ಮಾಜಿ ಸಚಿವ ಡಾ.ವೈ ನಾಗಪ್ಪ ನಿಧನ: ಶಾಸಕರಾಗಿದ್ದು ರೋಚಕ ಇತಿಹಾಸ
ದಾವಣಗೆರೆ, ಅಕ್ಟೋಬರ್ 27: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಡಾ.ವೈ.ನಾಗಪ್ಪ (87) ಮಂಗಳವಾರ ಬೆಳಿಗ್ಗೆ 8.02ಕ್ಕೆ ನಿಧನರಾಗಿದ್ದು, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಸಾವನ್ನಪ್ಪಿದರು.
ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಿಂದ 1985 ರಲ್ಲಿ ಮೊದಲ ಬಾರಿ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಿದರು. 1989, 1999, 2004ರ ಚುನಾವಣೆಯಲ್ಲಿ ಜಯಗಳಿಸಿ ಅಂದಿನ ಸಿಎಂ ಎನ್.ಧರ್ಮಸಿಂಗ್ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಎಸ್ಟಿಗೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಕಾಗಿನೆಲೆ ಶ್ರೀಗಳ ಪಾದಯಾತ್ರೆ
1974 ರಿಂದ 1976ರ ವರೆಗೆ ಮೈಸೂರಿನಲ್ಲಿ ಎಂ.ಡಿ ಅಧ್ಯಯನ, 1976 ರಿಂದ 1979 ದಾವಣಗೆರೆಯಲ್ಲಿ, 1979 ರಿಂದ 1982ರ ವರೆಗೆ ಹರಿಹರದಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕೆ.ಎಸ್.ಎಸ್.ಐ.ಡಿ.ಸಿ, ಎಸ್ಸಿ/ ಎಸ್ಟಿ ಬೋರ್ಡ್ ಚೇರಮನ್ ಆಗಿದ್ದರು.
ಶಾಸಕರಾಗಿದ್ದು ರೋಚಕ ಇತಿಹಾಸ
ಪದೇ ಪದೇ ವರ್ಗಾವಣೆಗೆ ಬೇಸತ್ತು ಅಂದಿನ ಹಾಲಿ ಶಾಸಕ ಎಚ್.ಶಿವಪ್ಪರಿಗೆ ಸೆಡ್ಡು ಹೊಡೆದು ರಾಜಕೀಯ ಪ್ರವೇಶ ಪಡೆದಿದ್ದರು. ಮೂರು ಬಾರಿ ಶಾಸಕರಾಗಿ, ಮಂತ್ರಿಯಾಗಿ ಜನಸೇವೆ ಮಾಡಿದರು.
2008ರಲ್ಲಿ ಮತ್ತೆ ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. ನಂತರ ಬದಲಾದ ರಾಜಕೀಯದಿಂದ ಮತ್ತು ಅನಾರೋಗ್ಯದಿಂದ ರಾಜಕಾರಣದಿಂದ ತೆರೆಮರೆಗೆ ಸರಿದ ಡಾ.ವೈ.ನಾಗಪ್ಪ. ಹರಿಹರ ತಾಲೂಕಿನಲ್ಲಿ ಶೋಷಿತ ಜನಾಂಗಗಳ ನಾಯಕರಾಗಿ ಧ್ವನಿಯಾಗಿದ್ದವರು.
ಹಾಲಿ ಶಾಸಕರಿಗೆ ಸೆಡ್ಡು ಹೊಡೆದಿದ್ದ ಸರ್ಕಾರಿ ವೈದ್ಯ
ಡಾ.ವೈ ನಾಗಪ್ಪನವರು ರಾಜಕಾರಣಕ್ಕೆ ಬಂದಿದ್ದು ಒಂದು ಆಕಸ್ಮಿಕ. 1980ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಆಗ ಶಾಸಕರಾಗಿದ್ದ ಎಚ್.ಶಿವಪ್ಪ ಇವರನ್ನು ಪದೇ ಪದೇ ವರ್ಗಾವಣೆ ಮಾಡಿಸುತ್ತಿದ್ದರು. ಇದಕ್ಕೆ ಬೇಸತ್ತ ನಾಗಪ್ಪ, ಹಾಲಿ ಶಾಸಕನಿಗೆ ಸೆಡ್ಡು ಹೊಡೆದು, "ನೀನು ಮನಸ್ಸು ಮಾಡಿದರೆ ಡಾಕ್ಟರ್ ಆಗುವುದಕ್ಕೆ ಆಗಲ್ಲ. ಆದರೆ ನಾನು ಮನಸ್ಸು ಮಾಡಿದರೆ ಶಾಸಕ ಆಗುತ್ತೇನೆ" ಎಂದು ರಾಜಕಾರಣಕ್ಕೆ ಧುಮುಕಿದರು.
ಎನ್.ಧರ್ಮಸಿಂಗ್ ಅವಧಿಯಲ್ಲಿ ಮಂತ್ರಿ
ಅದೇ ಎಚ್.ಶಿವಪ್ಪ ವಿರುದ್ಧ ಜಯಭೇರಿ ಬಾರಿಸಿ ಮೂರು ಬಾರಿ ಶಾಸಕರಾಗಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಎನ್.ಧರ್ಮಸಿಂಗ್ ಅವಧಿಯಲ್ಲಿ ಮಂತ್ರಿಯಾಗಿ ಜನಸೇವೆ ಮಾಡಿದ್ದಾರೆ. ಹರಿಹರ ವಿಧಾನ ಸಭಾ ಕ್ಷೇತ್ರದ ಅಭಿವೃದ್ದಿ ಪರ್ವದೊಂದಿಗೆ ಶೋಷಿತ ತುಳಿತಕ್ಕೆ ಒಳಗಾದ ಜನರ ಮತ್ತು ಅಲ್ಪಸಂಖ್ಯಾತರ ಮನಸ್ಸಲ್ಲಿ ಅಚ್ಚಾಗಿ ಉಳಿದಿದ್ದಾರೆ.
Recommended Video
ಹರಿಹರದಲ್ಲಿ ಅಂತ್ಯಕ್ರಿಯೆ
ಮೃತ ವೈ.ನಾಗಪ್ಪನವರು ಒಬ್ಬ ಪುತ್ರ, ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅಕ್ಟೋಬರ್ 27, ಮಂಗಳವಾರ ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ.