ಚನ್ನಗಿರಿಯ ಗೊಲ್ಲರಹಟ್ಟಿಯಲ್ಲಿ ಹಿರಿಯೂರು ಶಾಸಕಿ ಜಾಗೃತಿ ಕಾರ್ಯ
ದಾವಣಗೆರೆ, ಜನವರಿ 6: ಇಂದು ದಾವಣಗೆರೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗೆ ಭೇಟಿ ನೀಡಿದ ಶಾಸಕಿ ಪೂರ್ಣಿಮಾ ಅವರು ವಿಶೇಷ ಜಾಗೃತಿ ಕಾರ್ಯವನ್ನು ಕೈಗೊಂಡಿದ್ದರು.
ಗೊಲ್ಲರಹಟ್ಟಿಗಳಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು ಹೊರಗಿಡುವ ಸಂಪ್ರದಾಯ ಮುಂದುವರಿದಿದ್ದು, ಮುಟ್ಟಾಗಿ ಹಟ್ಟಿಯಿಂದ ಹೊರಗಡೆ ಇದ್ದ ಹೆಣ್ಣುಮಕ್ಕಳನ್ನು ಗ್ರಾಮಕ್ಕೆ ಕರೆತರುವ ಮೂಲಕ ಪೂರ್ಣಿಮಾ ಅವರು ಈ ಪದ್ಧತಿಗೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.
ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗೊಲ್ಲರಹಟ್ಟಿಗೆ ಪ್ರವಾಸ ಕೈಗೊಂಡಿದ್ದರು. ಊರಿನ ಮಾರ್ಗ ಮಧ್ಯೆ ಮುಟ್ಟಾದ ಹೆಣ್ಣು ಮಕ್ಕಳು ಹಟ್ಟಿಯಿಂದ ಹೊರಗುಳಿದದ್ದನ್ನು ಕಂಡರು. ನಂತರ ತಾವೇ ಅವರನ್ನು ಗ್ರಾಮಕ್ಕೆ ಕರೆತಂದು ಇಂಥ ಮೂಢನಂಬಿಕೆಗಳಿಗೆ ಕಡಿವಾಣ ಹಾಕಿ, ಮೌಢ್ಯವನ್ನು ಬಿಟ್ಟು ಸಮಾಜದ ಬದಲಾವಣೆಯಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.
ಗೊಲ್ಲರಹಟ್ಟಿಯೊಳಗೆ ಬರದಂತೆ ದಲಿತ ಸಂಸದನ ತಡೆದ ಗ್ರಾಮಸ್ಥರು
"ಮೊದಲು ಶಿಕ್ಷಣದ ಕಡೆ ಮುಖ ಮಾಡಿ. ಕಂದಾಚಾರಗಳನ್ನು ಬದಿಗೊತ್ತಿ. ನಾನು ನಿಮ್ಮ ಜೊತೆ ಇರುವೆ, ಕಾನೂನು ನಿಮ್ಮ ಜೊತೆ ಇದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಡವೇ?" ಎಂದು ಪ್ರಶ್ನಿಸಿದರು. "ಈ ಗೊಲ್ಲರಹಟ್ಟಿಯನ್ನು ಮಾದರಿ ಗ್ರಾಮವನ್ನಾಗಿ ಮಾಡಿ" ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಇಂತಹ ಅನಿಷ್ಠ ಪದ್ಧತಿಯಿಂದ ಹೊರಬರಬೇಕು ಹಾಗೂ ಈ ಪದ್ಧತಿ ವಿರುದ್ಧ ಹೋರಾಟ ನಡೆಸಿ ತೊಲಗಿಸಬೇಕು ಎಂಬ ಉದ್ದೇಶದೊಂದಿಗೆ ಹಟ್ಟಿಯ ಎಲ್ಲಾ ಮಹಿಳೆಯರೊಂದಿಗೆ ಮಾತನಾಡಿದರು. ಹೆಣ್ಣು ಮಕ್ಕಳಲ್ಲಿ, ಹಿರಿಯರಲ್ಲಿ, ಈ ಪದ್ಧತಿಯ ಹಿಂದಿರುವ ಮೂಢನಂಬಿಕೆ, ಇದರಿಂದ ಆಗುವ ಅಪಾಯಗಳ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.