ದಾವಣಗೆರೆ: ಭಾರಿ ಮಳೆ, ಗಾಳಿಗೆ 300 ಅಡಿಕೆ ಮರಗಳು ನೆಲಸಮ
ದಾವಣಗೆರೆ, ಮೇ.10: ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಬಾರೀ ಮಳೆ, ಗಾಳಿಗೆ ಅನ್ನದಾತ ಬಾಯಿ ಬಿಡುವಂತಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ವರುಣ ತನ್ನ ಅಬ್ಬರ ಮುಂದುವರೆಸಿದ್ದು ರೈತರ ಜಮೀನಿನಲ್ಲಿದ್ದ ಬೆಳೆಗೆ ಹಾನಿ ಉಂಟಾಗಿದೆ.
ಇನ್ನೂ ದಾವಣಗೆರೆ ತಾಲೂಕಿನ ದೊಡ್ಡ ಮಾಗಡಿ ಗ್ರಾಮದ ಮಲ್ಲಿಕಾರ್ಜುನ ಅವರು 13 ವರ್ಷ ಗಳಿಂದ ಪೋಷಣೆ ಮಾಡಿ ಫಸಲು ಬಿಡುವತನಕ ಮಗುವಿನಂತೆ ನೋಡಿಕೊಂಡಿದ್ದ 300ಕ್ಕೂ ಅಧಿಕ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.
ಬಾರೀ ಮಳೆ, ಗಾಳಿ ಸಹಿತ ನಿನ್ನೆ ಸುರಿದ ಮಳೆ 3 ಎಕರೆ ಜಮೀನಿನಲ್ಲಿ ಇದ್ದ 300ಕ್ಕೂ ಅಧಿಕ ಅಡಿಕೆ ಮರಗಳು ಭಾಗಶಃ ಮುರಿದುಬಿದ್ದಿವೆ. ಇನ್ನೂ ಬಿದ್ದ ಮರಗಳನ್ನ ಹಗ್ಗದ ಸಹಾಯದಿಂದ ಕಟ್ಟುತ್ತಿದ್ದ ರೈತ ಮಲ್ಲಿಕಾರ್ಜುನ ಅವರು ಮತ್ತೆ ಗಾಳಿಗೆ ನೆಲಕ್ಕೆ ಬೀಳುತ್ತಿದ್ದ ಮರಗಳನ್ನ ಕಂಡು ಕಣ್ಣೀರು ಹಾಕುತ್ತಿದ್ದಾರೆ. ನೀರಾವರಿಗಾಗಿ ಪಕ್ಕದ ಜಮೀನಲ್ಲಿ ಮಹೇಶಪ್ಪ ಈರಪ್ಪ ಎಂಬುವವರ ತೋಟಕ್ಕೆ ಕೂರಿಸಿದ ಟಿಸಿ, ತೋಟದ ಮನೆ ಸಹ ಉರುಳಿಬಿದ್ದಿದೆ.
ರೈತ ಮಲ್ಲಿಕಾರ್ಜುನ ಅವರ ತೋಟ ಅಷ್ಟೇ ಅಲ್ಲದೆ ದಾವಣಗೆರೆ ತಾಲೂಕಿನ ಮಾಯಕೊಂಡದ ಹೊಬ್ಳಿ ಸುತ್ತಮುತ್ತ ಅನೇಕ ಕಡೆ ಅಡಿಕೆ ಮರಗಳು ನೆಲಕ್ಕೆ ಉರಳಿಬಿದ್ದಿವೆ. ಇತ್ತ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರೂ ಯಾವೊಬ್ಬ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ಮಾಡುತ್ತಿಲ್ಲ. ಸರ್ಕಾರದಿಂದ ಸರಿಯಾದ ಪರಿಹಾರಕ್ಕೆ ಕೂಡ ಒದಗಿಸಿಲ್ಲ ಕೂಡಲೇ ನಮಗೆ ಬೆಳೆ ಹಾನಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸುತಿದ್ದಾರೆ.
ಪರಿಹಾರ ಕೊಡಿಸುವುದಾಗಿ ಶಾಸಕ ಪ್ರೊ. ಲಿಂಗಣ್ಣ ಭರವಸೆ..!
ತಾಲೂಕಿನ ನಾನಾ ಭಾಗಗಳಲ್ಲಿ ಬೆಳೆ ಹಾನಿ ಪರೀಕ್ಷಿಸಿದ ಶಾಸಕ ಪ್ರೊ. ಲಿಂಗಣ್ಣ ಅವರು ರೈತ ಮಲ್ಲಿಕಾರ್ಜುನ ಅವರಿಗೂ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಇನ್ನೂ ದಾವಣಗೆರೆ ಪಟ್ಟಣದಲ್ಲಿ ಸುರಿದ ಮಳೆ ಜನರಿಗೆ ತಂಪೆರೆದರೆ ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡರಿಂದ ಮೂರು ದಿನಗಳು ಸಹ ಮೋಡ ಕವಿದ ವಾತಾವರಣ ಇತ್ತು. ನಗರದಲ್ಲಿ ತುಂತುರು ಮಳೆಯಾಗುತಿದೆ. ಬಿಡುವಿಲ್ಲದ ಮಳೆಯಿಮದ ಜಮೀನುಗಳಲ್ಲಿ ಕೆಲಸ ಮಾಡಲು, ಕುರಿ-ಮೇಕೆ ಮೇಯಿಸಲು ಮತ್ತು ಸಾರ್ವಜನಿಕರು, ವಾಹನ ಸವಾರರು ಓಡಾಡಲು ಪರದಾಡುವಂತಾಗಿದೆ.