ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ದಾವಣಗೆರೆ, ನವೆಂಬರ್ 12: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಜಗಳೂರು ಶಾಸಕ, ನಾಯಕ ಸಮುದಾಯದ ಮುಖಂಡ ಎಸ್.ವಿ.ರಾಮಚಂದ್ರಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಆಗ್ರಹಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ಈವರೆಗೂ ನಾಯಕ ಸಮುದಾಯದವರನ್ನು ಸಚಿವರನ್ನಾಗಿ ನೇಮಿಸಿಲ್ಲ. ಈಗಲಾದರೂ ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪನವರನ್ನು ಸಚಿವರನ್ನಾಗಿ ನೇಮಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ, ವಾಲ್ಮೀಕಿ ನಾಯಕ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು.
ಮಂತ್ರಿ ಸ್ಥಾನಕ್ಕಾಗಿ ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಭಾರಿ ಪೈಪೋಟಿ
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದಿಂದ ದಾವಣಗೆರೆ ಜಿಲ್ಲೆಯಿಂದ ಆರು ಜನ ಶಾಸಕರಾಗಿ ಆಯ್ಕೆಯಾಗಿದ್ದರೂ, ಇವರ ಪೈಕಿ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಹೊರ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಜಿಲ್ಲಾ ಮಂತ್ರಿ ಯಾರ ಕೈಗೂ ಸಿಗದ ಕಾರಣಕ್ಕೆ ಜನರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲವಾಗಿದ್ದಾರೆ ಎಂದು ದೂರಿದರು.
ಸಮಾಜದ ಮುಖಂಡ ಎನ್.ಎಂ.ಆಂಜನೇಯ ಗುರೂಜಿ ಮಾತನಾಡಿ, ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದವರು ಮೂರು ಲಕ್ಷ ಮತದಾರರಿದ್ದರೂ, ಈವರೆಗೂ ಒಮ್ಮೆಯೂ ಸಚಿವ ಸ್ಥಾನ ನೀಡದಿರುವುದು ನೋವಿನ ಸಂಗತಿಯಾಗಿದೆ. ಎಸ್.ವಿ.ರಾಮಚಂದ್ರ ಅವರು ಎಲ್ಲಾ ಧರ್ಮಿಯರ, ಜಾತಿ ಜನಾಂಗದವರ ಪ್ರೀತಿಪಾತ್ರರಾಗಿದ್ದು, ಇವರಿಗೆ ಮಂತ್ರಿಗಿರಿ ನೀಡಿದರೆ, ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.
ಶಾಸಕ ರಾಮಚಂದ್ರ ಅವರನ್ನು ಸಚಿವರನ್ನಾಗಿ ಮಾಡಿಸುವತ್ತ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಗಮನ ಹರಿಸಬೇಕೆಂದು ಒತ್ತಾಯಿಸಿದರು. ರಾಮಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ, ಶೀಘ್ರದಲ್ಲಿಯೇ ವಾಲ್ಮೀಕಿ ನಾಯಕ ಸಮುದಾಯದಿಂದ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
Recommended Video
ಉಪ ಚುನಾವಣೆಯ ಸಂಬಂಧ ಜಾರಿಯಾಗಿದ್ದ ನೀತಿ ಸಂಹಿತೆಯು ತೆರವಾಗಿದ್ದು, ತಕ್ಷಣವೇ ರಾಜ್ಯ ಸರ್ಕಾರ ವಾಲ್ಮೀಕಿ ನಾಯಕ ಸಮುದಾಯಕ್ಕೆ ಪ್ರಸ್ತುತ ನೀಡುತ್ತಿರುವ ಶೇ.7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಐಗೂರು ಹನುಮಂತಪ್ಪ, ಚೇತನ್ ಹಾಜರಿದ್ದರು.