ಗ್ರಾ.ಪಂ ಉಪಾಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಸದಸ್ಯರಿಗೆ ಆಣೆ ಪ್ರಮಾಣ ಶಿಕ್ಷೆ!
ದಾವಣಗೆರೆ, ಫೆಬ್ರವರಿ13: "ಚೌಡಮ್ಮನ ಆಣೆಗೂ ನಾನು ವೆಂಕಟ ರೆಡ್ಡಿಗೆ ಓಟ್ ಹಾಕಿದ್ದು'. ಇದು ಗ್ರಾ.ಪಂ ಉಪಾಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಸದಸ್ಯರು ಆಣೆ ಪ್ರಮಾಣ ಮಾಡಿ ಹೇಳುತ್ತಿರುವ ಮಾತಿದು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನ ಸೋತಿದ್ದಕ್ಕೆ ಸದಸ್ಯರಿಗೆ ಗ್ರಾಮಸ್ಥರು ಆಣೆ ಪ್ರಮಾಣ ಮಾಡಿಸಿ, ಮತ ಹಾಕಿದ್ದನ್ನು ಖಚಿತ ಪಡಿಸಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ ಮೇಯರ್ ಚುನಾವಣೆ: ಮೀಸಲಾತಿ ಪಟ್ಟಿ ಪ್ರಕಟ
ಭಾನುವಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟರೆಡ್ಡಿ, ಕಾಂಗ್ರೆಸ್ ನಿಂದ ಚಂದ್ರಪ್ಪ ಸ್ಪರ್ಧೆ ಮಾಡಿದ್ದರು.
ಆದರೆ, 12 ಜನ ಸಂಖ್ಯಾಬಲ ಹೊಂದಿದ್ದರೂ ಚುನಾವಣೆಯಲ್ಲಿ ವೆಂಕಟರೆಡ್ಡಿ ಸೋಲು ಕಂಡಿದ್ದಾರೆ. ಇದರಿಂದ ವೆಂಕಟರೆಡ್ಡಿಗೆ ಮತ ಹಾಕಿಲ್ಲ ಎಂದು ಗ್ರಾಮಸ್ಥರು ಸದಸ್ಯರ ಮೇಲೆ ಸಿಟ್ಟಾಗಿದ್ದು, ಸದಸ್ಯರು ಮತ ಹಾಕಿದ್ದನ್ನು ಖಚಿತಪಡಿಸಿಕೊಳ್ಳಲು ಮುಖಂಡರು ಗ್ರಾಮದ ಶಕ್ತಿ ದೇವತೆ ಚೌಡಮ್ಮನ ಮೇಲೆ ಆಣೆ ಮಾಡಿ ಘಂಟೆ ಬಾರಿಸಿದ್ದಾರೆ.
ಈ ವೇಳೆ ಪ್ರತಿ ಸದಸ್ಯರು ಚೌಡಮ್ಮನ ಮೇಲೆ ಆಣೆ ಮಾಡ್ತೀನಿ, ನಾನು ವೆಂಕಟ ರೆಡ್ಡಿ ಹಾಗೂ ನೇತ್ರಾವತಿಗೆ ಓಟು ಹಾಕಿದ್ದು ಎಂದು ಹೇಳಿ ಘಂಟೆ ಬಾರಿಸಿದ್ದಾರೆ. ಜನರಿಂದ ಚುನಾಯಿತರಾದ ಸದಸ್ಯರು ಈ ರೀತಿ ಆಣೆ ಪ್ರಮಾಣ ಮಾಡುವುದು ಕಾನೂನು ಬಾಹಿರವಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಒಟ್ಟು 23 ಸದಸ್ಯರ ಬಲ ಹೊಂದಿದ್ದ ಭಾನುವಳ್ಳಿ ಗ್ರಾಮ ಪಂಚಾಯತ್ ನಲ್ಲಿ 12 ಬಿಜೆಪಿ, 11 ಕಾಂಗ್ರೆಸ್ ಸದಸ್ಯರ ಬಲ ಹೊಂದಿದೆ. 12 ಮತ ಪಡೆದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನೇತ್ರಾವತಿ ಆಯ್ಕೆ ಆಗಿದ್ದಾರೆ. ಆದರೆ ಅದೇ ಪಕ್ಷದ ವೆಂಕಟರೆಡ್ಡಿ ಸೋತಿದ್ದು, ಸದಸ್ಯರ ಮೇಲೆ ಅಪನಂಬಿಕೆ ಹುಟ್ಟುವಂತೆ ಮಾಡಿದೆ.