ಪೂರ್ಣಿಮಾ ಶ್ರೀನಿವಾಸ್ ಪರ ಯಾದವ ಶ್ರೀಗಳ ಬ್ಯಾಟಿಂಗ್; ಬಿಜೆಪಿಗೆ ಕೊಟ್ಟ ವಾರ್ನಿಂಗ್ ಏನು?
ದಾವಣಗೆರೆ, ಆಗಸ್ಟ್ 09: ಯಾದವ ಸಮಾಜದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನ ನೀಡದಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮಾಣ ವಚನ ಸ್ವೀಕರಿಸುವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂರ್ಣಿಮಾ ಶ್ರೀನಿವಾಸ್ಗೆ ಕರೆ ಮಾಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಹೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಮಂತ್ರಿ ಸ್ಥಾನ ಕೈತಪ್ಪಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಯಾದವ ಸಮಾಜವೇ ಪೂರ್ಣಿಮಾ ಶ್ರೀನಿವಾಸ್ ಪರ ನಿಂತಿದೆ. ಸ್ವಾಮೀಜಿಗಳು ಈಗ ರಂಗಪ್ರವೇಶ ಮಾಡಿದ್ದು, ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿ ಕೈಬಿಡಲು ಯಾದವ ಸಮಾಜ ಮುಂದಾಗುತ್ತದೆ. ಮುಂಬರುವ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಲಾಗಿದೆ.
ದಾವಣಗೆರೆಯಲ್ಲಿ ಮಾತನಾಡಿದ ಯಾದವ ಸಮಾಜದ ಶ್ರೀಗಳು, "ಸಮಾಜದ ಜನರು ಯಾರ ಮಾತು ಕೇಳಲ್ಲ. ನಾಳೆ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿಯಿಂದ ನಿಂತರೆ ನಾವು ಮತ ಹಾಕಿ ಅಂತ ಸಮಾಜಕ್ಕೆ ಹೇಳಲು ಆಗದು. ಪೂರ್ಣಿಮಾರನ್ನು ಕೈಬಿಡುವ ಮೂಲಕ ಬಿಜೆಪಿ ಹೈಕಮಾಂಡ್ ಅವಮಾನ ಮಾಡಿದ್ದಾರೆ. ಬಿಜೆಪಿಗೆ ರಾಜಕೀಯ ಶಕ್ತಿ ನೀಡಲು ಶ್ರಮಿಸಿದ ನಮಗ್ಯಾಕೆ ಅನ್ಯಾಯ,'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗದ ಯಾದವ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರಲ್ಲದೇ, ಗೊಲ್ಲ ಜನಾಂಗಕ್ಕೆ ಆದ್ಯತೆ ನೀಡಲೇಬೇಕು," ಎಂದು ಒತ್ತಾಯಿಸಿದರು.
"ಸಿಎಂ ಬೊಮ್ಮಾಯಿ ಸಚಿವ ಸಂಪುಟದಲ್ಲೂ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸ್ಥಾನ ದೊರೆತಿಲ್ಲ. ದುಡುಕಿ ಏನಾದರೂ ಕ್ರಮ ಕೈಗೊಂಡರಾ ಎಂಬ ಅನುಮಾನ ಕಾಡುತ್ತದೆ. ವಿವಿಧ ವರ್ಗದವರಿಗೆ ಸಂಪುಟದಲ್ಲಿ ಅವಕಾಶ ದೊರೆತಿದೆ. ಯಾದವ ಸಮುದಾಯಕ್ಕೆ ಮಾತ್ರ ಮಾನ್ಯತೆ ದೊರೆಯುತ್ತಿಲ್ಲ. ಇನ್ನೂ ಸಮಯವಿದ್ದು, ಅವಕಾಶ ನೀಡಬೇಕು. ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಮಂತ್ರಿ ಸ್ಥಾನ ನೀಡಬೇಕು. ಇಲ್ಲದಿದ್ದರೆ ಯಾದವ ಸಮಾಜ ಬಿಜೆಪಿ ಕೈಬಿಡಲಿದೆ,'' ಎಂಬ ಸಂದೇಶವನ್ನೂ ನೀಡಿದರು.
"ರಾಜ್ಯದಲ್ಲಿ 40 ಲಕ್ಷ ಯಾದವ ಸಮುದಾಯವಿದೆ. 27 ತಾಲೂಕುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವುದೇ ಈ ಸಮುದಾಯ. ಚುನಾವಣೆ ಪೂರ್ವದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸ್ಥಾನದ ಭರವಸೆ ನೀಡಿದ್ದರು. ಅವರ ಅವಧಿಯಲ್ಲಿ ಈ ಭರವಸೆ ಈಡೇರಲಿಲ್ಲ. ಪ್ರಸ್ತುತ ಸಂಪುಟದಲ್ಲಿ ಕೊನೆಯವರೆಗೂ ಪೂರ್ಣಿಮಾ ಶ್ರೀನಿವಾಸ್ ಹೆಸರಿತ್ತು. ಘೋಷಣೆ ಸಮಯದಲ್ಲಿ ಅವರ ಹೆಸರು ಬಿಟ್ಟಿದ್ದಾರೆ. ಇದು ಯಾದವ ಸಮುದಾಯಕ್ಕೆ ಮಾಡಿದ ಅಪಮಾನ," ಎಂದು ಕಿಡಿಕಾರಿದರು.
"ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯಾದವ ಸಮಾಜದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಕಾರಣ ಯಾದವ ಸಮಾಜ ಕಣ್ಣೀರಲ್ಲಿ ಮುಳುಗಿದೆ. ಇದಕ್ಕೆ ಬಿಜೆಪಿ ರಾಜ್ಯ ನಾಯಕರು, ಹೈಕಮಾಂಡ್ ನಿರ್ಧಾರವೇ ಕಾರಣ,'' ಎಂದು ಗುಡುಗಿದರು.
Recommended Video
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರ ಹೋರಾಟ ತೀವ್ರಗೊಂಡಿದೆ.
ಇತ್ತೀಚಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬೆಂಬಲಿಗರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದರು. ಹಿಂದುಳಿದ ವರ್ಗಗಳ ಮುಖಂಡರಿಂದ ಸಭೆ ನಡೆಸಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿ ಗ್ರಾಮದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿ, ನಂತರ ಹಿರಿಯೂರಿಗೆ 30 ಕಿ.ಮೀ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.