ದಾವಣಗೆರೆ: ಕೃಷಿ ಪರಿಕರ ಮಾರಾಟಗಾರರಿಂದ ರೈತರಿಗೆ ಸಹಾಯ
ದಾವಣಗೆರೆ, ಮೇ 3: ಕೊರೊನಾ ಲಾಕ್ ಡೌನ್ ನಿಂದಾಗಿ ರೈತರು ಜಿಲ್ಲಾ ಕೇಂದ್ರಕ್ಕೆ ಹೋಗಿ ತೋಟಗಾರಿಕೆ ಉತ್ಪನ್ನಗಳನ್ನು ತರುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಕೃಷಿ ಪರಿಕರ ಮಾರಾಟಗಾರರು ಮುಂದೆ ಬಂದಿದ್ದಾರೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಘೋಷಿಸಿದೆ.
ಆದರೆ ರೈತರು ಕೈಗೆ ಬಂದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಜಮೀನಿನಲ್ಲೇ ಕೊಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರ ಅನುಕೂಲಕ್ಕಾಗಿ ದಾವಣಗೆರೆ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಮುಂದಾಗಿದ್ದು, ಇದೀಗ ದಾವಣಗೆರೆ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದ ಸಹಕಾರವೂ ಸಿಕ್ಕಿದೆ.
ಕಂಪನಿಯಿಂದ ಲಾಭರಹಿತ ಸೇವೆ
ಹುಚ್ಚವ್ವನಹಳ್ಳಿ, ಕೊಡಗನೂರು, ಹೆದ್ನೆ, ಬಸಾಪುರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಎಪಿಎಂಸಿ ನಿಗಧಿಪಡಿಸಿರುವ ದರಕ್ಕಿಂತ ಶೇ.5 ರಷ್ಟು ಹೆಚ್ಚಿನ ಬೆಲೆಗೆ ರೈತರಿಂದ ನೇರವಾಗಿ ತರಕಾರಿ ಖರೀದಿಸುವ ಕಂಪನಿಯು ಜಿಲ್ಲಾಕೇಂದ್ರದಲ್ಲಿ ಮನೆ-ಮನೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದೆ.
ದಾವಣಗೆರೆಯ ಕೊರೊನಾ ಸೋಂಕಿಗೆ ಗುಜರಾತ್ ನಂಟು?
ಆದರೆ ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಲಾಭರಹಿತ ಸೇವೆಯಲ್ಲಿ ತೊಡಗಿಕೊಂಡಿರುವ ಕಂಪನಿಗೆ ಸಾಗಾಣಿಕೆಯದ್ದೇ ಸಮಸ್ಯೆಯಾಗಿದೆ. ವಿಷಯ ತಿಳಿದ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದವರು ಒಂದು ತಿಂಗಳ ಮಟ್ಟಿಗೆ ಬಾಡಿಗೆ ವಾಹನದ ವ್ಯವಸ್ಥೆ ಮಾಡುವ ಜೊತೆಗೆ ಕಂಪನಿಗಾಗಿ ಸ್ವಂತ ವಾಹನ ಖರೀದಿಸಲೂ ನೆರವು ನೀಡುತ್ತಿದ್ದಾರೆ.
ಕೃಷಿ ಪರಿಕರ ಮಾರಾಟಗಾರರಿಂದ ಸಹಾಯ
ಏ.14 ರಿಂದಲೂ ರೈತರಿಂದ ಸೌತೆಕಾಯಿ, ಹೀರೇಕಾಯಿ, ಚವಳಿ ಕಾಯಿ, ಈರುಳ್ಳಿ, ಟೊಮ್ಯಾಟೊ, ಮೆಣಸಿನ ಕಾಯಿ, ತೆಂಗಿನ ಕಾಯಿ ಹೀಗೆ ಅನೇಕ ಉತ್ಪನ್ನಗಳನ್ನು ಖರೀದಿಸುತ್ತಿರುವ ಕಂಪನಿಯು, ಈಗಾಗಲೇ ಸುಮಾರು 3 ಲಕ್ಷ ರೂ. ನಷ್ಟು ಉತ್ಪನ್ನ ಖರೀದಿಸಿ ಗ್ರಾಹಕರಿಗೆ ತಲುಪಿಸಿದೆ. ಇದರಿಂದಾಗಿ ತಾಲ್ಲೂಕಿನ ನೂರಾರು ರೈತರಿಗೆ ಅನುಕೂಲವಾಗಿದೆ.
ಬೂದುಗುಂಬಳದಿಂದ ಆಗ್ರಾಪೇಟಾ; ತೀರ್ಥಹಳ್ಳಿ ರೈತರ ನಷ್ಟ ನೀಗಿದ ಹೊಸ ಐಡಿಯಾ
ಯಾವುದೇ ಲಾಭಾಪೇಕ್ಷೆಯಿಲ್ಲದೆ ಮಾಡುತ್ತಿರುವ ಕೆಲಸದಲ್ಲಿ ನಷ್ಟವಾದರೂ ನಾವೇ ಭರಿಸಬೇಕಾಗುತ್ತದೆ. ಹೀಗಿರುವಾಗ ಕೃಷಿ ಪರಿಕರ ಮಾರಾಟಗಾರರು ನೆರವು ನೀಡಲು ಮುಂದಾಗಿರುವುದರಿಂದ ಸಾಕಷ್ಟು ರೈತರಿಗೆ ಪ್ರಯೋಜನವಾಗಲಿದೆ ಎನ್ನುತ್ತಾರೆ ಕಂಪನಿ ಅಧ್ಯಕ್ಷ ಹೆದ್ನೆ ಮುರುಗೇಶಪ್ಪ.
ಬೆಳೆ ಖರೀದಿಗೆ ವ್ಯಾಪಾರಸ್ಥರು ಬರುತ್ತಿಲ್ಲ
ದಾವಣಗೆರೆ ತಾಲ್ಲೂಕಿನ ಹೆದ್ನೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದವರು ರೈತರಿಗೆ ಅನುಕೂಲವಾಗುವಂತೆ, ಕಂಪನಿ ಉಪಯೋಗಕ್ಕೆ ವಾಹನ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಇದೇ ವೇಳೆ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಹಾಗೂ ತಂಡದವರು ಕುಂಬಳಕಾಯಿ ಬೆಳೆ ನಷ್ಟ ಅನುಭವಿಸಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಸಂಘದಿಂದ ರೈತರಿಗೆ 30 ಸಾವಿರಕ್ಕೂ ಅಧಿಕ ಪರಿಹಾರ ವಿತರಿಸಲಾಯಿತು. ನಂತರ ಲೋಕಿಕೆರೆ ನಾಗರಾಜ್ ಮಾತನಾಡಿ, ""ಲಾಕ್ ಡೌನ್ ನಿಂದಾಗಿ ವ್ಯಾಪಾರಿಗಳು ತರಕಾರಿ, ತೋಟಗಾರಿಕೆ ಉತ್ಪನ್ನಗಳ ಖರೀದಿಗೆ ಬರುತ್ತಿಲ್ಲ. ಹೀಗಾಗಿ ರೈತರ ಫಸಲು ಜಮೀನಿನಲ್ಲೇ ಹಾಳಾಗುತ್ತಿದೆ. ಬಿತ್ತನೆ ಬೀಜ ಮಾರಾಟಗಾರರ ಸಂಘದ ಅಧ್ಯಕ್ಷನಾಗಿ, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷನಾಗಿ, ಓರ್ವ ರೈತನಾಗಿ ನನಗೆ ರೈತರ ಕಷ್ಟದ ಅರಿವಿದೆ'' ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷನಿಂದ ರೈತರಿಗೆ ಸಹಾಯ
ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ನಾಡಿಗೆ ಅನ್ನ ಹಾಕುವ ರೈತರ ಋಣ ತೀರಿಸುವುದು ನನ್ನ ಕರ್ತವ್ಯ. ಹೀಗಾಗಿ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದ ವತಿಯಿಂದ ನೊಂದ ರೈತರಿಗೆ ನೆರವು ನೀಡಲಾಗುತ್ತಿದೆ. ದಾವಣಗೆರೆ ಕಂಪನಿಗೂ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಕೆ.ಎಂ.ಉಮಾಪತಯ್ಯ, ಖಜಾಂಚಿ ಶಾಂತರಾಜ್, ನಿರ್ದೇಶಕರಾದ ವಿ.ಪಿ.ಕೃಷ್ಣಮೂರ್ತಿ, ಸೋಮಶೇಖರ, ಉಮೇಶ, ಕಂಪನಿ ಸಿಇಒ ಶಿವಕುಮಾರ, ನಿರ್ದೇಶಕರಾದ ಕಂಬಾರ್ ರಾಜು, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.