ಡಿಜೆ ಸಂಬಂಧ ಪೊಲೀಸರು-ಜನರ ನಡುವೆ ಕಿತ್ತಾಟ; ನೆಲಕ್ಕೆ ಉರುಳಿ ಬಿದ್ದ ಗಣಪ
ದಾವಣಗೆರೆ, ಸೆಪ್ಟೆಂಬರ್ 12: ಡಿಜೆ ಸಂಬಂಧ ಜನರು ಹಾಗೂ ಪೊಲೀಸರ ನಡುವೆ ನಡೆದ ಜಗಳದಲ್ಲಿ ಗಣಪತಿ ಮೂರ್ತಿ ನೆಲಕ್ಕೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ.
ಚನ್ನಗಿರಿಯ ಹಿಂದೂ ಏಕತಾ ಸಮಿತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, 11ನೇ ದಿನವಾದ ಇಂದು ಗಣೇಶ ಮೂರ್ತಿ ವಿಸರ್ಜನೆ ಮಾಡಲು ಮೆರವಣಿಗೆಗೆ ಸಿದ್ಧತೆ ನಡೆದಿತ್ತು. ಈ ಸಂದರ್ಭ, ಮೆರವಣಿಗೆಯಲ್ಲಿ ಡಿಜೆಗೆ ಪರವಾನಗಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಜನರು ಹಾಗೂ ಪೊಲೀಸರ ನಡುವೆ ವಾಗ್ವಾದ ಶುರುವಾಗಿದೆ.
ರಿಪ್ಪನ್ ಪೇಟೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ
ನಡು ರಸ್ತೆಯಲ್ಲಿ ಗಣೇಶ ಮೂರ್ತಿಯನ್ನು ನಿಲ್ಲಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೇ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಕೈವಾಡದಿಂದ ಡಿಜೆಗೆ ಪರವಾನಗಿ ನೀಡುತ್ತಿಲ್ಲ, ಹಿಂದೆ ನಡೆದ ಶಾಂತಿ ಸಭೆಯಲ್ಲಿ ಪರವಾನಗಿ ನೀಡುತ್ತೇವೆ ಎಂದು ಹೇಳಿದ್ದ ಪೊಲೀಸರು ಈಗ ಕೊನೆ ಕ್ಷಣದಲ್ಲಿ ನಿರಾಕರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಬೇಟಿ ನೀಡಿದ್ದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಇದೇ ಸಂದರ್ಭ ರಸ್ತೆಯಲ್ಲಿದ್ದ ಗಣಪತಿ ಮುಗುಚಿ ಬಿದ್ದಿದ್ದು ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಪೊಲೀಸರು ಭಿಗಿ ಭದ್ರತೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.