ಬೇಡಿಕೊಂಡರೂ ಬಿಡದೇ ವೃದ್ಧನ ತಕ್ಕಡಿ ಕಿತ್ತುಕೊಂಡು ದರ್ಪ ಮೆರೆದ ಯುವಕರು
ದಾವಣಗೆರೆ, ಅಕ್ಟೋಬರ್ 9: ಜಖಾತಿ ಹಣ ನೀಡದಿದ್ದಕ್ಕೆ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ ವೃದ್ಧನ ತಕ್ಕಡಿ ಕಿತ್ತುಕೊಂಡು ಯುವಕರು ದರ್ಪ ಮೆರೆದ ಅಮಾನವೀಯ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಕೆ.ಆರ್. ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಹಾಗೂ ರೈತರು ತರಕಾರಿ ಮತ್ತಿತರ ಸಾಮಗ್ರಿಗಳನ್ನು ಮಾರಾಟ ಮಾಡಲು ಬಂದಿರುತ್ತಾರೆ. ಅಂಥವರ ಬಳಿ ಪಾಲಿಕೆ ವತಿಯಿಂದ ಶುಲ್ಕವನ್ನು ಪಡೆಯಲು ಟೆಂಡರ್ ಪಡೆದಿರುತ್ತಾರೆ. ಆದರೆ ಕೆಲ ಟೆಂಡರ್ ದಾರರು ವ್ಯಾಪಾರಸ್ಥರ ಹಾಗೂ ರೈತರ ಮೇಲೆ ರೌಡಿಸಂ ಮಾಡುತ್ತಿದ್ದಾರೆ.
ಮಾಜಿ ಸಚಿವ ಚಲುವರಾಯಸ್ವಾಮಿ ಅಣ್ಣನ ಮಗನಿಂದ ರೈತನ ಮೇಲೆ ಹತ್ಯೆ ಯತ್ನ?
ಇಂದು ಯುವಕರ ಗುಂಪೊಂದು ವ್ಯಾಪಾರ ಮಾಡುತ್ತಿದ್ದ ವೃದ್ಧನೊಬ್ಬನ ಮೇಲೆ ದರ್ಪ ತೋರಿದ್ದು, ವ್ಯಾಪಾರ ಇನ್ನೂ ಆಗಿಲ್ಲ, ಆಮೇಲೆ ಜಖಾತಿ ಹಣ ನೀಡುತ್ತೇವೆ ಎಂದು ಪರಿಪರಿಯಾಗಿ ಕೇಳಿಕೊಂಡರೂ ತಕ್ಕಡಿಯನ್ನು ಕಿತ್ತುಕೊಂಡು ದರ್ಪ ಮೆರೆದಿದ್ದಾರೆ. ನಂತರ ವೃದ್ಧ ನಿಸ್ಸಹಾಯಕತನದಿಂದ ಹಣವನ್ನು ನೀಡಿ ಕಳಿಸಿದ್ದಾರೆ.
ಜಕಾತಿ ಶುಲ್ಕವನ್ನು ವ್ಯಾಪಾರವಾದ ನಂತರ ಪಡೆಯಬೇಕು. ಅದನ್ನು ಬಿಟ್ಟು ವ್ಯಾಪಾರಕ್ಕಿಂತ ಮೊದಲೇ ಹಣ ವಸೂಲಿ ಮಾಡಲು ಯುವಕರ ಗುಂಪು ಮುಂದಾಗಿ ವೃದ್ಧನ ಮೇಲೆ ದರ್ಪ ತೋರಿದೆ. ಈ ಯುವಕರು ರೌಡಿಸಂ ಮಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.