ದಾವಣಗೆರೆ: ಭಾರಿ ಗಾಳಿ ಮಳೆಗೆ ಸಾವಿರಾರು ಎಕರೆ ಭತ್ತ ನಾಶ, ಕಂಗಾಲಾದ ರೈತ
ದಾವಣಗೆರೆ, ಮೇ 18 : ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಅನ್ನದಾತ ಕಂಗಾಲಾಗಿದ್ದಾನೆ. ಕೈಗೆ ಬಂದಿದ್ದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಭಾರೀ ಬಿರುಗಾಳಿ ಮಳೆಗೆ ಹರಿಹರ ತಾಲೂಕು ಒಂದರಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭತ್ತದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಸಾವಿರಕ್ಕೂ ಹೆಚ್ಚು ಅಡಿಕೆ, ತೆಂಗು, ಬೀಟೆ ಮರಗಳು ಧರಶಾಯಿಯಾಗಿವೆ. ಭಾಸ್ಕರ್ ರಾವ್ ಕ್ಯಾಂಪ್, ಕುಂಬಳೂರು, ಕೊಕ್ಕನೂರು ಹಾಗೂ ನಂದಿತಾವರೆ ಗ್ರಾಮ ಸೇರಿದಂತೆ ಹಲವು ಜಮೀನುಗಳಲ್ಲಿ ಹೆಚ್ಚಿನ ನಷ್ಟ ಆಗಿದೆ. ಹೊಳೆಸಿರಿಗೆರೆಯಲ್ಲಿ 19 ಮನೆಗಳು, ಮಲೇಬೆನ್ನೂರು, ಕಮಲಾಪುರ, ಬೂದಿಹಾಳ್, ಎಳೆಹೊಳೆ, ಕೊಕ್ಕನೂರು ಗ್ರಾಮದಲ್ಲಿ ತಲಾ ಒಂದೊಂದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸುಮಾರು 30 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಎಲ್ಲಾ ಕಂಬಗಳನ್ನು ಅಳವಡಿಸುವ ಕಾರ್ಯ ಮಾಡಲಾಗಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಕೊಟ್ರೇಶ್ ತಿಳಿಸಿದ್ದಾರೆ.
ಭಾರೀ ಗಾಳೆ ಮಳೆಯಿಂದಾಗಿ ಮಲೆಬೆನ್ನೂರಿನಲ್ಲಿ 90, ಕುಂಬಳೂರಿನಲ್ಲಿ 45, ಹೊಳೆಸಿರಿಗೆರೆಯಲ್ಲಿ 100, ಕಮಲಾಪುರದಲ್ಲಿ 25, ಕುಣಿಬೆಳಕೆರೆಯಲ್ಲಿ 160, ನಂದಿತಾವರೆಯಲ್ಲಿ 80, ಬೂದಿಹಾಳ್ ನಲ್ಲಿ 205, ಜಿಗಳಿಯಲ್ಲಿ 50 ಎಕರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ ಹಾಳಾಗಿದೆ.
ನ್ಯಾಮತಿಯಲ್ಲಿ 48.8 ಮಿ.ಮೀ ಮಳೆ
ಜಿಲ್ಲೆಯಲ್ಲಿ 24.9 ಮಿ.ಮೀ. ಸರಾಸರಿ ಮಳೆಯಾಗಿದ್ದು. 55.16 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ 27.3 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 24.7, ಹರಿಹರದಲ್ಲಿ 30.6 ಮಿ.ಮೀ, ಹೊನ್ನಾಳಿ 28.0 ಮಿ.ಮೀ ಮಳೆಯಾಗಿದೆ. ಜಗಳೂರು 8.5 ಮಿ.ಮೀ, ನ್ಯಾಮತಿಯಲ್ಲಿ 48.8 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ 60 ಸಾವಿರ ಮತ್ತು 205 ಎಕರೆ ಭತ್ತದ ಬೆಳೆ ಹಾಗೂ 20 ಗುಂಟೆ ಅಡಿಕೆ ಬೆಳೆ ಹಾನಿಯಾಗಿದ್ದು, ರೂ.4.40 ಲಕ್ಷ, ಒಂದು ಜಾನುವಾರು ಮೃತಪಟ್ಟಿದ್ದು ರೂ.30 ಸಾವಿರ ಸೇರಿ ಒಟ್ಟು ರೂ.5.30 ಲಕ್ಷ ನಷ್ಟ ಸಂಭವಿಸಿದೆ.
18.20 ಲಕ್ಷ ಅಂದಾಜು ನಷ್ಟ
ಹರಿಹರ ತಾಲ್ಲೂಕಿನ ವ್ಯಾಪ್ತಿಯಲ್ಲಿ 5 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ 1.10 ಲಕ್ಷ ಮತ್ತು 285-00 ಎಕರೆ ಭತ್ತದ ಬೆಳೆ ಮತ್ತು 1 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ರೂ.17.61 ಲಕ್ಷ, ಒಂದು ಕುರಿ ಮೃತಪಟ್ಟಿದ್ದು ರೂ.5 ಸಾವಿರ ಸೇರಿ ಒಟ್ಟು ರೂ.18.76 ಲಕ್ಷ ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಹಾನಿಯಾಗಿದ್ದು, ಅಂದಾಜು ರೂ 5.00 ಲಕ್ಷ, 40 ಎಕರೆ ಭತ್ತದ ಬೆಳೆ ಹಾಗೂ 16 ಎಕರೆ ಭತ್ತ ಮತ್ತು ಅಡಿಕೆ ಬೆಳೆ ಹಾನಿಯಾಗಿದ್ದು, ಒಟ್ಟು ರೂ.18.20 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
2.00 ಎಕರೆ ಟೋಮಾಟೋ ಹಾನಿ
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ಭಾಗಶಃ ಹಾನಿ ಆಗಿದ್ದು, ರೂ. 1 ಲಕ್ಷ ಹಾಗೂ 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 50 ಸಾವಿರ ಅಂದಾಜು ನಷ್ಟ ಆಗಿದೆ. 1 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ. 50 ಸಾವಿರ, ಒಟ್ಟು 2.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
2 ಕಚ್ಚಾ ಮನೆ ಭಾಗಶ: ಹಾನಿ
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. 6.30 ಎಕರೆ ಪಪ್ಪಾಯಿ ಬೆಳೆ, 3.00 ಎಕರೆ ಎಲೆಬಳ್ಳಿ, 2.00 ಎಕರೆ ಟೋಮಾಟೋ ಹಾನಿಯಾಗಿದ್ದು, ರೂ.50 ಸಾವಿರ ಸೇರಿ, ಒಟ್ಟು 10.90 ಲಕ್ಷ ಅಂದಾಜು ನಷ್ಟ ಆಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ ರೂ 55.16 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
Recommended Video