ದಾವಣಗೆರೆ; ಜೀವನ ನಡೆಸಲು ಕಾಯಿ, ತರಕಾರಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು
ದಾವಣಗೆರೆ, ಜುಲೈ 30: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಸಕಾಲದಲ್ಲಿ ಗೌರವಧನ ಬಿಡುಗಡೆಯಾಗದೇ ನೂರಾರು ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಕಂಗಾಲಾಗುವಂಥ ಪರಿಸ್ಥಿತಿ ಎದುರಾಗಿದೆ. ಇದೀಗ ಅವರು ಜೀವನ ನಿರ್ವಹಣೆಗಾಗಿ ಬೇರೆ ಕೆಲಸಗಳತ್ತ ವಾಲುತ್ತಿದ್ದಾರೆ.
Recommended Video
ದಾವಣಗೆರೆ ಜಿಲ್ಲೆಯಲ್ಲೇ ಹಲವು ಉಪನ್ಯಾಸಕರು ತರಕಾರಿ ಮಾರುವ, ಬೀದಿ ಬದಿ ವ್ಯಾಪಾರ ಮಾಡುವ ಕೆಲಸವನ್ನು, ಭದ್ರತಾ ಸಿಬ್ಬಂದಿಯ ಕೆಲಸವನ್ನು ಮಾಡಲು ಆರಂಭಿಸಿದ್ದಾರೆ. ಸರಿಯಾದ ಸಮಯದಲ್ಲಿ ಸಂಬಳ, ಗೌರವಧನ ಸಿಗದೇ ಕುಟುಂಬ ನಿರ್ವಹಣೆಗೆ ವ್ಯಾಪಾರ ಮಾಡುತ್ತಿದ್ದಾರೆ. ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಎ.ಎಂ. ಮಾಲತೇಶ್ ಅವರು ತೆಂಗಿನಕಾಯಿ ಮಾರಾಟ ಮಾಡಲು ಆರಂಭಿಸಿದ್ದರೆ, ಅಕೌಂಟೆನ್ಸಿ ಉಪನ್ಯಾಸಕರಾಗಿರುವ ಕುಕ್ಕವಾಡ ಗ್ರಾಮದ ಎಂ. ಅರುಣ್ಕುಮಾರ್ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಈ ಸಮಯದಲ್ಲಿ ಕೇಳೋರಿಲ್ಲ ಅತಿಥಿ ಶಿಕ್ಷಕ, ಉಪನ್ಯಾಸಕರ ಗೋಳು
ತೆಂಗಿನ ಕಾಯಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕ
ಹೊನ್ನಾಳಿಯಲ್ಲಿ ಆರು ವರ್ಷ ಕೆಲಸ ಮಾಡಿ ಹರಿಹರದಲ್ಲಿ ಏಳು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮಾಲತೇಶ್ ಅವರಿಗೆ ತಂದೆ-ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ಇದೆ. ಇದೀಗ ಹಳ್ಳಿಹಳ್ಳಿಗಳಲ್ಲಿ ಸುತ್ತಿ ತೆಂಗಿನಕಾಯಿ ತಂದು, ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾಮೂಲಿ ದಿನಗಳಲ್ಲಿ ₹150ರಿಂದ ₹200 ಹಾಗೂ ಸಂತೆ ಇದ್ದಾಗ ₹300ರಿಂದ ₹400ವರೆಗೆ ಸಂಪಾದಿಸುತ್ತಿದ್ದಾರೆ.
"ಸಂಬಳಕ್ಕಾಗಿ ಎರಡು ಮೂರು ತಿಂಗಳು ಕಾದೆವು"
‘ಸಂಬಳಕ್ಕಾಗಿ ಎರಡು, ಮೂರು ತಿಂಗಳು ಕಾದೆವು. ಆದರೆ ಬರಲಿಲ್ಲ. ಇದ್ದ ಅಲ್ಪಸ್ವಲ್ಪ ಹಣ ಲಾಕ್ಡೌನ್ ಸಮಯ ಎರಡು ತಿಂಗಳು ಜೀವನ ನಿರ್ವಹಣೆಗೆ ಆಯಿತು. ಆದರೆ, ಯಾವುದೇ ಆದಾಯದ ಮೂಲ ಇಲ್ಲದಿರುವುದರಿಂದ ತೆಂಗಿನಕಾಯಿ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಬಂತು. ಮನೆ ಬಾಡಿಗೆ ಕಟ್ಟಲೂ ಕಷ್ಟವಾಗಿದೆ' ಎಂದು ದುಃಖ ಹೇಳಿಕೊಂಡರು ಮಾಲತೇಶ್.
ತರಕಾರಿ ಮಾರುತ್ತಿರುವ ಅಕೌಂಟೆನ್ಸಿ ಉಪನ್ಯಾಸಕ
ಚಾಣಕ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಅಕೌಂಟೆನ್ಸಿ ಉಪನ್ಯಾಸಕರಾಗಿರುವ ಕುಕ್ಕವಾಡ ಗ್ರಾಮದ ಎಂ. ಅರುಣ್ಕುಮಾರ್ ತರಕಾರಿ ಮಾರಾಟ ಮಾಡುತ್ತಿದ್ದಾರೆ. ರಂಗನಾಥ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಇವರು ತಂದೆ-ತಾಯಿ, ಪತ್ನಿ ಇಬ್ಬರು ಮಕ್ಕಳನ್ನು ಸಲಹಬೇಕಿದೆ. ಆದ್ದರಿಂದ ವ್ಯಾಪಾರಕ್ಕೆ ಇಳಿದಿದ್ದಾರೆ. ‘ಆರಂಭದಲ್ಲಿ ವ್ಯಾಪಾರ ಆಗಲಿಲ್ಲ. ನಮ್ಮ ವಿದ್ಯಾರ್ಥಿಗಳು ನನ್ನಲ್ಲಿಗೆ ಬಂದು ತರಕಾರಿ ಖರೀದಿ ಮಾಡುತ್ತಿದ್ದಾರೆ. ಬಾಡಿಗೆ ಕಟ್ಟಲು, ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿ ತರಕಾರಿ ವ್ಯಾಪಾರ ಅನಿವಾರ್ಯವಾಯಿತು' ಎನ್ನುತ್ತಾರೆ ಅವರು.
ಸಂಕಷ್ಟದಲ್ಲಿರುವ ಉಪನ್ಯಾಸಕರ ನೆರವಿಗೆ ಬರುವಂತೆ ಆಗ್ರಹ
‘ಬಾಡಿಗೆ ಕಟ್ಟಲು, ಜೀವನ ನಿರ್ವಹಣೆ ಮಾಡಲು ಆಗದೇ ರಾಜ್ಯದ ವಿವಿಧೆಡೆ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು' ಎಂಬುದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಕೊಟ್ರೇಶ್ ಅವರ ಆಗ್ರಹ.