ಬೆಣ್ಣೆ ನಗರಿ ಜನರ ನಿದ್ದೆಗೆಡಿಸಿದೆ ಬೆಳ್ಳುಳ್ಳಿ ವ್ಯಾಪಾರಿ ಕೊರೊನಾ ಕೇಸ್
ದಾವಣಗೆರೆ, ಮೇ 15: ಬೆಣ್ಣೆ ನಗರಿಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ಪಾಸಿಟೀವ್ ಪ್ರಕರಣಗಳು ಬೆಂಬಿಡದೇ ಕಾಡುತ್ತಿವೆ. ನರ್ಸ್ ಮತ್ತು ವೃದ್ಧನ ಪಾಸಿಟಿವ್ ಕೇಸ್ ನಿಂದ ಜನತೆ ಬೆಚ್ಚಿ ಬಿದ್ದಿದ್ದರು. ಇದರ ಬೆನ್ನಲ್ಲೇ ಹಲವೆಡೆ ವ್ಯಾಪಾರ ಮಾಡಿದ್ದ ಬೆಳ್ಳುಳ್ಳಿ ವ್ಯಾಪಾರಿಯ ಕೊರೊನಾ ಕೇಸ್ ಇದೀಗ ಜನರ ನಿದ್ದೆಗೆಡಿಸಿದೆ.
ನಗರದ ವಿವಿಧಡೆ ಈ ಬೆಳ್ಳುಳ್ಳಿ ವ್ಯಾಪಾರಿ ಸುತ್ತಾಡಿ ಬೆಳ್ಳುಳ್ಳಿ ಮಾರಾಟ ಮಾಡಿದ್ದಾನೆ. ಇದೀಗ ವ್ಯಾಪಾರ ಮಾಡಿದ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ. ಮೇ 10 ರಂದು ಈತ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ. ಮೇ 14ರಂದು ಈ ಬೆಳ್ಳುಳ್ಳಿ ವ್ಯಾಪಾರಿಗೆ ಸೋಂಕು ಇರುವುದು ಧೃಡಪಟ್ಟಿತು.
ಬೆಳ್ಳುಳ್ಳಿ ವ್ಯಾಪಾರಿ ಇದ್ದ ಜಾಗ ಸೀಲ್ ಡೌನ್
ಸದ್ಯ ಬೆಳ್ಳುಳ್ಳಿ ವ್ಯಾಪಾರಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 24 ಜನರ ಪತ್ತೆ ಹಚ್ಚಿ, ಬೆಳ್ಳುಳ್ಳಿ ವ್ಯಾಪಾರಿ ವಾಸವಿದ್ದ ರೈತರ ಬೀದಿಯನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಅಲ್ಲದೇ, ರೈತರ ಬೀದಿಯ ಎಲ್ಲಾ ಜನರನ್ನೂ ಸಹ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ.
ದಾವಣಗೆರೆಗೆ ಕೊರೊನಾ ಬರ ಸಿಡಿಲು: 14 ಹೊಸ ಕೇಸ್ ಪತ್ತೆ
ಸೋಂಕು ಹರಡುವಿಕೆ ತಂದ ಆತಂಕ
ನರ್ಸ್ ನಿಂದ 40 ಜನರಿಗೆ (ಭಾಷಾ ನಗರ, ಇಮಾಂ ನಗರಜಾಲಿ ನಗರ, ಕೆಟಿಜೆ ನಗರ, ಬೇತೂರು ರಸ್ತೆ) ಸೋಂಕು ಹರಡಿದೆ. ಜಾಲಿನಗರದ ಮೃತ ವೃದ್ಧನಿಂದ 28 ಜನರಿಗೆ (ಜಾಲಿ ನಗರ, ಎಸ್ ಎಸ್ಪಿಎಸ್ ನಗರ) ಸೋಂಕು ಹರಡಿದೆ. ಇದಲ್ಲದೇ, 11 ಸಾರಿ (ILI) ಕೇಸ್ ಗಳು, 6 ತಬ್ಲಿಘಿಗಳ ಕೇಸ್ ಹಾಗೂ 1 ಅಜ್ಮೀರ್ ಗೆ ಹೋಗಿ ಬಂದ ಕೇಸ್ ಪತ್ತೆಯಾಗಿದೆ.
ಸೋಂಕು ಹರಡದಿರಲು ರಾಸಾಯನಿಕ ಸಿಂಪಡಣೆ
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಹೆಚ್ಚಳದ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಂದು ಪ್ರದೇಶಗಳಿಗೂ ರಾಸಾಯನಿಕ ಸಿಂಪಡಣೆಗೆ ಜಿಲ್ಲಾಡಳಿತ ಮುಂದಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅಗ್ನಿಶಾಮಕ ವಾಹನದ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಪಿಪಿಟಿ ಕಿಟ್ ಹಾಕಿಕೊಂಡು ಅಗ್ನಿಶಾಮಕ ಸಿಬ್ಬಂಧಿಗಳು ಪ್ರತಿಯೊಂದು ಪ್ರದೇಶಕ್ಕೂ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದಾರೆ. ಐಎಲ್ಐ ಕೇಸ್ ಗಳು ತಲೆನೋವಾಗಿ ಪರಿಣಮಿಸಿದ್ದು, ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ರಾಸಾಯನಿಕ ಸಿಂಪಡಣೆಗೆ ಮುಂದಾಗಿದೆ. ಕಂಟೋನ್ಮೆಂಟ್ ವಲಯದಲ್ಲಿರುವ ಅನಾರೋಗ್ಯದಿಂದ ಬಳಲುತ್ತಿದ್ದ 630 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ.
ಕೊರೊನಾ ವೈರಸ್ ಬಗ್ಗೆ ಅರಿತು ಎಚ್ಚರದಿಂದಿರಿ: ಡಾ.ಕೆ.ಸುಧಾಕರ್
ಟ್ರಾಫಿಕ್ ಪೊಲೀಸ್ ಪೇದೆಗೂ ಕೊರೊನಾ
ದಾವಣಗೆರೆಯಲ್ಲಿ ನಿನ್ನೆ ಮೂರು ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಓರ್ವ ಟ್ರಾಫಿಕ್ ಪೊಲೀಸ್ ಪೇದೆ ಕೂಡ ಸೇರಿದ್ದರು. ಹದಿನೈದು ದಿನಗಳಿಂದ ನಿರಂತರವಾಗಿ ಪ್ರಕರಣಗಳು ಪತ್ತೆಯಾಗುತ್ತಿವೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದ್ದಕ್ಕೆ ಸೋಂಕು ಹರಡಿದೆ ಎನ್ನಲಾಗುತ್ತಿದ್ದು, ಸೋಂಕಿತ ಸಂಪರ್ಕದಲ್ಲಿದ್ದ ಪೊಲೀಸರನ್ನು ಹಾಗೂ ಕುಟುಂಬಸ್ಥರನ್ನು ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿ ಕ್ವಾರೆಟೈನ್ ನಲ್ಲಿಟ್ಟಾರೆ.