kundur Village of Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X