ಲಸಿಕೆ ನೀಡದಿದ್ದರೆ ಸಿಎಂ ಮನೆ ಮುಂದೆ ಕೂರೋಣ: ಸಂಸದ ಸಿದ್ದೇಶ್ವರ್ ಎಚ್ಚರಿಕೆ
ದಾವಣಗೆರೆ, ಮೇ 7: ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಯುವಕರು ಲಸಿಕೆ ಪಡೆಯಲು ಬಂದರೆ ಗಲಾಟೆ ಆಗುತ್ತದೆ, ಹೊಡೆದಾಟಗಳು ಶುರುವಾಗುತ್ತವೆ ಎಂದು ಲೋಕಸಭಾ ಸದಸ್ಯ ಜಿ.ಎಂ ಸಿದ್ದೇಶ್ವರ್ ಹೇಳಿದರು.
ದಾವಣಗೆರೆ ಜಿಲ್ಲೆಗೆ ಪ್ರತಿನಿತ್ಯ ಕನಿಷ್ಠ ಅಂದರೂ 40 ರಿಂದ 50 ಸಾವಿರ ಕೊರೊನಾ ಲಸಿಕೆ ಬೇಕು. ಬೇಕಾದರೆ ನೀವು ಹೇಳಿ, ಜಿಲ್ಲೆಯ ಜನಪ್ರತಿನಿಧಿಗಳೆಲ್ಲಾ ಬರುತ್ತೇವೆ, ಸಿಎಂ ಮನೆ ಮುಂದೆ ಕೂರೋಣ. ನೀವು ಹೇಳಿದ್ದನ್ನು ನಾವು ಒಪ್ಪಲು ಆಗುವುದಿಲ್ಲ. ಲಸಿಕೆ ಬೇಕೆಂದರೆ ಬೇಕು ಅಷ್ಟೇ ಎಂದು ಜಿ.ಎಂ ಸಿದ್ದೇಶ್ವರ್ ತಿಳಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಮ್ಮುಖದಲ್ಲಿ ಖಾರವಾಗಿಯೇ ಈ ರೀತಿಯಲ್ಲಿ ಅವರು ಮಾತನಾಡಿದ್ದಾರೆ.
Recommended Video
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 18 ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ. ಆದ್ರೆ, ಜಿಲ್ಲೆಯಲ್ಲಿ ಕನಿಷ್ಠ ಅಂದರೂ ಹತ್ತು ಲಕ್ಷ ಜನ ಲಸಿಕೆ ಹಾಕಿಸಿಕೊಳ್ಳಲು ಬರುತ್ತಾರೆ. ಈಗ ಪೂರೈಕೆಯಾಗುತ್ತಿರುವುದು ಯಾವುದಕ್ಕೂ ಸಾಲಲ್ಲ. 45 ಹಾಗೂ 65 ವರ್ಷ ಮೇಲ್ಪಟ್ಟವರು ಇದ್ದಾರೆ. ಇನ್ನು 12 ರಿಂದ 13 ಲಕ್ಷ ಜನರಿಗೆ ಮೊದಲನೇ ಹಾಗೂ ಎರಡನೇ ಹಂತದ ಕೋವ್ಯಾಕ್ಸಿನ್ ಬೇಕು. ನೀವು ಹದಿನೈದು ಇಪ್ಪತ್ತು ಸಾವಿರ ಲಸಿಕೆ ಕೊಡ್ತೇವೆ ಎಂದರೆ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಹೇಳಿದರು.