ವರುಣನ ಆರ್ಭಟಕ್ಕೆ ಬೆಣ್ಣೆನಗರಿ ಜನಜೀವನ ತತ್ತರ!
ದಾವಣಗೆರೆ, ಜುಲೈ 18: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಣ್ಣೆನಗರಿ ತತ್ತರಿಸಿದೆ. ನಗರದ ಕೆಇಬಿ ಕಾಲೋನಿ ಸೇರಿದಂತೆ ಹಲವೆಡೆ ನೀರು ನುಗ್ಗಿದ್ದು, ಜನರು ಪರದಾಡಿದ ಘಟನೆ ನಡೆದಿದೆ. ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಕೆರೆ ಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ಹಾಗೂ ಜಗಳೂರು ಸೇರಿದಂತೆ ಜಿಲ್ಲೆಯ ಎಲ್ಲೆಡೆ ರಾತ್ರಿಪೂರ್ತಿ ಮಳೆ ಸುರಿದಿದ್ದು, ಜನರಿಗೆ ಸಮಸ್ಯೆಯಾಗಿದೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ನೂರಾರು ಎಕರೆ ಜಲಾವೃತಗೊಂಡಿದೆ.
ಕೆಲವೆಡೆ ಪ್ರವಾಹ ಭೀತಿ ತಲೆದೋರಿದೆ. ತುಂಗಾ ನದಿಯ ಹೊರಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಗಾಜನೂರು ಡ್ಯಾಂನಿಂದ ನೀರು ಹೊರಬಿಡಲಾಗುತ್ತಿದೆ. ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹೊನ್ನಾಳಿ, ಹರಿಹರ ಮೂಲಕ ಹಾದು ಹೋಗುವ ಈ ನದಿಯಲ್ಲೀಗ ನೀರೋ ನೀರು.
ದಾವಣಗೆರೆ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಪಾಯವಾದರೂ ಈ ರಸ್ತೆಯಲ್ಲಿ ಜನರು ಸಂಚಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಬೈಕ್ ಸವಾರರು ಕಷ್ಟಪಟ್ಟುಕೊಂಡೇ ಹೋಗುತ್ತಿರುವುದು ಕಂಡು ಬರುತ್ತಿದೆ.
ಇನ್ನು ಕೊಂಡಜ್ಜಿ, ತುಪ್ಪದಹಳ್ಳಿ, ಹಿರೇಮೇಗಳಗೇರೆ ಕೆರೆ ಸೇರಿದಂತೆ ಹಲವು ಕೆರೆಗಳು ತುಂಬಿವೆ. ಇನ್ನು ಒಂದೆಡೆ ಮಳೆ ಬಂದು ನೀರು ಹೆಚ್ಚಾಗಿ ಬರುತ್ತಿದ್ದರೂ ಕೆಲವೆಡೆ ಬೆಳೆದಿದ್ದ ಬೆಳೆ ನೀರು ಪಾಲಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕೆರೆಗಳಿಗೆ ಒಂದೇ ದಿನ ಹತ್ತು ಅಡಿಗೂ ಹೆಚ್ಚು ನೀರು ಹರಿದು ಬಂದಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ಕೋಟಿ ರೂಪಾಯಿಗೂ ಅಧಿಕ ನಷ್ಟ ಮಳೆಯಿಂದ ಆಗಿದೆ ಎಂದು ಅಂದಾಜಿಸಲಾಗಿದೆ.