ಸೋಮವಾರ ಶಾಲೆಗಳು ಆರಂಭ; ಮೊಬೈಲ್ ಬಳಕೆ ನಿಷೇಧ
ದಾವಣಗೆರೆ, ಫೆಬ್ರವರಿ 13; ಹಿಜಾಬ್, ಕೇಸರಿ ಶಾಲು ವಿವಾದದ ಬಳಿಕ ಕರ್ನಾಟಕದಲ್ಲಿ ಹೈಸ್ಕೂಲ್, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಕರ್ನಾಟಕ ಹೈಕೋರ್ಟ್ ಮಧ್ಯಂತರ ತೀರ್ಪಿನ ಆದೇಶದಂತೆ ಫೆಬ್ರವರಿ 14ರ ಸೋಮವಾರದಿಂದ 9 ಮತ್ತು 10 ನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪೋಷಕರ ಸಭೆ ಕರೆದು ಯಾವುದೇ ಆತಂಕವಿಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು. ಕಾಲೇಜುಗಳ ಆಡಳಿತ ಮಂಡಳಿ, ಪ್ರಿನ್ಸಿಪಾಲರುಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನೂ ನಡೆಸಿದರು.
ಶಾಂತಿ ಮತ್ತು ಸುವ್ಯವಸ್ಥೆ ಬಗ್ಗೆ ಸಿಎಂ ಮಹತ್ವದ ಸಭೆ; ಮುಖ್ಯಾಂಶಗಳು
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, "ವಿದ್ಯಾರ್ಥಿಗಳ ಹಿತದೃಷ್ಠಿ ಹಾಗೂ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೇ ಶಾಲೆಗಳನ್ನು ಆರಂಭಿಸಿ, ಯಾವುದೇ ಸಮಸ್ಯೆಯಾದರೆ ತಕ್ಷಣ 112 ಕ್ಕೆ ಕರೆಮಾಡಿ ತಕ್ಷಣ ಪೊಲೀಸ್ ಸಿಬ್ಬಂದಿಗಳು ನಿಮಗೆ ಸ್ಪಂದಿಸುತ್ತಾರೆ" ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ಮೊಬೈಲ್ ನಿಷೇಧವೇ? ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ಹೀಗೆ
"ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಕಾನ್ಪರೆನ್ಸ್ ಮುಖಾಂತರ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದು ಅವರ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಆದಷ್ಟು ಶಾಲಾ ಆವರಣದಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಿ. ಇದರಿಂದ ಶಾಲೆಗಳಿಗೆ ಯಾರಾದರು ಅಪರಿಚಿತರು ಬಂದರೆ ಅವರ ಚಲನವಲನ ತಿಳಿಯಲಿದೆ" ಎಂದು ಹೇಳೀದರು.
ಹಿಜಾಬ್ ವಿವಾದ: ಮಂಗಳೂರು ವಿವಿ, ಭಂಡಾರ್ಕಾರ್ಸ್ ಕಾಲೇಜು ಪ್ರಾಂಶುಪಾಲರಿಗೆ ನೋಟಿಸ್
"ನಾನೂ ಸೇರಿದಂತೆ ವಿವಿಧ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುತ್ತೇವೆ. ಈಗಾಗಲೇ ಆದೇಶ ಹೊರಡಿಸಿ ಶಾಲಾ ಕಾಲೇಜಿನ ಆವರಣವನ್ನು ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಅನಿವಾರ್ಯ ಸಂದರ್ಭದಲ್ಲಿ ಪೋಷಕರನ್ನು ಹೊರತುಪಡಿಸಿ ಬೇರೆಯವರು ಪ್ರವೇಶ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ. ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ" ಎಂದು ವಿವರಣೆ ನೀಡಿದರು.
"ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿ ಹೋರಾಟದಲ್ಲಿ ಭಾಗಿಯಾಗಿರುವ ಕೆಲ ವಿದ್ಯಾರ್ಥಿಗಳನ್ನ ಮುಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಳಿಸುವುದಾಗಿ ಬೆದರಿಸಿರುತಾರೆಂದು ದೂರು ನೀಡಿದ್ದು ಯಾರಾದರು ಶಿಕ್ಷಕರು ಆ ರೀತಿ ನಡೆದುಕೊಂಡಿದ್ದರೆ ಅಂತಹ ಶಿಕ್ಷಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಸಿದರು.
"ದಾವಣಗೆರೆ ಜಿಲ್ಲೆಯ ಪದವಿ ತರಗತಿಗಳಲ್ಲಿ 30828, ಪಿಯು ತರಗತಿಗಳಲ್ಲಿ 38190 ಹಾಗೂ ಪ್ರೌಢಶಾಲೆಗಳಲ್ಲಿ 1 ಲಕ್ಷ 18 ಸಾವಿರ ವಿಧ್ಯಾರ್ಥಿಗಳಿದ್ದು ಇವರ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವದಂತಿಗಳಿಗೆ ಕಿವಿಗೊಡಬೇಡಿ; ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾತನಾಡಿ, "ಯಾರೂ ವದಂತಿಗಳಿಗೆ ಕಿವಿಗೊಡಬೇಡಿ, ಏನೂ ಆಗದೇ ಇದ್ದರೂ ಅನೇಕರು ವದಂತಿಗಳನ್ನು ಹರಿಬಿಡುತ್ತಾರೆ, ಅವುಗಳನ್ನು ನಂಬಬಾರದು ಹಾಗೂ ಪ್ರತಿಕ್ರಿಯಿಸಬಾರದು. ಸಾಮಾಜಿಕ ಜಾಲತಾಣಗಳನ್ನು ಮಾನಿಟರ್ ಮಾಡಲು ಈಗಾಗಲೇ ನಮ್ಮ ಕಛೇರಿಯಲ್ಲಿ ಪ್ರತ್ಯೇಕ ಸೆಲ್ ತೆರೆದಿದ್ದು 24*7 ಮಾನಿಟರ್ ಮಾಡಲಾಗುತ್ತಿದೆ, ಹಾಗಾಗಿ ವದಂತಿಗಳನ್ನು ಹಬ್ಬಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
"ಎಲ್ಲೆಡೆ ಪೊಲೀಸ್ ಸಿಬ್ಬಂದಿ ಹಾಕಲಾಗುತ್ತಿದ್ದು ವಿವಿಧ ಪೊಲೀಸ್ ಪೋರ್ಸ್ಗಳು ಜಿಲ್ಲೆಗೆ ಆಗಮಿಸಿವೆ. ಹಾಗಾಗಿ ಯಾವುದೇ ಘಟನೆಗಳಾದರೆ ತಿಳಿಸಿ ತಕ್ಷಣಕ್ಕೆ ನೆರವಿಗೆ ಬರಲಾಗುತ್ತದೆ. ಶಾಲೆಗಳ ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲರುಗಳು ಪೋನ್ ಸಂಪರ್ಕದಲ್ಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆದರೆ ತಕ್ಷಣ ಮಾಹಿತಿ ನೀಡಿ" ಎಂದು ಕರೆ ನೀಡಿದರು.
ನ್ಯಾಯಾಲಯ ಶಾಲೆಗಳನ್ನು ಆರಂಭಿಸುವಂತೆ ತಿಳಿಸಿದೆ. ಮಾನ್ಯ ಮುಖ್ಯಮಂತ್ರಿಗಳೂ ಕೂಡ ಶಾಲಾ ಆಡಳಿತ ಮಂಡಳಿಗಳು ಪೋಷಕರ ಸಭೆ ಕರೆದು ವಾತಾವರಣ ತಿಳಿಗೊಳಿಸುವಂತಹ ಕೆಲಸ ಮಾಡಿ ಎಂದಿದ್ದಾರೆ. ಕೆಲವರು ವೈಯಕ್ತಿಕ ಲಾಭಕ್ಕೆ ಸಂದರ್ಭ ಬಳಸಿಕೊಳ್ಳುತ್ತಾರೆ ಅಂತಹವರ ಬಗೆಗೆ ಎಚ್ಚರದಿಂದಿರಿ. ಈಗಾಗಲೇ ಕೋವಿಡ್ನಿಂದ ಶಾಲೆಗಳು ನಡೆದಿಲ್ಲ ಮುಂದೆಯೂ ಹಾಗಾಗುವುದು ಬೇಡ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಶಾಲಾ ಆಡಳಿತ ಮಂಡಳಿಯವರು ಪೋಷಕರ ಸಭೆಗೆ ಅರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಮನವಿ ಮಾಡಿದರು. ಈಗಾಗಲೇ ಅಹಿತಕರ ಘಟನೆಗಳು ನಡೆದಿರುವ ಕಾಲೇಜುಗಳಲ್ಲಿ ಘಟನೆಗೆ ಕಾರಣರಾದ ಮುಖಂಡರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದರು ಮತ್ತು ಕಾಲೇಜು ಆರಂಭದ ದಿನ ಪೊಲೀಸ್ ಸಿಬ್ಬಂದಿಯನ್ನು ನೀಡಲು ಮನವಿ ಮಾಡಿದರು. ಕಾಲೇಜಿನಲ್ಲಿ ಮೊಬೈಲ್ ನಿಷೇಧಿಸಿದರೆ ಶೇ 80ರಷ್ಟು ಸಮಸ್ಯೆ ಬಗೆಹರಿಯುತ್ತದೆಂದು ಅಭಿಪ್ರಾಯಪಟ್ಟರು.