ಕುಮಾರಸ್ವಾಮಿಗೆ ಹತಾಶರಾಗಿ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್
ದಾವಣಗೆರೆ, 28: ಆರ್ ಎಸ್ ಎಸ್ ಬಗ್ಗೆ ಕೇವಲವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಬುದ್ಧಿ ಇಲ್ಲ. ಈ ರೀತಿಯಾದ ಹೇಳಿಕೆ ಕೊಡೋದು ಶೋಭೆ ತರುವಂಥದ್ದಲ್ಲ ಎಂದು ಸಹಕಾರ ಸಚಿವ ಎಸ್. ಟಿ.ಸೋಮಶೇಖರ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿಯು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ. ಈ ರೀತಿಯಾದ ಹೇಳಿಕೆ ಕೊಡೋದು ಶೋಭೆ ತರುವಂಥದ್ದಲ್ಲ ಎಂದರು.
ಪಠ್ಯಪರಿಷ್ಕರಣೆ ಉದ್ದಟತನ ಹೀಗೆ ಬಿಟ್ಟರೆ ಕಷ್ಟ ಎದುರಿಸಲು ಸಿದ್ಧರಾಗಿ: ಸಿಎಂಗೆ ಕಾಗಿನೆಲೆ ಶ್ರೀ ಎಚ್ಚರಿಕೆ!
ಎಚ್ಡಿಕೆಗೆ ಸೋಮಶೇಖರ್ ಎಚ್ಚರಿಕೆ
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಅಗ್ನಿಪಥ್ ಯೋಜನೆ ಆರ್ ಎಸ್ಎಸ್ ಯೋಜನೆ ಎಂಬ ಅನುಮಾನವಿದೆ. ಇವರಿಗೆ ಈ ಯೋಜನೆಯ ಸಲಹೆ ಕೊಟ್ಟವರು ಯಾರು...! ರಕ್ಷಣಾ ಇಲಾಖೆಗೆ ಯಾರು ಸಲಹೆ ಕೊಟ್ಟರು. ಸಂಸದರ ಸಮಿತಿ ಸಲಹೆ ಕೊಟ್ಟಿದೆಯಾ ಅಥವಾ ಆರ್ಎಸ್ಎಸ್ ನವರು ಸಲಹೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಎಸ್ ಟಿ ಸೋಮಶೇಖರ್ ಮಾತನಾಡಿ, ಆರ್ ಎಸ್ ಎಸ್ ನವರಿಗೆ ಶೇಕಡಾ 40 ರಷ್ಟು ಕಮಿಷನ್ ಕೊಡುತ್ತಾರೆ ಅಂದರೆ ಏನರ್ಥ. ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆ. ಇದರ ಬಗ್ಗೆ ಮಾತಾಡುವುದು ಸರಿಯಲ್ಲ. ಮೇಲಾಗಿ ಕುಮಾರಸ್ವಾಮಿ ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾಗಿ ಇಂತಹ ಆರೋಪಗಳನ್ನ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ತಿಳಿದು ಮಾತನಾಡಬೇಕು ಎಂದು ಸೋಮಶೇಖರ್ ಎಚ್ಚರಿಕೆ ನೀಡಿದರು.
ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟನೆ
ರಾಜ್ಯದ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ಕೊಡಲು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಶಸ್ವಿನಿ ಯೋಜನೆ ಅಕ್ಟೋಬರ್ 2 ರಿಂದ ಜಾರಿ ಸಾಧ್ಯತೆ ಇದೆ. ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ತಯಾರಿ ಆಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಲಾಗಿದೆ. ಅಕ್ಟೋಬರ್ 2 ರಂದು ಉದ್ಘಾಟನೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈಗಾಗಲೇ ಹಾಲು ಉತ್ಪಾಕರಿಗೆ ಅನುಕೂಲ ಆಗುವಂತೆ ಕ್ಷೀರ ಸಮೃದ್ಧಿ ಬ್ಯಾಂಕ್ ಆರಂಭದ ಯೋಜನೆ ಇದೆ. ಇದರಲ್ಲಿ ಒಂಬತ್ತು ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶವಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ವೈಭವೀಕರಣ
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಬೈರತಿ ಬಸವರಾಜ್, "ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪರಮ ಪೂಜ್ಯರ ಜೊತೆ ಸಿಎಂ ಬಳಿ ನಾನು ಹೋಗಿದ್ದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಹಿಂದಿನ ಅವಧಿಯಲ್ಲಿ ಕೂಡ ಅನೇಕ ತಪ್ಪು ಆಗಿವೆ. ಅದನ್ನು ಸರಿಪಡಿಸಿ ವಿತರಣೆ ಮಾಡುವಂತಾಗಿದೆ. ಸಿಎಂ ಸಕಾರಾತ್ಮಕವಾಗಿ ಒಪ್ಪಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಪರಮ ಪೂಜ್ಯರು ಕೂಡ ಸಂತೋಷದಿಂದ ಒಪ್ಪಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ನವರು ಪಠ್ಯ ಪುಸ್ತಕ ವಿಚಾರದಲ್ಲಿ ವೈಭವೀಕರಣ ಮಾಡ್ತಾ ಇದ್ದಾರೆ.ಅವರ ಅವಧಿಯಲ್ಲಿ ತಪ್ಪು ಆಗಿದೆ, ಅವರ ಬೆನ್ನನ್ನು ಕೂಡ ಅವರು ನೋಡಿಕೊಳ್ಳಬೇಕು. ಏನಾದ್ರು ತಪ್ಪು ಇದ್ದರೆ ಅದನ್ನು ಸರಿಪಡಿಸಲು ಸರ್ಕಾರ ಮುಕ್ತವಾಗಿದೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಇದರ ಬಗ್ಗೆ ಸಿದ್ದರಾಮಯ್ಯ ಅವರನ್ನೇ ಕೇಳಿ," ಎಂದು ಹೇಳಿದರು.
ಯಾರನ್ನಾದರೂ ಸಿಎಂ ಮಾಡಿಕೊಳ್ಳಲಿ: ಸಚಿವ ಬೈರತಿ ಬಸವರಾಜ್
ತುಮಕೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದರು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಈಗಾಗಲೇ ಎಲ್ಲಾ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆಗಳು ಜೋರಾಗಿಯೇ ನಡೀತಿದೆ. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ನಾನಾ ಕರಸತ್ತು ಮಾಡ್ತಿದ್ದಾರೆ. ಮುಂದಿನ ನಾನೇ ಸಿಎಂ ಎಂದು ಅಚ್ಚರಿಯ ಹೇಳಿಕೆ ನೀಡಿದ್ಧಾರೆ. ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಮಾತಾಡಿದ ಕುಮಾರಸ್ವಾಮಿ ಸ್ವಾಮೀಜಿಗಳ ಆಸೆ ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.
ಮುಂದಿನ ಸಿಎಂ ಕುಮಾರಸ್ವಾಮಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪಕ್ಷಕ್ಕೆ ಸೇರಿದ ವಿಚಾರ. ಯಾರನ್ನಾದರೂ ಸಿಎಂ ಮಾಡಿಕೊಳ್ಳಲಿ.ಕಾಂಗ್ರೆಸ್ ನಿಂದ ಬಿಜೆಪಿಗೆ ಬಹಳಷ್ಟು ಜನರ ಬರ್ತಾರೆ. ಮುಂದಿನ ದಿನಗಳಲ್ಲಿ ಬಹಿರಂಗ ಆಗುತ್ತದೆ. ಬೆಳವಣಿಗೆಗಳನ್ನು ಕಾದು ನೋಡಿ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.