ವಿದೇಶ ತೊರೆದು ಬಂದು ಹುಟ್ಟೂರಲ್ಲೆ ಕಬ್ಬು ಅರೆಯುವ ಭೂಗರ್ಭ ತಜ್ಞ ನಿರಂಜನ್
ದಾವಣಗೆರೆ, ಜುಲೈ 5: ಆಗ್ನೇಯ ಏಷ್ಯಾ ದೇಶಗಳ ವಿವಿಧ ಗಣಿ ಕಂಪನಿಗಳಲ್ಲಿ ಭೂಗರ್ಭ ತಜ್ಞನಾಗಿ ಸೇವೆ ಸಲ್ಲಿಸಿ ಬಂದ ಕಬ್ಬು ಬೆಳೆಗಾರ ರೈತನ ಮಗನೊಬ್ಬ ತನ್ನ ಹುಟ್ಟೂರಿನಲ್ಲಿಯೇ ಆಲೆಮನೆ ನಿರ್ಮಿಸಿ ಗುಣಾತ್ಮಕ ಸಾವಯವ ಬೆಲ್ಲ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ವ್ಯಾಸಂಗ ಮುಗಿಸಿ ವಿದೇಶಿ ಗಣಿ ಕಂಪನಿಗೆ ಸೇರಿಕೊಂಡು 10 ವರ್ಷಕ್ಕೂ ಹೆಚ್ಚು ಕಾಲ ಹಲವಾರು ದೇಶಗಳನ್ನು ಸುತ್ತಾಡಿ ಬಂದಿರುವ ನಿರಂಜನ್ ಕೃಷಿ ಮೇಲಿನ ಪ್ರೀತಿಯಿಂದ ಸ್ವತಃ ತಾವೇ ನಿಂತು ಬೆಲ್ಲ ಉತ್ಪಾದನೆ ಮಾಡುತ್ತಿದ್ದಾರೆ.
ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ
ಚನ್ನಗಿರಿ ತಾಲೂಕು ಕಾರಿಗನೂರು (ಮಾಜಿ ಸಿಎಂ ದಿ. ಜೆ.ಎಚ್ ಪಟೇಲ್ ಅವರ ಊರು) ಗ್ರಾಮದ ಚಂದ್ರಶೇಖರಸ್ವಾಮಿ ಬಸವರಾಜಪ್ಪ-ರುದ್ರಮ್ಮ ದಂಪತಿಯ ಎರಡನೆ ಪುತ್ರ ನಿರಂಜನ್ ತಮ್ಮ ಸ್ವಗ್ರಾಮದಲ್ಲಿರುವ ಜಮೀನಿನಲ್ಲೆ ಆಲೆಮನೆ ನಿರ್ಮಿಸಿ ಮೋಟಾರ್ ಗಾಣದಿಂದ ಕಬ್ಬು ಅರೆದು ಕೊಪ್ಪರಿಗೆಯಲ್ಲಿ ಕುದಿಸಿ ಸ್ವದೇಶಿ ಮಾದರಿಯಲ್ಲಿ ಸಾವಯವ ಬೆಲ್ಲ ಉತ್ಪಾದಿಸುತ್ತಿದ್ದು, ಪತ್ನಿ ವಿಮಲಾ ಕೂಡ ಸಾತ್ ನೀಡುತ್ತಿದ್ದಾರೆ.
ಎತ್ತುಗಳನ್ನು ಪೋಷಿಸಲಾಗದೆ ಅಧುನಿಕ ಯಂತ್ರದ ಕಡೆ ವಾಲಿದ ರೈತ
ಕೊರೊನಾ ವೈರಸ್ ಆಘಾತಕ್ಕೊಳಗಾಗಿ ವಿದೇಶದಲ್ಲಿದ್ದವರು ಸ್ವದೇಶಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ಹುಡುಕಾಟದಲ್ಲಿರುವವರ ಸಂಖ್ಯೆ ಹೆಚ್ಚಾಗಿರುವ ಈ ದಿನಗಳಿಗಿಂತಲೂ ಮೊದಲೇ ವಿದೇಶಿ ದುಡಿಮೆಯ ವ್ಯಾಮೋಹ ತೊರೆದಿರುವ ನಿರಂಜನ್ ತಾವೇ ಕೆಲಸ ಸೃಷ್ಟಿಸಿ ದುಡಿಯುವ ಮೂಲಕ ಮಾಲೀಕರಾಗಬೇಕೆಂಬ ಬಯಕೆ ಹೊಂದಿದ್ದು, ಸುಮಾರು 60 ಜನ ಸ್ಥಳೀಯರಿಗೆ ಕೆಲಸ ಕೊಟ್ಟಿದ್ದಾರೆ.
ಒಂದು ದಿನಕ್ಕೆ 3 ಬಾರಿ ಕಬ್ಬು ಅರೆಯುತ್ತೇವೆ
ಒಮ್ಮೆ ಗಾಣ ಆರಂಭಿಸಿದರೆ 2 ಟನ್ ಕಬ್ಬು ಅರೆಯಲಾಗುತ್ತದೆ. ಇದರಿಂದ 1000 ಲೀಟರ್ ಕಬ್ಬಿನ ಹಾಲು ಬರುತ್ತದೆ. ಇದನ್ನು ಕೊಪ್ಪರಿಗೆಯಲ್ಲಿ ಹದವಾಗಿ ಕುದಿಸಿ, ಬೇಕಾದ ಆಕಾರಕ್ಕೆ ಪಾಕವನ್ನು ಬೆಲ್ಲವಾಗಿಸಲಾಗುತ್ತದೆ. ಕೊನೆಗೆ 190 ರಿಂದ 200 ಕೆಜಿ ಬೆಲ್ಲ ಸಿಗುತ್ತದೆ. ಈ ರೀತಿ ಒಂದು ದಿನಕ್ಕೆ 3 ಬಾರಿ ಕಬ್ಬು ಅರೆಯುತ್ತೇವೆ. ಕಬ್ಬು ಜಾಸ್ತಿ ಇದ್ದಾಗ 2 ಕೊಪ್ಪರಿಗೆಯಲ್ಲಿ ಕುದಿಸಲಾಗುತ್ತದೆ. 1 ಕೊಪ್ಪರಿಗೆಗಾಗಿ ಕೆಲಸ ಮಾಡಲು 30 ಮಂದಿ ಕೆಲಸಗಾರರು ಬೇಕಾಗುತ್ತದೆ ಎನ್ನುತ್ತಾರೆ ನಿರಂಜನ್.
ಪ್ರೇರಣೆ ಏನು
ಆಫ್ರಿಕಾ ದೇಶದಿಂದ ಊರಿಗೆ ಬಂದ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರು ಕೂಡಿ ಕೈಗಾರಿಕಾ ಹಬ್ ಮಾಡುವ ಕುರಿತು ಚರ್ಚಿಸುತ್ತಿದ್ದರು. ಅದರ ಅಂಗವಾಗಿ ಬೆಳಗಾವಿಗೆ ಕ್ಷೇತ್ರ ಪ್ರವಾಸ ಹೋಗಲು ತೀರ್ಮಾನವಾಯಿತು. ಜತೆಗೆ ನಾನೂ ಹೊರಟೆ. ಅಲ್ಲಿ ಗಾಣದ ಮನೆ ನೋಡಿ ನಾವೇ ಕಬ್ಬು ಬೆಳೆಯುತ್ತಿದ್ದು, ಇಂತಹ ಗಾಣದ ಮನೆ ನಾವೇಕೆ ಮಾಡಬಾರದು ಅನ್ನಿಸಿತು. ಕಬ್ಬು ಉತ್ಪಾದನೆ, ಸುಕ್ರೋಸ್, ಎಥಿನಾಲ್ ಹೀಗೆ ತಾಂತ್ರಿಕ ಮಾಹಿತಿಯನ್ನು ಅರಿತುಕೊಂಡು ನನ್ನ ತಂದೆಯೊಂದಿಗೆ ಸಮಾಲೋಚನೆ ಮಾಡಿ ಈ ಕೆಲಸ ಮಾಡಲು ನಿರ್ಧರಿಸಿದೆ. ನನ್ನ ಈ ಕೆಲಸಕ್ಕೆ ಮನೆಯವರೆಲ್ಲರೂ ಸಾಥ್ ನೀಡುತ್ತಿದ್ದಾರೆ ಎಂದು ಹಿನ್ನೆಲೆ ವಿವರಿಸುತ್ತಾರೆ.
ಬೇರೆ ರೈತರಿಂದಲೂ ಕಬ್ಬು ಖರೀದಿ
10 ರಿಂದ 12 ತಿಂಗಳಲ್ಲಿ ಕಟಾವು ಮಾಡಿದ ಕಬ್ಬು, ಬೆಲ್ಲ ಮಾಡಲು ಸೂಕ್ತ. ಆದರೆ ಸಕ್ಕರೆ ಕಾರ್ಖಾನೆಗೆ ಸುಮಾರು 16 ತಿಂಗಳು ದಾಟಿದ ಕಬ್ಬು ಬೇಕಾಗುತ್ತದೆ. ಈ ಮಧ್ಯದ ಅವಧಿಯ 4 ತಿಂಗಳಲ್ಲಿ ಕಬ್ಬು ಬಹುತೇಕ ತೇವಾಂಶ ಕಳೆದುಕೊಂಡಿರುತ್ತದೆ. ಇದು ರೈತರಿಗೆ ನಷ್ಟ, ಕಾರ್ಖಾನೆಗೆ ಲಾಭವಾಗುತ್ತದೆ.
ಮೂಲತಃ ಕಬ್ಬು ಬೆಳೆಗಾರನ ಮಗನಾಗಿರುವುದರಿಂದ ನಮ್ಮ 15 ಎಕರೆ ಹೊಲದ ಕಬ್ಬು ಇರುತ್ತದೆ. ಸಾವಯವ ಮಾದರಿಯಲ್ಲಿ ಬೆಳೆದ ಕಬ್ಬನ್ನು ಮೊದಲು ನುರಿಸುತ್ತೇವೆ. ಅಷ್ಟನ್ನೂ ಖಾಲಿ ಮಾಡಲು ಆಗದ ಕಾರಣ ಸ್ವಲ್ಪ ಕಾರ್ಖಾನೆಗೂ ಕೊಡಲಾಗುತ್ತದೆ. ಅಗತ್ಯಕ್ಕೆ ಬೇಕಾದಷ್ಟನ್ನು ಬೇರೆ ರೈತರಿಂದಲೂ ಕಬ್ಬು ಖರೀದಿಸಲಾಗುತ್ತದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಸಾವಯವ ಬೆಲ್ಲದ ಸ್ವಂತ ಔಟ್ಲೆಟ್
ಸಿದ್ಧಗೊಂಡ ಬೆಲ್ಲವನ್ನು ಹಾವೇರಿ, ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಕಡೆಗೂ ರವಾನಿಸಲಾಗುತ್ತದೆ. ಸಾವಯುವ ಉಂಡಬೆಲ್ಲ, ಬಾನಿಬೆಲ್ಲ, ದೊಡ್ಡ ಮತ್ತು ಸಣ್ಣ ಹರಳು(ಗುಳಿಗೆ)ಬೆಲ್ಲ, ಪುಡಿಬೆಲ್ಲ, ಸಿದ್ಧಮಾಲ್ದಿ, ಕಾಕಂಬಿ ಹೀಗೆ ೮ ಬಗೆಯ ಬೆಲ್ಲದ ಉತ್ಪನ್ನಗಳಿವೆ. ದಾವಣಗೆರೆ ಪಿ.ಜೆ ಬಡಾವಣೆಯ ಯುನಿಟಿ ಆಸ್ಪತ್ರೆ ರಸ್ತೆಯಲ್ಲಿ ದೊಗ್ಗಳ್ಳಿಯವರ ಸಾವಯವ ಬೆಲ್ಲದ ಸ್ವಂತ ಔಟ್ಲೆಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ- 9611116865, 7269320934
ನಿರಂಜನ್ ಅವರಿಗೆ ಮನೆಯವರ ಸಾಥ್
ನಿರಂಜನ್ ಅವರ ಅಣ್ಣ ಪ್ರಸನ್ನ ಮಾತನಾಡಿ, ಎಂ.ಎಸ್ಸಿ ಮುಗಿಸಿ ವಿದೇಶಕ್ಕೆ ಹೋಗಿದ್ದ ನಿರಂಜನ್ ಊರಲ್ಲೆ ಆಲೆಮನೆ ಮಾಡುವುದಾಗಿ ನಿರ್ಧರಿಸಿ ಶುರುಮಾಡಿದ. ಆತನ ಪತ್ನಿ ವಿಮಲಾ ಕೂಡ ಧಾರವಾಡ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ.ಎಸ್ಸಿ ಮುಗಿಸಿ ಉಪನ್ಯಾಸಕಿಯಾಗಿದ್ದು, ಈಗ ಅದನ್ನು ಬಿಟ್ಟು ಪೂರ್ಣಾವಧಿಯಲ್ಲಿ ಆಲೆಮನೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಮನೆಯವರೆಲ್ಲ ಸಾಥ್ ನೀಡುತ್ತಿದ್ದೇವೆ ಎಂದರು.
ಕಾರ್ಮಿಕರ ಜತೆಗೂಡಿ ನಾನೂ ಕೆಲಸ ಮಾಡುತ್ತೇನೆ
ಬೇರೆಯವರ ಕೈ ಕೆಳಗೆ ದುಡಿಯುವ ಬದಲು ಸ್ವಂತ ಕೆಲಸ ಮಾಡುವುದರಲ್ಲಿ ಸುಖವಿದೆ. ಪತಿಗೆ ಬೇಕಾದ ಎಲ್ಲ ಸಹಕಾರ ನೀಡುತ್ತಾ ಕಾರ್ಮಿಕರ ಜತೆಗೂಡಿ ನಾನೂ ಕೆಲಸ ಮಾಡುತ್ತೇನೆ. ನಮ್ಮ ಅತ್ತೆ-ಮಾವ ಸಹ ನೆರವಾಗಿದ್ದಾರೆ ಎಂದು ನಿರಂಜನ್ ಪತ್ನಿ ವಿಮಲಾ ಹೇಳಿದರು.
ಇರಾನ್, ಇಂಡೋನೇಷ್ಯಾ, ಮಾಲ್ಟೇರ್ನಿಯಾ, ನೈಜೀರಿಯಾ, ಕಾಂಗೊ, ಮತ್ತು ಆಫ್ರಿಕಾ ದೇಶದ ಮೈನಿಂಗ್ ಅಂಡ್ ಮಿನರ್ ಕಂಪನಿಗಳಿಗೆ ಕೆಲಸ ಮಾಡಿ ಬಿಟ್ಟು ಬಂದಿದ್ದು, ಈಗಲೂ ಸಂದರ್ಶಕರಾಗಿ ಸೇವೆ ನೀಡುತ್ತಿದ್ದೇನೆ. ಆಲೆಮನೆಯಲ್ಲಿ ಕೆಲಸಗಾರನಾಗಿ, ಮನೆಯಲ್ಲಿ ಮಾಲೀಕನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಿರಂಜನ್.