ಕೋವಿಡ್ ಕೇರ್ ಸೆಂಟರ್ನಲ್ಲಿ ಹೋಮ, ಹೋಳಿಗೆ ಊಟ!
ದಾವಣಗೆರೆ, ಜೂನ್ 11; ಕೊರೊನಾ ಹೊಡೆದೋಡಿಸಲು ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ಹೋಮ ನಡೆಯಿತು. ಹೊನ್ನಾಳಿಯ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೋಮ ಮಾಡಿದರು ಮತ್ತು ಹೋಳಿಗೆ ಊಟವನ್ನು ಹಾಕಿಸಿದರು.
ಶುಕ್ರವಾರ ಕೋವಿಡ್ ಕೇರ್ ಸೆಂಟರ್ನಲ್ಲಿ ಎಂ. ಪಿ. ರೇಣುಕಾಚಾರ್ಯ ಹೋಮವನ್ನು ನಡೆಸಿದರು. ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೊನಾ ಸೋಂಕು ನಿವಾರಣೆಗಾಗಿ ಧನ್ವಂತರಿ ಹೋಮ ಹಾಗು ಜನತೆಯ ಆರೋಗ್ಯ ವೃದ್ಧಿಗಾಗಿ ಮೃತ್ಯುಂಜಯ ಹೋಮವನ್ನು ನಡೆಸಲಾಯಿತು.
ಕೋವಿಡ್ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ದಂಪತಿ ಮಸ್ತ್ ಡ್ಯಾನ್ಸ್
ಹೊನ್ನಾಳಿ ತಾಲೂಕಿನ ಜನರನ್ನು ಮಾತ್ರವಲ್ಲ, ಇಡೀ ವಿಶ್ವವನ್ನೇ ಸೋಂಕು ಕಾಡುತ್ತಿದೆ. ಎಲ್ಲರೂ ಕೋವಿಡ್ ಮುಕ್ತರಾಗಬೇಕು. ಜನರು ಆರಾಮಾಗಬೇಕು. ವಿಶ್ವಕ್ಕೆ ಒಳಿತಾಗಬೇಕು ಎಂದು ಕೋವಿಡ್ ಕೇರ್ ಸೆಂಟರ್ನಲ್ಲಿ ಹೋಮವನ್ನು ನೆರವೇರಿಸಲಾಯಿತು.
ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ನೂರಾರು ಸೋಂಕಿತರು ಇದ್ದಾರೆ. ಸೋಂಕಿತರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ರೇಣುಕಾಚಾರ್ಯ ಹಲವಾರು ಕೆಲಸಗಳನ್ನು ಮಾಡುತ್ತಿದ್ದು, ಫೇಸ್ಬುಕ್ನಲ್ಲಿ ಅಪ್ಡೇಟ್ ಹಾಕುತ್ತಿದ್ದಾರೆ.
ಶಾಸಕ ಎಂ.ಪಿ ರೇಣುಕಾಚಾರ್ಯ ಸಮಯಪ್ರಜ್ಞೆ: ನಿಟ್ಟುಸಿರುಬಿಟ್ಟ 45 ಸೋಂಕಿತರು!
ಶುಕ್ರವಾರ ಹೋಮವನ್ನು ಮಾತ್ರ ಮಾಡಲಿಲ್ಲ. ಎಲ್ಲರಿಗೂ ಮಧ್ಯಾಹ್ನದ ಊಟಕ್ಕೆ ಹೋಳಿಗೆ ಮಾಡಿಸಿದ್ದರು. ಸ್ವತಃ ರೇಣುಕಾಚಾರ್ಯ ಹೋಳಿಗೆ ಬೇಯಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋವಿಡ್ ಸೋಂಕಿತರು, ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಕೊರೊನಾ ವಾರಿಯರ್ಗಳಾಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗೆ ಸೇರಿ ಸುಮಾರು 4 ಸಾವಿರ ಜನರಿಗೆ ವೈಯಕ್ತಿಕ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು.
ಹೋಮ, ಹವನ ಮಾಡಿಸಿದರೆ ಕೊರೊನಾ ಹೋಗಿಬಿಡುತ್ತಾ? ಎಂಬ ಚರ್ಚೆ ನಡೆಯುತ್ತಿದೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಅಗತ್ಯ ವ್ಯವಸ್ಥೆ ಮಾಡುತ್ತಿರುವ ರೇಣುಕಾಚಾರ್ಯ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ಪಾಸಿಟಿವಿಟಿ ದರ ಹೆಚ್ಚಿರುವ ಕಾರಣ ದಾವಣಗೆರೆ ಜಿಲ್ಲೆಯಲ್ಲಿ ಜೂನ್ 21ರ ತನಕ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಎಂ. ಪಿ. ರೇಣುಕಾಚಾರ್ಯ ಮಾಡುತ್ತಿರುವ ಕೆಲಸಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.