ಜಗಳೂರು ಬಳಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಪುತ್ರನ ಕಾರು ಅಪಘಾತ
ದಾವಣಗೆರೆ, ಮಾರ್ಚ್ 19: ಮಾಜಿ ಗೃಹ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಪುತ್ರ ರಾಹುಲ್ ಪಾಟೀಲ್ ದುಬಾರಿ ಕಾರು ದಾವಣಗೆರೆಯಲ್ಲಿ ಅಪಘಾತವಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆ ಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಾಹುಲ್ ಕಾರು ಎದುರಿನಿಂದ ಬರುತ್ತಿದ್ದ ಅಪ್ಪೆ ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ಚಾಲನಕನಿಗೆ ಸಣ್ಣ ಗಾಯಗಳಾಗಿವೆ.
ಬಳ್ಳಾರಿಯಲ್ಲಿ ಕಾರು ಅಪಘಾತ; ಕಾರಿನಲ್ಲಿದ್ದುದು ಆರ್ ಅಶೋಕ್ ಮಗ?
ಮಾಜಿ ಸಚಿವರ ಪುತ್ರ ರಾಹುಲ್ ಪಾಟೀಲ್ ನ ಪೋರ್ಶ್ ಕಾರು ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋದ ವೇಳೆ ಎದುರಿನಿಂದ ಬಂದ ಅಪ್ಪೆ ಆಟೋಗೆ ಕಾರು ಗುದ್ದಿದೆ. ಹೀಗಾಗಿ ಅಪಘಾತ ಸಂಭವಿಸಿದೆ. ಅಪ್ಪೆ ಆಟೋ ಚಾಲಕನ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಲ್ಲದೇ ಅಪಘಾತದ ವೇಳೆ ಎಂ.ಬಿ.ಪಾಟೀಲ್ ಪುತ್ರ ರಾಹುಲ್ ಪಾಟೀಲ್ ಕಾರಿನಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.