ಬಿಡದೇ ಕಾಡಿದ ಮಳೆಗೆ ಹೈರಾಣಾದ ದಾವಣಗೆರೆ ಜನತೆ
ದಾವಣಗೆರೆಯಲ್ಲಿ ಅತಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ. ಮಳೆಯಿಂದಾಗಿ ತೊಂದರೆಗೊಳಗಾದ ಜನತೆ.
ದಾವಣಗೆರೆ, ಸೆಪ್ಟೆಂಬರ್ 25: ಸುಮಾರು 12 ಗಂಟೆಗಳಿಗೂ ಅಧಿಕ ಕಾಲ ದಾವಣಗೆರೆ ಜನತೆಯನ್ನು ಕಾಡಿದ ಮಳೆರಾಯ, ಅಲ್ಲಿನ ಜನಜೀವನವನ್ನು ಭಾರೀ ಪ್ರಮಾಣದಲ್ಲಿ ಅಸ್ತವ್ಯಸ್ತಗೊಳಿಸಿದ್ದಾನೆ.
ಕರ್ನಾಟಕದಲ್ಲಿ ಇನ್ನೂ 4 ದಿನ ಮುಂದುವರಿಯಲಿದೆ ವರುಣನ ಆರ್ಭಟ
ಭಾನುವಾರ ಸಂಜೆ ಸುಮಾರು 6:30ಕ್ಕೆ ಶುರುವಾದ ಮಳೆ, ಆನಂತರ ಜೋರಾಗಿ ರಾತ್ರಿಯಿಡೀ ಸುರಿಯಿತು. ಅಲ್ಲದೆ, ಬೆಳಗ್ಗೆಯೂ ಮುಂದುವರಿದು ಕಚೇರಿಗೆ, ಶಾಲಾ-ಕಾಲೇಜುಗಳಿಗೆ, ವಿವಿಧ ಕೆಲಸಗಳಿಗೆ ತೆರಳುವವರಿಗೆ ಭಾರೀ ತೊಂದರೆ ನೀಡಿತು.
ಅನೇಕ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿಯೂ ಬಸ್ ನಿಂತಿದ್ದರಿಂದ ಪ್ರಯಾಣಿಕರಿಗೆ ತಮ್ಮ ಆಯ್ಕೆಯ ಬಸ್ ಬಳಿಗೆ ಲಗೇಜ್ ಸಮೇತ ಹೋಗಿ ಬಸ್ ಹತ್ತಲು ಹರಸಾಹಸಪಟ್ಟರು.
ಬೂದಿಹಾಳ್ ರಸ್ತೆ ಬಳಿ ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ಜನರು ತೀವ್ರ ತೊಂದರೆಗೊಳಗಾದರು. ಮಧ್ಯರಾತ್ರಿ ನೀರು ನುಗ್ಗಿದ್ದರಿಂದ ನಿದ್ದೆಗೆಟ್ಟ ಜನರು ಬೆಳಗಿನ ಜಾವದವರೆಗೆ ನೀರು ತುಂಬಿ ಹಾಕುವ ಕೆಲಸ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಎಸ್ ಪಿಎಸ್ ನಗರದಲ್ಲಿಯೂ ಅನೇಕ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಯಿತು.
ಮಳೆಯಿಂದ ಹಾನಿಗೀಡಾದ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಭೇಟಿಯಿತ್ತು ಪರಿಶೀಲಿಸಿದರು.