ದಾವಣಗೆರೆ; ಅನ್ನದಾತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ ಮಳೆ!
ದಾವಣಗೆರೆ, ಮೇ 19: ದಾವಣಗೆರೆ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ವರುಣನ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗುತ್ತಿದೆ. ಸೇತುವೆಗಳು ಮುಳುಗಿದ್ದು, ಜನರ ಓಡಾಟ ಸ್ಥಬ್ಧಗೊಂಡಿದೆ.
ಹರಿಹರ, ಹೊನ್ನಾಳಿ, ಜಗಳೂರು, ಚನ್ನಗಿರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆಯಾಗುತ್ತಿದೆ. 3 ಸಾವಿರಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನಾಶವಾಗಿದೆ. ಮಳೆ ಸುರಿಯುತ್ತಲೇ ಇರುವುದರಿಂದ ಬೆಳೆದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಇನ್ನು ಅಡಿಕೆ, ತೆಂಗು, ಬಾಳೆಯೂ ಸಹ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಜಖಂಗೊಂಡ ಘಟನೆ ದಾವಣಗೆರೆಯ ಎಸ್. ಎಸ್. ಲೇಔಟ್ನಲ್ಲಿ ನಡೆದಿದೆ. ಮರ ಬಿದ್ದ ಕಾರಣ ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು.
ಹೆಬ್ಬಾಳು ಗ್ರಾಮದಲ್ಲಿ ಭಾರೀ ಮಳೆಗೆ ಶಾಲೆ ಜಲಾವೃತಗೊಂಡಿದ್ದು, ಮಕ್ಕಳು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಅವೈಜ್ಞಾನಿಕ ಕಾಮಗಾರಿಯೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ತಿಪ್ಪೇರುದ್ರಸ್ವಾಮಿ ಶಾಲೆ ಜಲಾವೃತಗೊಂಡಿದ್ದು, ಶಾಲೆಯ ಆವರಣದೊಳಗೆ ರಸ್ತೆಯಲ್ಲಿನ ನೀರು ನುಗ್ಗಿದೆ. ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯೂ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದರು.
ಸತತ ಮೂರು ದಿನಗಳ ಕಾಲ ಬಿಟ್ಟು ಬಿಡದೆ ಸುರಿದ ಮಳೆ ಹಾಗೂ ಬಿರುಗಾಳಿಗೆ ಬೃಹತ್ ಆಲದ ಮರ ಉರುಳಿ ಬಿದ್ದ ಘಟನೆ ದಾವಣಗೆರೆ ಜಿಲ್ಲೆಯ ಶಾಗಲೇ ಗ್ರಾಮದಲ್ಲಿ ನಡೆದಿದೆ. ಸುಮಾರು 200 ವರ್ಷಗಳ ಹಳೆಯ ಆಲದ ಮರ ಕುಸಿದು ಬಿದ್ದಿದೆ. ಕರಿಯಮ್ಮ ದೇವಾಲಯದ ಕಾಂಪೌಂಡ್ನಲ್ಲಿ ಇದ್ದ ಮರ ಇದಾಗಿದ್ದು, ಮರ ಬಿದ್ದ ರಭಸಕ್ಕೆ ಕರಿಯಮ್ಮ ದೇವಾಲಯದ ಕಾಂಪೌಂಡ್ಗೆ ಹಾನಿಯಾಗಿದೆ.
ವಿದ್ಯುತ್ ಪ್ರವಹಿಸಿ ಯುವಕ ಸಾವು; ಮೋಟಾರ್ ಸ್ಟಾರ್ಟ್ ಮಾಡಲು ಹೋಗಿ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು ಕಂಡ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್ (28) ಮೃತ ಯುವಕ. ಅಡಿಕೆ ತೋಟಕ್ಕೆ ಪಂಪ್ ಸೆಟ್ ಸ್ಟಾರ್ಟ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದ್ದು, ಮಳೆ ಬಂದ ಹಿನ್ನಲೆಯಲ್ಲಿ ವಿದ್ಯುತ್ ಗ್ರೌಂಡ್ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಒಂದೇ ದಿನಕ್ಕೆ 42.33 ಲಕ್ಷ ರೂ ಅಂದಾಜು ನಷ್ಟ; ಕಳೆದ ಮೂರು ದಿನಗಳಿಂದ ಹಾನಿ ಆಗುತ್ತಿರುವುದು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ 9.1 ಮಿ.ಮೀ. ಸರಾಸರಿ ಮಳೆಯಾಗಿದ್ದು ಒಂದೇ ದಿನಕ್ಕೆ 42.33 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಚನ್ನಗಿರಿ 15.2 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 6.5, ಹರಿಹರದಲ್ಲಿ 7.1 ಮಿ.ಮೀ, ಹೊನ್ನಾಳಿ 8.3 ಮಿ.ಮೀ ಮಳೆಯಾಗಿದೆ. ಜಗಳೂರು 5.9 ಮಿ.ಮೀ, ನ್ಯಾಮತಿಯಲ್ಲಿ 7.6 ಮಿ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ತೆಂಗು ಬೆಳೆ ಹಾನಿಯಾಗಿದ್ದು, ರೂ. 0.70ಲಕ್ಷಅಂದಾಜು ನಷ್ಟ ಸಂಭವಿಸಿದೆ. ಹರಿಹರ ತಾಲ್ಲೂಕಿನ ವ್ಯಾಪ್ತಿಯಲ್ಲಿ 5 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.50 ಲಕ್ಷ, 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 0.30 ಲಕ್ಷ, 16 ವಾಸದ ಮನೆಗಳ ಮನೆಯ ಮೇಲ್ಛಾವಣಿ ಸಿಮೆಂಟ್ ಶೀಟ್, ಹಂಚು ಹಾನಿಯಾಗಿದೆ.
329 ಎಕರೆ ಭತ್ತದ ಬೆಳೆ, 5 ಎಕರೆ ಬಾಳೆ ಬೆಳೆ, 8 ಎಕರೆ ಅಡಿಕೆ ಮತ್ತು ತೆಂಗು ಬೆಳೆ ಹಾನಿಯಾಗಿದ್ದು, ರೂ. 26.13 ಲಕ್ಷ ಒಟ್ಟು ರೂ.32.73 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.0.50 ಲಕ್ಷ1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 0.50 ಲಕ್ಷ, 1 ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ.0.10 ಲಕ್ಷ, 20 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ.4. ಲಕ್ಷ ಒಟ್ಟುರೂ.5.10 ಲಕ್ಷಅಂದಾಜು ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ. 42.33 ಲಕ್ಷ ಅಂದಾಜು ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.