"ಪ್ರಚಾರಕ್ಕಾಗಿ ಇಷ್ಟೆಲ್ಲಾ ಸುಳ್ಳು ಹೇಳುತ್ತಾರಲ್ಲ ರೇಣುಕಾಚಾರ್ಯ"
ದಾವಣಗೆರೆ, ಏಪ್ರಿಲ್ 28: "ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು 3 ದಿನ ಬೆಂಗಳೂರು, 2 ದಿನ ದಾವಣಗೆರೆಯಲ್ಲಿರುತ್ತಾರೆ. ಆದರೆ ಇವರನ್ನು ಯಾವುದೇ ವೈದ್ಯಕೀಯ ಪರೀಕ್ಷೆ ಮಾಡದೇ ಸಂಚರಿಸಲು ಅನುಮತಿ ನೀಡಲಾಗಿದೆ. ಇದರಿಂದಾಗಿ ಕ್ಷೇತ್ರದ ಜನರು ಭಯಗೊಂಡಿದ್ದಾರೆ" ಎಂದು ಮಾಜಿ ಶಾಸಕ ಶಾಂತನಗೌಡ ಆರೋಪಿಸಿದ್ದಾರೆ.
Recommended Video
ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, "ದೇಶವೇ ಲಾಕ್ ಡೌನ್ನಲ್ಲಿದೆ. ಹೊನ್ನಾಳಿ ಶಾಸಕರು ಮಾತ್ರ ಈ ಸಮಯದಲ್ಲೂ ಹಳ್ಳಿ ಹಳ್ಳಿಗಳಲ್ಲಿ ತಿರುಗುತ್ತಿದ್ದಾರೆ. ದಾವಣಗೆರೆ, ಬೆಂಗಳೂರು ಹೀಗೆ ಸಂಚಾರ ಮಾಡುತ್ತಿದ್ದಾರೆ. ಹೊರ ಜಿಲ್ಲೆಗೆ ಹೋಗಿ ಬಂದರೆ ಅವಲೋಕನದಲ್ಲಿಡಬೇಕಾಗುತ್ತದೆ. ಆದರೆ ಶಾಸಕರು ಮಾತ್ರ ಇದ್ಯಾವುದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಇದಲ್ಲದೇ ಕ್ಷೇತ್ರದಲ್ಲಿ ಶಾಸಕರು ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ. ಸ್ಕ್ರೀನಿಂಗ್ ಮಾಡುತ್ತಾರೆ ಎಂದು ಸಬೂಬು ಹೇಳುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿ ಹೀಗೆ ನಡೆದುಕೊಳ್ಳುತ್ತಿರುವುದು ಬೇಸರ ತಂದಿದೆ" ಎಂದು ಆರೋಪಿಸಿದ್ದಾರೆ.
ಶಾಸಕ ರೇಣುಕಾಚಾರ್ಯಗೆ ಸಿಎಂ ಬಿಎಸ್ವೈ ಹಿಗ್ಗಾಮುಗ್ಗಾ ತರಾಟೆ
"ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಬಡವರಿಗೆ ತೊಂದರೆಯಾಗದಂತೆ ದಾನಿಗಳು, ಸಂಘ ಸಂಸ್ಥೆಗಳು ನೀಡಿರುವ ಕಿಟ್ ಗಳನ್ನು ತಮ್ಮದೆಂದು ಹೇಳಿ ಹಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ 2 ಸಾವಿರ ಜನಕ್ಕೆ ನಿತ್ಯ ಉಪಹಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ 10 ಸಾವಿರ ಆಹಾರ ಕಿಟ್ ನೀಡುತ್ತೇನೆ ಎಂದಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಗೆ ತೆರಳಿ ಕೇಳಿದಾಗ ಸುಳ್ಳು ಎಂದು ತಿಳಿದಿದೆ. ಕೇವಲ ಪ್ರಚಾರಕ್ಕಾಗಿ ಶಾಸಕ ರೇಣುಕಾಚಾರ್ಯ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದುವರೆಗೂ ತಮ್ಮ ಅನುದಾನದಿಂದ ಯಾವುದೇ ನೆರವು ನೀಡಿಲ್ಲ" ಎಂದು ಕಿಡಿಕಾರಿದ್ದಾರೆ.
"ಪಾದರಾಯನಪುರ ಗಲಾಟೆ: ಮನುಕುಲವೇ ತಲೆ ತಗ್ಗಿಸುವಂತ ಕೃತ್ಯ'
"ಹೊನ್ನಾಳಿ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆಯವರ ಸಮಸ್ಯೆಗೆ ಸ್ಪಂದಿಸಿಲ್ಲ. ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದಾರೆ. ಇಷ್ಟಾದರೂ ಶಾಸಕರ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.