ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಮಹಿಳೆಯರ ಕ್ಷಮೆಯಾಚಿಸಿದ್ದು ಯಾಕೆ?
ದಾವಣಗೆರೆ, ಜೂನ್ 17: ಕೋವಿಡ್ ಕೇರ್ ಸೆಂಟರ್ನಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಯಾರ್ಯಾರ ಜೊತೆಗೆ ಮಲಗುತ್ತಾರೋ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ನ ಮಾಜಿ ಶಾಸಕ ಶಾಂತನಗೌಡರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ನಡೆದಿದೆ.
ಕೋವಿಡ್ ಸೆಂಟರ್ಗೆ ಬಂದ ಮಾಜಿ ಶಾಸಕ ಶಾಂತನಗೌಡ, ಸೋಂಕಿತರಿಗೆ ಹಣ್ಣು ನೀಡಲು ಮುಂದಾದರು. ಈ ವೇಳೆ ಸೋಂಕಿತರು ಪಡೆಯಲು ನಿರಾಕರಿಸಿದರು. ಮತ್ತೆ ಒತ್ತಾಯಪೂರ್ವಕವಾಗಿ ನೀಡಲು ಮುಂದಾದಾಗ ಮಹಿಳೆಯರ ಸಿಟ್ಟು ನೆತ್ತಿಗೇರಿತು.
ಬಂದ 2 ದಿನಗಳಲ್ಲೇ ದಾಳಿ ಮಾಡಿದರೆ ಎಸ್ಪಿ ಹೀರೋ ಆಗ್ತಾರೇನ್ರೀ: ರೇಣುಕಾಚಾರ್ಯ
ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಬಗ್ಗೆ ಶಾಂತನಗೌಡ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದರು. ಅಲ್ಲದೇ, ಎಲ್ಲೆಲ್ಲೋ ಮಲಗುತ್ತಾರೆ, ಯಾರ್ಯಾರ ಜೊತೆ ಮಲಗುತ್ತಾರೋ ಎಂಬ ಮಾತು ಹೇಳಿದ್ದರು. ಇದನ್ನು ರೇಣುಕಾಚಾರ್ಯ ಖಂಡಿಸಿದ್ದರು. ಸೋಂಕಿತರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು.
ಕೋವಿಡ್ ಕೇರ್ ಸೆಂಟರ್ಗೆ ಡಿ.ಜೆ. ಶಾಂತನಗೌಡ ಬರುತ್ತಿದ್ದಂತೆ ಮಹಿಳೆಯರು ಸಿಟ್ಟಿಗೆದ್ದು ತರಾಟೆಗೆ ತೆಗೆದುಕೊಂಡರು. ಮಾಜಿ ಶಾಸಕರು ಬರುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಅವರ ಜನಸೇವೆಯನ್ನು ಸಹಿಸದೆ ಕೀಳು ಮಟ್ಟದಲ್ಲಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಂತೆ ಶಾಂತನಗೌಡ ಅವರು ಮಹಿಳೆಯರ ಕ್ಷಮೆಯಾಚಿಸಿದರು.
"ಸೋಂಕಿತರಿಗೆ ಹಣ್ಣು ನೀಡಲು ಮುಂದಾದರೂ ನಮಗೆ ಬೇಡ ಎಂದು ಸೋಂಕಿತರು ಹೇಳಿದರು. ಶಾಸಕರಿಲ್ಲದಾಗ ಕೋವಿಡ್ ಕೇರ್ ಸೆಂಟರ್ಗೆ ಬಂದ್ರಾ. ಇಷ್ಟು ದಿನ ನಾವು ಹೇಗಿದ್ದೀವಿ ಎಂಬುದನ್ನು ವಿಚಾರಿಸಲು ಬಂದಿರಲಿಲ್ಲ. ನಮಗೆ ಯೋಗ, ವ್ಯಾಯಾಮ, ಒಳ್ಳೆಯ ಊಟ, ನೀರಿನ ವ್ಯವಸ್ಥೆ ಸೇರಿದಂತೆ ನಾವೆಲ್ಲರೂ ಚೆನ್ನಾಗಿದ್ದೇವೆ. ಮಹಿಳೆಯರ ಬಗ್ಗೆ ನೀವು ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ. ನಿಮ್ಮಂತವರಿಗೆ ಶೋಭೆ ತರುವುದಿಲ್ಲ,'' ಎಂದು ಮಹಿಳೆಯರು ಕೆಂಡಾಮಂಡಲರಾದರು.
Recommended Video