ಬೆಣ್ಣೆನಗರಿ ದಾವಣಗೆರೆಯಲ್ಲಿ ವರುಣಾರ್ಭಟ: ಯಲ್ಲೋ ಅಲರ್ಟ್, ಕಟ್ಟೆಚ್ಚರ
ದಾವಣಗೆರೆ, ಜುಲೈ 7: ಕಳೆದೊಂದು ವಾರದಿಂದ ಎಡೆಬಿಡದೇ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ. ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದ ಬೆನ್ನಲ್ಲೆ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
ಹರಿಹರದಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹದ ಭೀತಿ ತಲೆದೋರಿದೆ. ರೈತರ ಜಮೀನುಗಳಲ್ಲಿ ನೀರು ನಿಂತಿದ್ದು, ಬಿತ್ತನೆ ಮಾಡಿದ ರೈತರು, ಮೆಕ್ಕೆಜೋಳ ಬೆಳೆದ ಬೆಳೆಗಾರರು ಸೇರಿದಂತೆ ರೈತಾಪಿ ವರ್ಗ ಇದೇ ರೀತಿ ಮಳೆ ಸುರಿದರೆ ಈ ವರ್ಷವೂ ನಷ್ಟವಾಗುತ್ತದೆ ಎಂಬ ಭೀತಿಯಲ್ಲಿದ್ದಾರೆ. ಇನ್ನೂ ಶಿವಮೊಗ್ಗದ ಗಾಜನೂರು ಡ್ಯಾಂನಿಂದ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹೊರಬಿಡುತ್ತಿರುವುದರಿಂದ ತುಂಗಾಭದ್ರಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ದಾವಣಗೆರೆ ಬೇಲಿಮಲ್ಲೂರಿನಲ್ಲಿ ನಿತ್ಯವೂ ಕುರಿಗಳ ಸಾವು! ಯಾಕೆ?
ಇನ್ನು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರೋ ಮಳೆಯು ಜನರನ್ನು ಹೈರಾಣಾಗಿಸಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ತುಂಗಾಭದ್ರಾ ಮೈದುಂಬಿ ಹರಿಯುತ್ತಿದೆ. ಕ್ಷಣಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಹರಿಹರ ತಾಲೂಕಿನ ಉಕ್ಕಡಗತ್ರಿ ದೇವಸ್ಥಾನದ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿಗೆ ಯಾರು ಇಳಿಯದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.
ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ
ಕಳೆದ ಮೂರು ದಿನಗಳಿಂದ ಮಳೆ ಜೋರಾಗಿ ಸುರಿಯುತ್ತಿದೆ. ವರುಣನ ಆರ್ಭಟಕ್ಕೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಾಗುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ಜನ ಜಾನುವಾರುಗಳನ್ನು ನೀರಿನ ಹತ್ತಿರ ಸುಳಿಯದಂತೆ ಜಾಗೃತಿ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ
ವಾಯುಭಾರ ಕುಸಿತದಿಂದ ಮಳೆ ಪ್ರಮಾಣ ಕಡಿಮೆ ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಮಳೆ ಇನ್ನೂ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಬಿಡುವಿಲ್ಲದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಭದ್ರಾ ಡ್ಯಾಂನಿಂದ 136, ತುಂಗಾ ಡ್ಯಾಂನಿಂದ 42.358 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ತಾಲ್ಲೂಕು ಕಂದಾಯ ಇಲಾಖೆಯ ಹೋಬಳಿ ಮತ್ತು ಕಸಬಾ ರಾಜಸ್ವ ನಿರೀಕ್ಷಕರು ಗ್ರಾಮಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಸೇರಿದಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶ ನದಿ ಪಾತ್ರದಲ್ಲಿ ಇರುವ ನಾಗರಿಕರಿಗೆ ಎಚ್ಚರಿಕೆ ಜಾಗೃತಿ ವಹಿಸುವಂತೆ ಟಾಂ ಟಾಂ ಹೊಡಿಸುವಂತೆ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಇರುವಂಥ ನಿವಾಸಿಗಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಳಿಸಬೇಕು. ನದಿಯ ಪಾತ್ರದ ಹತ್ತಿರ ಸುಳಿಯದಂತೆ ಎಚ್ಚರಿಕೆ ವಹಿಸಬೇಕು.
ಮಳೆಯಿಂದ ಹಾನಿಯಾದವರಿಗೆ ಪರಿಹಾರ
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾಮನೆ ಭಾಗಶ: ಹಾನಿಯಾಗಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಪಕ್ಕಾಮನೆ ಭಾಗಶಃ ಹಾನಿಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
Recommended Video
ಜಿಲ್ಲೆಯ ಮಳೆಯ ವಿವರ
ಚನ್ನಗಿರಿಯಲ್ಲಿ ವಾಡಿಕೆ ಮಳೆ 7.3 ಮಿ.ಮೀ ಹಾಗೂ ವಾಸ್ತವ ಮಳೆ 9.0 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 2.1 ಮಿ.ಮೀ ಹಾಗೂ ವಾಸ್ತವ ಮಳೆ 9.1 ಮಿ.ಮೀ, ಹರಿಹರದಲ್ಲಿ ವಾಡಿಕೆ ಮಳೆ 2.8 ಮಿ.ಮೀ ಹಾಗೂ ವಾಸ್ತವ ಮಳೆ 8.3 ಮಿ.ಮೀ, ಹೊನ್ನಾಳಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 10.8 ಮಿ.ಮೀ, ಜಗಳೂರು ವಾಡಿಕೆ ಮಳೆ 2.4 ಮಿ.ಮೀ ಹಾಗೂ ವಾಸ್ತವ ಮಳೆ 7.1 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 5.0 ಮಿ.ಮೀ ಹಾಗೂ ವಾಸ್ತವ ಮಳೆ 17.6 ಮಿ.ಮೀ ಮಳೆಯಾಗಿದೆ.